ವಿಧಾನಸಭೆ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರ ಕಲ್ಯಾಣದ ಜವಾಬ್ದಾರಿ ಹೊತ್ತಿರುವ ಸಮಾಜ ಕಲ್ಯಾಣ ಇಲಾಖೆ ತನ್ನ ಕರ್ತವ್ಯ ನಿರ್ವಹಣೆ ಮತ್ತು ಹೊಣೆಗಾರಿಕೆಯಲ್ಲಿ ವಿಫಲವಾಗಿದೆ.
ಇಲಾಖೆಯ ಕೆಲ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಹೇಳಿದೆ. ಲೋಪ ಎಸಗಿ ಕರ್ತವ್ಯ ನಿರ್ವಹಣೆಯಲ್ಲಿ ಎಡವಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷರಾಗಿರುವ ಸಮಿತಿಯ ವರದಿಯನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಗುತ್ತಿರುವ ಲೋಪಗಳು ಬೆಳಕಿಗೆ ಬಂದಿವೆ.

ಬಜೆಟ್ನಲ್ಲಿ ಘೋಷಿಸಿದಂತೆ ಹಣ ಬಿಡುಗಡೆಯಾಗಿದ್ದರೂ ಕೂಡ ಸಕಾಲದಲ್ಲಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಎಡವಲಾಗಿದೆ.ಇದು ಎಲ್ಲ ನಿಗಮಗಳಲ್ಲಿ ಕಂಡು ಬಂದಿರುವ ವೈಫಲ್ಯತೆಯಾಗಿದೆ ಎಂದು ವರದಿ ಹೇಳಿದೆ.
ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ.
ಅಧಿಕಾರಿಗಳು ಉದಾಸೀನತೆ ಮತ್ತು ಬೇಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ಆಹಾರ ಸಾಮಗ್ರಿಗಳ ಟೆಂಡರ್ಅನ್ನು ಪರಿಷ್ಕರಿಸದೇ ಎರಡೂವರೆ ವರ್ಷಗಳಿಂದ ಒಬ್ಬರೇ ಗುತ್ತಿಗೆದಾರರು ಮುಂದುವರಿಯುವಂತೆ ಮಾಡಿದ್ದಾರೆ.
ಇದು ಅಕ್ರಮ ಎಂದು ಸಮಿತಿ ವಿವರಿಸಿದೆ.ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಕಂಪ್ಯೂಟರ್ ವ್ಯವಸ್ಥೆ ಇಲ್ಲ. ಶಿಕ್ಷಕರ ಕೊರತೆ ಇದೆ.ಅತಿಥಿ ಶಿಕ್ಷಕರಿಂದ ಇವನ್ನು ನಡೆಸುತ್ತಿರುವುದರಿಂದ ಶಿಕ್ಷಣದ ಮೇಲೆ ಪರಿಣಾಮ ಆಗುತ್ತಿದೆ.
ನಿಗಮಗಳಿಗೆ ಬಿಡುಗಡೆ ಮಾಡಿರುವ ಅನುದಾನದ ಮೊತ್ತವನ್ನು ಖರ್ಚು ಮಾಡದೇ ಪಿಡಿ ಖಾತೆಗಳಲ್ಲಿ ಉಳಿಸಿಕೊಂಡಿರುವುದರಿಂದ ಮಕ್ಕಳಿಗೆ ಅಗತ್ಯವಾದ ಸೌಕರ್ಯಗಳನ್ನು ಒದಗಿಸುವಲ್ಲಿ ಹಿನ್ನಡೆಯಾಗಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.




