G PARAMESHWARA ON CASTE CENSUS: ಜಾತಿಗಣತಿ ವರದಿ ಬಗ್ಗೆ ಚರ್ಚೆಯಾಗದಿದ್ದರೆ ಸರ್ಕಾರದ‌ ಮೇಲೆ ಆಪಾದನೆ ಬರುತ್ತದೆ: ಗೃಹ ಸಚಿವ ಪರಮೇಶ್ವರ

ಬೆಂಗಳೂರು, ಅಕ್ಟೋಬರ್ 22:- ಜಾತಿಗಣತಿ ವರದಿಯಲ್ಲಿ ಏನು ಬಂದಿದೆ ಎಂಬುದು ಜನಸಮುದಾಯಕ್ಕೆ ಗೊತ್ತಾಗಬೇಕು. ಈ ಬಗ್ಗೆ ಚರ್ಚೆಯಾಗದಿದ್ದರೆ, ವರದಿಯನ್ನೇ ಮುಚ್ಚಿಹಾಕಿದರು ಎಂಬ ಆಪಾದನೆಗಳು ಸರ್ಕಾರದ‌ ಮೇಲೆ ಬರುತ್ತವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದ ತಮ್ಮ‌ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿಯನ್ನು ಸಚಿವ‌ ಸಂಪುಟದ ಮುಂದೆ ತಂದು, ಸಾಧಕ-ಬಾಧಕಗಳನ್ನು ಚರ್ಚಿಸಲಾಗುವುದು. ತದನಂತರ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ‌ ಎಂದರು.

ಜಾತಿಗಣತಿ ವರದಿಗೆ 160 ಕೋಟಿ ರೂ. ಖರ್ಚು ಮಾಡಿ, ಜನಸಮುದಾಯದ ಮುಂದೆ ಇಡದೇ ಹೋದರೆ ಹಣ ಖರ್ಚು ಮಾಡಿರುವುದು ಪ್ರಯೋಜನವಾಗುವುದಿಲ್ಲ. ವರದಿಯಲ್ಲಿ ಏನು ಬಂದಿದೆ ಎಂಬುದರ ಕುರಿತಾದರು ಜನರಿಗೆ ಗೊತ್ತಾಗಬೇಕು. ಇಲ್ಲವಾದರೆ ಮುಚ್ಚಿ ಹಾಕಿದರು ಅಂತೆಲ್ಲ ಸರ್ಕಾರದ ಬಗ್ಗೆ ಆಪಾದನೆಗಳು ಬರುತ್ತದೆ ಎಂದು ಹೇಳಿದರು.

ಜಾತಿಗಣತಿ ವರದಿ ಜಾರಿ ಮಾಡುವುದು ಬೇರೆ ವಿಚಾರ. ಅದರ ಮಾಹಿತಿ ಹೊರಗಡೆ ಬರಬೇಕಲ್ಲವೇ? ಜಾರಿ ಮಾಡಲು ಆಗುವ ತೀರ್ಮಾನಗಳು ಬೇರೆಬೇರೆ ರೀತಿಯಲ್ಲಿ ಆನಂತರ ಆಗುತ್ತವೆ. ಯಾರು ಕೂಡ ಇದರ ಬಗ್ಗೆ ಆತಂಕ‌ಪಡುವ ಅಗತ್ಯವಿಲ್ಲ ಎಂದರು

ಪಂಚಮಸಾಲಿ, ಒಳ ಮೀಸಲಾತಿ ಮತ್ತು ಜಾತಿಗಣತಿ ವರದಿ ಕುರಿತು ಪ್ರತಿಕ್ರಿಯಿಸಿ, ಎಲ್ಲವನ್ನು ನಿಭಾಯಿಸುವ ಸಾಮಾರ್ಥ್ಯ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ. ನಾವೆಲ್ಲರು ಸಹ ಜನಸಮುದಾಯದ ವಿಚಾರಧಾರೆಗಳನ್ನು ಯಾವ ರೀತಿ ತೀರ್ಮಾನ ಮಾಡಬೇಕು ಎಂಬುದರ ಕುರಿತು ಚರ್ಚೆ ಮಾಡಿ, ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಮೀಸಲಾತಿ ಶೇ. 50 ಮೀರಿ ಹೋಗಬಾರದು ಎಂಬ ಆದೇಶವಿದೆ. ಕೆಲ ರಾಜ್ಯಗಳಲ್ಲಿ ಶೇ.50ರಷ್ಟು ಮೀರಿ ಹೋಗಿದ್ದಾರೆ. ತಮಿಳುನಾಡಿನವರು ಶೇ. 69 ಮೀಸಲಾತಿಯನ್ನು ಕಾನೂನಾತ್ಮಕವಾಗಿ ಮಾಡಿದ್ದಾರೆ. ಸಂವಿಧಾನದ ಶೆಡ್ಯೂಲ್ಡ್ 9ಕ್ಕೆ ಸೇರಿಸಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಸಹ ಬೇರೆಬೇರೆ ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಅದನ್ನೆಲ್ಲ ಮಾಡಬೇಕಾದರೆ ಶೇ.50ರಷ್ಟು ಮೀರಿ ಹೋಗಬೇಕಾಗುತ್ತದೆ ಎಂದು ಹೇಳಿದರು.

ಸಿ‌.ಪಿ.ಯೋಗೇಶ್ವರ್ ಪಕ್ಷಕ್ಕೆ ಬರುವ ವಿಚಾರ ಮಾಹಿತಿ ನನಗೆ ಇಲ್ಲ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ‌ ಗೆಲ್ಲಲು ರಣನೀತಿ ಮಾಡುತ್ತಿದ್ದೇವೆ. ಸಿ.ಪಿ.ಯೋಗೇಶ್ವರ್ ನನಗೆ ಆತ್ಮೀಯ ಸ್ನೇಹಿತ. ಹಿಂದೆ ನಮ್ಮ ಪಕ್ಷದಲ್ಲಿದ್ದಾಗ ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ಅವರು ಪಕ್ಷ ಸೇರ್ಪಡೆ ಆಗುವುದು ಕೆಪಿಸಿಸಿ ಅಧ್ಯಕ್ಷರು ಮತ್ತು ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ. ಡಿ.ಕೆ.ಸುರೇಶ್ ಅವರಿಗೆ ಸ್ಪರ್ಧಿಸುವಂತೆ ನಾವೆಲ್ಲ ಒತ್ತಾಯಿಸಿದ್ದೇವೆ. ಹೈಕಮಾಂಡ್ ಯಾರನ್ನು ಅಭ್ಯರ್ಥಿ ಮಾಡುತ್ತದೆ ಎಂಬುದನ್ನು ನೋಡಬೇಕು ಎಂದು ಹೇಳಿದರು.

More News