ಬೆಂಗಳೂರು : ನಾನು ಕ್ಷೇತ್ರದಲ್ಲಿ ದುಡಿದಿದ್ದೇನೆ, ಅದರ ಕೂಲಿಯನ್ನ ಜನರ ಬಳಿ ಕೇಳುತ್ತಿದ್ದೇನೆ, ಮಂಜುನಾಥ್ ಅವರ ಸ್ಪರ್ಧೆ ಅವರ ತೀರ್ಮಾನ, ಮಂಜುನಾಥ್ ಪ್ರಬಲರಿದ್ದರೆ ಜೆಡಿಎಸ್ ಸಿಂಬಲ್ ನಿಂದ ನಿಲ್ಲಿಸಬೇಕಿತ್ತು, ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ಸಂಸದ ಡಿ ಕೆ ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಶಾಸಕರು, ಹಿರಿಯ ಮುಖಂಡರ ಜತೆ ಚರ್ಚೆ ನಡೆಸಿದ ನಂತರ ಮಾತುಕತೆ ನಡೆಸಿದ ಅವರು, ಜ್ಯಾತ್ಯಾತೀತ ಮಹಿಳೆ ಇಂದು ತೆನೆ ಇಳಿಸಿದ್ದಾಳೆ, ದಯವಿಟ್ಟು ನಾನು ಸ್ನೇಹಿತ, ಸಹೋದರನಾಗಿ ಕೇಳ್ತಾ ಇದ್ದೀನಿ, ಸೇವೆ ಮಾಡಲು ನಾನು ಸಿದ್ದ ಇದ್ದೀನಿ ಎಂದು ಕಾರ್ಯಕರ್ತರಿಗೆ ನಾನು ಕರೆ ನೀಡುತ್ತೇನೆ ಎಂದರು.
ಯಾವುದೇ ರಾಗ, ದ್ವೇಷ ಇಲ್ಲ, ನಾನು ಅಭಿವೃದ್ದಿ ಮಾಡಲು ಬಂದದ್ಧೇನೆ, ನೀವು ಸಹಕಾರ ಕೊಡಿ ಅಂತ ಕೇಳುತ್ತಿದ್ದೇನೆ, ಮುಕ್ತ ಮನಸ್ಸಿನಿಂದ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಅಂತೀನಿ, ಯಾರು ಶಸ್ತ್ರ ತ್ಯಾಗ ಮಾಡಿದ್ದಾರೆ ಅವರಿಗೂ ಹೇಳ್ತೇನೆ, ಅಭಿವೃದ್ದಿಗಾಗಿ ನಮ್ಮ ಜೊತೆ ಬನ್ನಿ ಎಂದು ಕರೆನೀಡಿದರು.

ದುಡಿದ ಕಾರ್ಯಕರ್ತರಿಗೆ ರಕ್ಷಣೆ ಕೊಡಲು ಮುಂದಾಗಿದ್ದೇನೆ, ಹಾಗಾಗಿ ಕರೆ ನೀಡುತ್ತಿದ್ದೇನೆ, ಅವರ ಪಕ್ಷ ಪ್ರಬಲವಾಗಿ ಇದ್ಯೋ ಇಲ್ವೋ ಗೊತ್ತಿಲ್ಲ, ಕಾರ್ಯಕರ್ತರ ಜೊತೆ ನಾನು ಹೊಂದಾಣಿಕೆ ಮಾಡಿಕೊಳ್ತೇನೆ ಬರಲಿ ಎಂದರು.
ಚುನಾವಣೆ ಸಂಬಂಧ ಸಭೆ ನಡೆಸಿ, ಕಾರ್ಯತಂತ್ರದ ಕುರಿತು ಚರ್ಚೆಸಿದ್ದೇವೆ, ಯಾವುದನ್ನ ಮಾನದಂಡ ಮಾಡಿಕೊಂಡು ಚುನಾವಣೆ ಎದುರಿಸಬೇಕು, ಹೀಗೆ ಅನೇಕ ವಿಚಾರ ಕುರಿತು ಚರ್ಚೆಯಾಗಿದೆ ಎಂದು ಸುರೇಶ್ ಹೇಳಿದರು.
ಮಂಜುನಾಥ್ ಪ್ರಬಲ ಅಭ್ಯರ್ಥಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿಂಬಲ್, ವ್ಯಕ್ತಿ ಬಗ್ಗೆ ಮಾತನಾಡಲು ಹೋಗಲ್ಲ ಎಂದರು. ಡಿಕೆ ಬ್ರದರ್ಸ್ ನ ಮಣಿಸಲು ಅನೇಕರು ಪಣತೊಟ್ಟಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ತಂತ್ರ, ರಣತಂತ್ರ ರಾಜಕೀಯದ ಒಂದು ಭಾಗ, ನಾನು ಕೆಲವರನ್ನ ಹತ್ತಿರದಿಂದ ನೋಡಿದ್ದೇನೆ, ಅವರಷ್ಟು ದೊಡ್ಡವನಲ್ಲ ನಾನು ಚಿಕ್ಕವನು ಎಂದು ಉತ್ತರಿಸಿದರು.




