ಹುಬ್ಬಳ್ಳಿ: ರಾಷ್ಟ್ರಧ್ವಜ ನಿರ್ಮಾಣಕ್ಕೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್)ಯಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆಯಾದ ಹುಬ್ಬಳ್ಳಿಯ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ರಾಷ್ಟ್ರ ಧ್ವಜ ತಯಾರಿಕೆಯಲ್ಲಿ ತನ್ನದೇ ಆದ ಸಿದ್ಧ ಹಸ್ತ ಮೂಡಿಸಿದೆ. ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕೃತವಾಗಿ ರಾಷ್ಟ್ರಧ್ವಜಗಳನ್ನು ಸರಬರಾಜು ಮಾಡುವ ಹುಬ್ಬಳ್ಳಿಯ ಈ ಸಂಘ, ಪ್ರಸಕ್ತ ವರ್ಷ ಆ. 14ರೊಳಗಾಗಿ ಕೋಟ್ಯಾಂತರ ಮೌಲ್ಯದ ಸಾವಿರಾರು ಧ್ವಜಗಳನ್ನು ತಯಾರಿಸಿ ಮಾರಾಟ ಮಾಡಲು ಮುಂದಾಗಿದೆ.

ಹೌದು. ಈ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಶೇ.34 ರಷ್ಟು ಉತ್ಪಾದನೆ ಹೆಚ್ಚಿದೆ. 1981-82ರಲ್ಲಿ ಭೀಕರ ಬರಗಾಲಕ್ಕೆ ತುತ್ತಾದ ಬಾಗಲಕೋಟ ಜಿಲ್ಲೆಯಲ್ಲಿ ಆರಂಭವಾದ ಗ್ರಾಮೋದ್ಯೋಗ ಸಂಘ, 27 ಗ್ರಾಮಗಳ 2,500 ಜನರಿಗೆ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಿತ್ತು. ಸಂಘದ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ ಮಾಗಡಿ ಅವರ ಕನಸಿನ ಕೂಸಾದ ಸಂಘ ಇಂದು ಖಾದಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇದೇ ಸಮಯದಲ್ಲಿ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಆರಂಭವಾದ ಖಾದಿ ಸಂಸ್ಥೆ ಅಸ್ತಿತ್ವ ಕಳೆದುಕೊಂಡಿದ್ದು, ಹುಬ್ಬಳ್ಳಿಯ ಸಂಘ ಮಾತ್ರ ಉತ್ತುಂಗಕ್ಕೇರಿದೆ. ಒಟ್ಟು 27 ಕೇಂದ್ರಗಳಲ್ಲಿ ಸ್ವಂತ ಕಟ್ಟಡ ಹೊಂದಿರುವ ಸಂಘವು ಜಾತಿ- ಜನಾಂಗದ ಎಲ್ಲೆ ಮೀರಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದೆ. ಅಲ್ಲದೇ ಕೋವಿಡ್ ನಂತರದಲ್ಲಿ ವ್ಯಾಪಾರ ವಹಿವಾಟು ಜೋರಾಗಿಯೇ ನಡೆದಿದೆ.


ಇನ್ನೂ ಬಾಗಲಕೋಟ ಜಿಲ್ಲೆಯ ತುಳಸಿಗೇರಿ, ಗದ್ದನಕೇರಿ, ಸಿಮಿಕೇರಿ, ಜಾಲಿಹಾಳ ಮತ್ತು ಬೇಲೂರು ಗ್ರಾಮಗಳಲ್ಲಿ 50 ಮಗ್ಗ, 90 ಚರಕಗಳು ಇದ್ದು, 165 ಜನರು ನೂಲುವ ಕೆಲಸದಲ್ಲಿ ತೊಡಗಿದ್ದಾರೆ. ಹುಬ್ಬಳ್ಳಿಯ ಕೇಂದ್ರದಲ್ಲಿ 25-30 ಜನರು ಹೊಲಿಗೆ, ಟ್ಯಾಗಲ್ಸ್ ಹಾಕುವ ಕಾಯಕದಲ್ಲಿ ನಿರತರಾಗಿದ್ದಾರೆ. 100 ಜನ ಆಡಳಿತ ಸಿಬ್ಬಂದಿ ಇದ್ದಾರೆ. ಖಾದಿ ಬಟ್ಟೆ, ಧ್ವಜ ಮಾತ್ರವಲ್ಲದೇ ಖಾದಿ ಪಾಲಿಸ್ಟರ್, ಮಸ್ಲಿಂವ್ಖಾದಿ, ನೂಲು, ಜಮಖಾನ್, ಬೆಡ್ಶೀಟ್ನಂತಹ ಅನೇಕ ವಸ್ತುಗಳ ನೇಯ್ಗೆ ಇಲ್ಲಿಯೇ ಆಗುತ್ತಿದ್ದು, ಒಟ್ಟು 1,200 ಜನರು ಉದ್ಯೋಗ ಕಂಡುಕೊಂಡಿದ್ದಾರೆ.
ಖಾದಿ ಗ್ರಾಮೋದ್ಯೋಗ ಕ್ಷೇತ್ರ ಕುಂಟುತ್ತ ಸಾಗುತ್ತಿದ್ದ ವೇಳೆ ಬೆಂಗೇರಿ ಖಾದಿ ಸಂಘದ ಸಾಧನೆ ರಾಜ್ಯದ ನೇಕಾರರಲ್ಲಿ ಆಶಾಕಿರಣ ಮೂಡಿಸಿದೆ.


ಒಟ್ಟಿನಲ್ಲಿ ಸ್ವಾತಂತ್ರ್ಯ ನಂತರ ದೇಶದ ಎಲ್ಲ ರಾಜ್ಯಗಳ ಧ್ವಜಗಳಿಗೆ ಧಾರವಾಡ ತಾಲೂಕಿನ ಗರಗ ಖಾದಿ ಕೇಂದ್ರದಿಂದ ಬಟ್ಟೆ ಪೂರೈಕೆ ಆಗುತ್ತಿತ್ತು. ಮುಂಬಯಿ ಮೂಲದ ಖಾಸಗಿ ಸಂಸ್ಥೆಯೊಂದು ಧ್ವಜಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿತ್ತು. ಆದರೆ, 2004ರಲ್ಲಿ ಬಿ.ಎಸ್. ಪಾಟೀಲ ಅವರು ಹುಬ್ಬಳ್ಳಿಯ ಬೆಂಗೇರಿ ಖಾದಿ ಸಂಘದ ಅಧ್ಯಕ್ಷರಾದ ನಂತರ ಇಲ್ಲಿ ರಾಷ್ಟ್ರಧ್ವಜ ನಿರ್ಮಾಣದ ಕಲ್ಪನೆ ಚಿಗುರೊಡೆಯಿತು.




