ಬೆಂಗಳೂರು, ಏ. 11: ನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ನಾವು ಬದ್ಧರಾಗಿದ್ದೇವೆ. ನಿಮ್ಮ ಮನೆ ಬಾಗಿಲಿಗೆ ಬಂದಿರುವ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ರಾಜರಾಜೇಶ್ವರಿ ನಗರದ ವಿವಿಧ ವಸತಿ ಸಮುಚ್ಚಯಗಳಲ್ಲಿ ನಡೆದ ಮತಯಾಚನೆ ಸಭೆಗಳಲ್ಲಿ ಭಾಗವಹಿಸಿ ಶಿವಕುಮಾರ್ ಅವರು ಗುರುವಾರ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು:

“ನೀರು, ರಸ್ತೆಯ ಸಮಸ್ಯೆಗಳ ಬಗ್ಗೆ ಗಮನವಿದ್ದು, ಶೀಘ್ರದಲ್ಲೇ ಅಧಿಕಾರಿಗಳನ್ನು ಕಳುಹಿಸಿ ನಿಮಗೆ ಪರಿಹಾರ ನೀಡುತ್ತೇವೆ. ಕುಡಿಯುವ ನೀರಿಗಾಗಿ ನಾವು ಮೇಕೆದಾಟು ಪಾದಯಾತ್ರೆ ಮಾಡಿದೆವು. ರಾಜರಾಜೇಶ್ವರಿ ನಗರದಲ್ಲಿ ನಾವು ಸೋತಿದ್ದೇವೆ. ಕುಸುಮಾ ಅವರು ಗೆದ್ದಿದ್ದರೆ ನಿಮ್ಮ ಅರ್ಧ ಸಮಸ್ಯೆ ಇಷ್ಟು ಹೊತ್ತಿಗೆ ಬಗೆಹರಿಯುತ್ತಿತ್ತು. ಆದರೂ ನಾವು ನಿಮ್ಮ ಸೇವೆ ಮಾಡಲು ಹಿಂದೇಟು ಹಾಕುತ್ತಿಲ್ಲ. ನಿಮ್ಮ ಸಹಕಾರ ಇದ್ದಷ್ಟು ನಾವು ಸೇವೆಗೆ ಸಿದ್ಧರಾಗಿರುತ್ತೇವೆ. ಬಿಜೆಪಿ ನಿಮ್ಮ ಯಾವುದೇ ಸಮಸ್ಯೆಗಳನ್ನು ಕಣ್ಣೆತ್ತಿ ಸಹ ನೋಡಿಲ್ಲ. ಸರ್ಕಾರದ ಪ್ರತಿನಿಧಿಯಾಗಿ ನಿಮ್ಮ ಬಳಿ ಬಂದು ಸಮಸ್ಯೆಗಳನ್ನು ಗಮನಿಸಿದ್ದೇನೆ. ಭವಿಷ್ಯದಲ್ಲಿ ನಿಮ್ಮ ಜೊತೆ ಇರುತ್ತೇನೆ. ಹೀಗಾಗಿ ನೀವು ಲೋಕಸಭೆ ಚುನಾವಣೆಯಲ್ಲಿ ನಮಗೆ ಹೆಚ್ಚಿನ ಲೀಡ್ ನೀಡಬೇಕು. ನೀವು ನಿಮ್ಮ ಸ್ನೇಹಿತರಿಗೆ ಹೇಳಿ ಕಾಂಗ್ರೆಸ್ ಗೆ ಮತ ಹಾಕಿಸಬೇಕು.

ಸಂಸದ ಡಿ.ಕೆ.ಸುರೇಶ್ ಅವರು ಕರ್ನಾಟಕದ ಪರವಾಗಿ ಸಂಸತ್ತಿನಲ್ಲಿ ಹೋರಾಟ ಮಾಡಿದ್ದಾರೆ. ರಾಜ್ಯದ ಅತ್ಯಂತ್ರ ಕ್ರಿಯಾಶೀಲ, ಪ್ರಗತಿಪರ ಸಂಸದರಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಏಕೈಕ ಸಂಸದರು. ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟದ ಮೂಲಕ ಕನ್ನಡಿಗರ ತೆರಿಗೆ ಹಣ ನಷ್ಟವಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ. ನಾವು ಬೆಂಗಳೂರಿಗೆ ಹೊಸ ರೂಪ ನೀಡಬೇಕು. ನಿಮ್ಮ ಬದುಕನ್ನು ಕಟ್ಟುವ ರೀತಿಯಲ್ಲಿ ಆಡಳಿತ ನೀಡಬೇಕು. ಯಾವುದೇ ಹಿಂಜರಿಕೆ ಇಲ್ಲದೇ ನಿಮ್ಮ ಸಮಸ್ಯೆಗಳನ್ನು ಮುಕ್ತವಾಗಿ ನಮ್ಮ ಗಮನಕ್ಕೆ ತರಬಹುದು. ನಾನು, ಸುರೇಶ್ ಅವರು ಅದನ್ನು ಬಗೆಹರಿಸುತ್ತೇವೆ.

ಸದ್ಯ ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿದ್ದು, ನಮ್ಮ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಮನ ಗೆದ್ದಿದ್ದು, ಮುಂದಿನ ಅವಧಿಗೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಮಹಿಳೆಯರಿಗೆ ವಾರ್ಷಿಕವಾಗಿ 1 ಲಕ್ಷ, ಯುವಕರಿಗೆ ವಾರ್ಷಿಕ 1 ಲಕ್ಷ ಶಿಷ್ಯ ವೇತನ, ರೈತರ ಸಾಲ ಮನ್ನಾ ಮತ್ತು ಬೆಂಬಲ ಬೆಲೆ, 25 ಲಕ್ಷದವರೆಗೂ ಆರೋಗ್ಯ ವಿಮೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡಿದಂತೆ ರಾಷ್ಟ್ರದಲ್ಲೂ ಮಾಡುತ್ತೇವೆ.
ನಿಮ್ಮ ಸಮಸ್ಯೆಗಳನ್ನು ನಾವು ಬಗೆಹರಿಸಬೇಕೇ ಹೊರತು ದೆಹಲಿಯಿಂದ ಯಾರೂ ಬಂದು ನಿಮ್ಮ ಕಷ್ಟ ಆಲಿಸುವುದಿಲ್ಲ. ನೀವು ಅವರಿಗೆ ಅಕಾಶ ಕೊಟ್ಟಾಗಿದೆ. ಅವಕಾಶ ಕೊಟ್ಟಾಗ ಅವರು ಏನೂ ಮಾಡಿಲ್ಲ. ಈಗ ನೀವು ನಮಗೆ ಅವಕಾಶ ನೀಡಬೇಕು. ನಿಮ್ಮ ಸಹಕಾರ ಕೇಳಿ ನಾನೇ ಖುದ್ದಾಗಿ ಬಂದಿದ್ದೇನೆ.”