ಬೆಂಗಳೂರು ; ಏಳನೇ ವೇತನ ಆಯೋಗದ ಶಿಾರಸು ಜಾರಿ ವಿಚಾರದಲ್ಲಿ ಕೊನೆಗೂ ಸರ್ಕಾರಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಮೂಲ ವೇತನ (ಬೇಸಿಕ್ ಪೇ)ದಲ್ಲಿ ಶೇಕಡ 27.50ರಷ್ಟು ಹೆಚ್ಚಳ ಮಾಡುವಂತೆ ವೇತನ ಆಯೋಗ ನೀಡಿದ್ದ ಶಿಾರಸನ್ನು ಸರ್ಕಾರ ಒಪ್ಪಿದ್ದು, ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಅಂಶ ಪ್ರಸ್ತಾಪಿಸಿದ್ದಾರೆ. ಆಗಸ್ಟ್ 1ರಿಂದ ಅನ್ವಯವಾಗುವಂತೆ ಈ ಪರಿಷ್ಕರಣೆ ಅನುಷ್ಠಾನಕ್ಕೆ ಬರಲಿದೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಶೇ.17ರಷ್ಟು (ಮಧ್ಯಂತರ) ವೇತನ ಹೆಚ್ಚಿಸಿ ಅನುಷ್ಠಾನಕ್ಕೆ ತಂದಿದ್ದರು. ಇದೀಗ ಉಳಿದ ಶೇ.10.5ರಷ್ಟು ಪರಿಷ್ಕರಣೆ ಅನುಷ್ಠಾನವಾಗಲಿದೆ.
ಈ ನಿರ್ಧಾರದಿಂದ ಐದು ಲಕ್ಷ ಸರ್ಕಾರಿ ನೌಕರರು, ಅಷ್ಟೇ ಸಂಖ್ಯೆಯ ಪಿಂಚಣಿದಾರರ ಮೇಲೆ ನೇರ ಪರಿಣಾಮಬೀರಲಿದೆ. ಲೋಕಸಭೆ ಚುನಾವಣೆಗೆ ಮುನ್ನ ವೇತನ ಆಯೋಗದ ಪೂರ್ಣ ವರದಿ ಸಲ್ಲಿಕೆಯಾಗಿತ್ತು. ಆದರೆ, ಚುನಾವಣೆ ನೀತಿ ಸಂಹಿತ ಕಾರಣಕ್ಕೆ ಅನುಷ್ಠಾನ ಸಾಧ್ಯವಾಗಿರಲಿಲ್ಲ.
2022ರ ಜುಲೈನಲ್ಲೇ ಆರನೇ ವೇತನ ಆಯೋಗದ ಅವಧಿ ಮುಕ್ತಾಯವಾಗಿತ್ತು. 2022ರ ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕರಣೆಯಾಗಬೇಕೆಂಬುದು ಸರ್ಕಾರಿ ನೌಕರರ ಬೇಡಿಕೆಯಾಗಿತ್ತು. ಹಾಗೂಹೀಗು 2024ರ ಮೇ ವರೆಗೂ ಎಳೆದಾಟವಾಗಿದ್ದು, 2023ರ ಜನವರಿಯಿಂದಲಾದರೂ ಅನ್ವಯವಾಗುವಂತೆ ಆರ್ಥಿಕ ಅನುಕೂಲ ಆಗಬೇಕೆಂಬುದು ಸರ್ಕಾರಿ ನೌಕರರ ಸಂಘದ ಒತ್ತಾಯವಾಗಿತ್ತು. ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ತೀರ್ಮಾನ ಕೈಗೊಳ್ಳಲು ಅವಕಾಶವಾಗಿರಲಿಲ್ಲ. ಇನ್ನೊಂದೆಡೆ ಬೇಡಿಕೆ ಈಡೇರಿಕೆಗೆ ಸರ್ಕಾರಿ ನೌಕರರ ಸಂಘ, ಸಚಿವಾಲಯ ನೌಕರರ ಸಂಘ ಹೋರಾಟಕ್ಕೂ ಕರೆಕೊಟ್ಟಿದ್ದವು.
ಶೇ.10.5ರಷ್ಟು ವೇತನ ಹೆಚ್ಚಳದಿಂದ ಸರ್ಕಾರದ ಬೊಕ್ಕಸದ ಮೇಲೆ ವಾರ್ಷಿಕ ನೇರವಾಗಿ 20,206 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಈ ಆರ್ಥಿಕ ವರ್ಷದಲ್ಲಿ ನಾಲ್ಕು ತಿಂಗಳು ಕಳೆಯುವ ಕಾರಣ ಹೊರೆ ಅಷ್ಟಾಗಿ ಬಾಧಿಸದು.
ಹಾಗೆಯೇ ಎನ್ಪಿಎಸ್ ನೌಕರರ ಬೇಡಿಕೆ ಬಗ್ಗೆ ಸಂಪುಟದಲ್ಲಿ ಅನೌಪಚಾರಿಕ ಚರ್ಚೆ ನಡೆದಿತ್ತು, ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ.
ಮುಖ್ಯಾಂಶಗಳು
- ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 25000 ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಟ್, ಜೆಇಇ, ಸಿಇಟಿ ತರಬೇತಿಯನ್ನು 12.50 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸುವುದು.
- ರಾಜ್ಯದ 10 ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ಮ್ಯಾಮೊಗ್ರಾಫಿ ಯಂತ್ರ. 4 ಜಿಲ್ಲಾ ಆಸ್ಪತ್ರೆಗಳಲ್ಲಿ ಕಾಲ್ಕ್ಕಾಪಿ ಉಪಕರಣ 10 ಕೋಟಿ ರೂ. ಅಂದಾಜು ಮೊತ್ತದಲ್ಲಿ ಖರೀದಿಸಲು ಒಪ್ಪಿಗೆ.
- 2012ರಲ್ಲಿ ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪೊಲೀಸ್ ಸಿಬ್ಬಂದಿ, ವಕೀಲರು ಮತ್ತು ಮಾಧ್ಯಮದವರ ನಡುವೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಯ ಅಭಿಯೋಜನಾ ಮಂಜೂರಾತಿ ಕೋರಿಕೆ ತಿರಸ್ಕಾರ.
- ಕಲ್ಲು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ಖನಿಜವನ್ನು ತೆಗೆದು ರಾಜಧನವನ್ನು ಪಾವತಿಸದೆ ಸಾಗಾಣಿಕೆ ಮಾಡಿರುವುದಕ್ಕೆ ದಂಡ ವಿಧಿಸುವುದು.
- ಕರ್ನಾಟಕ ಲೋಕಾಯುಕ ಸಂಸ್ಥೆಯ 2022-23ನೇ ಸಾಲಿನ 37ನೇ ಸಂಚಿತ ವಾರ್ಷಿಕ ವರದಿ ಅಂಗೀಕಾರ.
- ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿಗೆ ಎತ್ತಿನಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ 62 ಕೆರೆಗಳಿಗೆ ನೀರನ್ನು ತುಂಬಿಸುವ 299 ಕೋಟಿ ರೂ. ಮೊತ್ತದ ಕಾಂಗಾರಿಗೆ ಅನುಮೋದನೆ.
- ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಅಂತರ್ಜಲ ಎತ್ತಿನಹೊಳೆ ಅಭಿವೃದ್ಧಿ ಸಲುವಾಗಿ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ ನೀರನ್ನು 45 ಕೆರೆಗಳಿಗೆ ತುಂಬಿಸುವ ಕಾಮಗಾರಿಯ 302 ಕೋಟಿ ರೂ. ಮೊತ್ತದ ಅಂದಾಜಿಗೆ ಒಪ್ಪಿಗೆ.
ಪ್ರಸ್ತಾಪಿತ ಮಸೂದೆಗಳು
ಕರ್ನಾಟಕ (ತಿದ್ದುಪಡಿ) ಉಪಖನಿಜ ನಿಯಮಗಳು, ಅನುಮೋದನೆ ನೀಡುವ ಬಗ್ಗೆ. ರಿಯಾಯಿತಿ 2024
ಕರ್ನಾಟಕ ಸರಕು ಮತ್ತು ಸೇವೆಗಳು (ತಿದ್ದುಪಡಿ) ವಿಧೇಯಕ, ಅನುಮೋದನೆ.
ಕರ್ನಾಟಕ ನೀರಾವರಿ (ತಿದ್ದುಪಡಿ) ವಿಧೇಯಕ, 2024ಕ್ಕೆ ಅನುಮೋದನೆ ನೀಡುವುದು
ಕನ್ನಡಿಗರಿಗೆ ಉದ್ಯೋಗ
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ವಿಧೇಯವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರಲ್ಲಿ ಮ್ಯಾನೇಜ್ಮೆಂಟ್ ಹುದ್ದೆಗಳು ಶೇ.50 ಹಾಗೂ ನಾನ್ ಮ್ಯಾನೇಜ್ಮೆಂಟ್ ಶೇ.75ರಷ್ಟು ಹುದ್ದೆಗಳು ಸ್ಥಳೀಯರಿಗೆ ಮೀಸಲಾಗಲಿದೆ. ಈ ಸಂಬಂಧ ವಿಜಯವಾಣಿ ಸೋಮವಾರ ವಿಶೇಷ ವರದಿ ಪ್ರಕಟಿಸಿತ್ತು.
ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಭದ್ರತೆ ನೀಡುವ ಮಂಡಳಿ ಸ್ಥಾಪನೆಗೆ ಸಂಪುಟ ಒಪ್ಪಿಗೆ ನೀಡಿದೆ.
ಬಾಕ್ಸ್…
ಶಾಲಿನಿ ಮುಂದಿನ ಮುಖ್ಯಕಾರ್ಯದರ್ಶಿ?
ರಾಜ್ಯದ ಮುಂದಿನ ಮುಖ್ಯಕಾರ್ಯದರ್ಶಿಯಾಗಿ ಅಭಿವೃದ್ಧಿ ಆಯುಕ್ತರಾಗಿರುವ ಶಾಲಿನಿ ರಜನೀಶ್ ನಿಯೋಜನೆಗೊಳ್ಳುವುದು ಬಹುತೇಕ ಖಚಿತವಾಗಿ. ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಮುಂದಿನ ಮುಖ್ಯಕಾರ್ಯದರ್ಶಿ ಯಾರಾಗಬೇಕೆಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಸಿಎಂಗೆ ಅಧಿಕಾರ ನೀಡಲಾಯಿತು. ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಹೆಸರು ಮುಖ್ಯಕಾರ್ಯದರ್ಶಿ ರೇಸ್ನಲ್ಲಿ ಇತ್ತಾದರೂ ಬಹುತೇಕ ಶಾಲಿನಿ ರಜನೀಶ್ ಅವರಿಗೆ ಅವಕಾಶ ಒಲಿಯುವುದು ನಿಚ್ಚಳವಾಗಿದೆ.
ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಸರ್ಕಾರದ ಪಾತ್ರವಿಲ್ಲ
ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿಲ್ಲ. ಇದರಲ್ಲಿ ಸರ್ಕಾರದ ಪಾತ್ರವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಪ್ರಕರಣದ ಕುರಿತು ವಿವರವಾದ ಮಾಹಿತಿಯನ್ನು ಲಿಖಿತವಾಗಿ ಸಿದ್ಧಪಡಿಸಿಕೊಂಡಿದ್ದ ಸಿಎಂ, ಸಂಪುಟ ಸಹೋದ್ಯೋಗಿಗಳಿಗೆ ವಿತರಿಸಿ, ಒಟ್ಟಾಗಿ ನಿಲ್ಲುವಂತೆ ಕೋರಿದರು.
ರಾಜ್ಯ ಸರ್ಕಾರಿ ನೌಕರರಿಗೆ 1-7- 22ರಿಂದ ಕಾಲ್ಪನಿಕವಾಗಿ ವೇತನ ನಿಗದಿ, 1-8-24ರಿಂದ ಆರ್ಥಿಕ ಸೌಲಭ್ಯವನ್ನು ನೀಡಲು ಹಾಗೂ ವೇತನ ಆಯೋಗ ಶಿಫಾರಸು ಮಾಡಿದ ಶೇ.27.50 ವೇತನ ವೇತನ ನಿಗದಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ
ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸಿದ ಸಿ.ಎಸ್.ಷಡಾಕ್ಷರಿ,ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಬೆಂಗಳೂರು




