ಬೆಂಗಳೂರು : ಆಪರೇಷನ್ ಕಮಲದ ಮೂಲಕ ರಾಜ್ಯ ಸರ್ಕಾರವನ್ನು ಪತನ ಮಾಡುವ ಬಿಜೆಪಿ ಕುತಂತ್ರಕ್ಕೆ ಕಾಂಗ್ರೆಸ್ ಶಾಸಕರು ಬಲಿಯಾಗುವುದಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ರಾಜ್ಯ ಸರ್ಕಾರವನ್ನು ಅಸ್ಥಿರ ಮಾಡುವ ಪ್ರಯತ್ನಗಳ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸರ್ಕಾರ ಅಭದ್ರ ಮಾಡೊಕ್ಕೆ ಬಿಜೆಪಿ ಯಾವ ಮಟ್ಟಕ್ಕೆ ಇಳಿಯುತ್ತಿದ್ದಾರೆ ಎಂದರು.
ಇವರ ಕುತಂತ್ರಕ್ಕೆ ನಮ್ಮ ಶಾಸಕರು ಯಾರು ಒಳಗಾಗಲ್ಲ. ಆ ಕಡೆ ನಮ್ಮ ಶಾಸಕರು ತಲೆ ಕೂಡ ಹಾಕಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಇದೇ ಸಂದರ್ಭದಲ್ಲಿ, ಕೋವಿಡ್ ಹಗರಣ ಬಗ್ಗೆ ನಿವೃತ್ತ
ನ್ಯಾ. ಮೈಕಲ್ ಡಿ ಕುನ್ಹಾ ವರದಿ ಬಗ್ಗೆ ಮಾತನಾಡಿ, ಕೋವಿಡ್ ಜಗತ್ತಿಗೆ ಬಂದ ದೊಡ್ಡ ಗಂಡಾತರ. ಆಗ ಬಿಜೆಪಿ ಯಾವ ರೀತಿ ಆಡಳಿತ ಮಾಡಿದ್ರು. ಆಗ ರಾಜ್ಯದಲ್ಲಿ ಡೆತ್ ಆಡಿಟ್ ಅಂತಿತ್ತು, ಅದನ್ನ ಬಿಜೆಪಿ ಸರ್ಕಾರ ತೆಗೆದು ಹಾಕಿತ್ತು. ಈ ಹಗರಣದ ಬಗ್ಗೆ ಜಸ್ಟೀಸ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ವರದಿ ಕೊಟ್ಡಿದ್ದಾರೆ. ಅದನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸುತ್ತೇವೆ ಎಂದರು.
ಮುಡಾದಲ್ಲಿ ವಿಚಾರದಲ್ಲಿ ಸರ್ಕಾರವನ್ನು ಏನೂ ಮಾಡಲು ಸಾಧ್ಯವಾಗಿಲ್ಲ. ವಾಲ್ಮೀಕಿ ಪ್ರಕರಣವನ್ನ ಸಿಬಿಐಗೆ ಕೊಡಬೇಕೆಂದು ಹೋಗಿ ಮುಖಭಂಗ ಅಗಿದೆ. ಹೀಗಾಗಿ ನಮ್ಮ ಸರ್ಕಾರವನ್ನು ಅಭದ್ರ ಮಾಡಲು ಹೋಗಿದ್ದಾರೆ.ಅದು ಯಾವುದು ಆಗಲ್ಲ ಎಂದರು.




