ಬೆಂಗಳೂರು : ಕೆ ಎನ್ ರಾಜಣ್ಣ ವಿರುದ್ಧ ನಡೆದ ಹನಿಟ್ರ್ಯಾಪ್ ಪ್ರಯತ್ನದ ಹಿಂದೆ ಎಷ್ಟೇ ಪ್ರಭಾವಿ ಇರಲಿ,ಯಾರನ್ನೂ ರಕ್ಷಣೆ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. ಆದರೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.
ಕೆ.ಎನ್ ರಾಜಣ್ಣ ನಮ್ಮ ಸಚಿವರು,ಎಸ್ ಟಿ ಸಮುದಾಯದ ಹಿರಿಯ ನಾಯಕ. ಅವರು ಸದನದಲ್ಲಿ ಹನಿಟ್ರ್ಯಾಪ್ ಬಗ್ಗೆ ಮಾತನಾಡುವಾಗ ಯಾರ ಹೆಸರನ್ನು ಹೇಳಲಿಲ್ಲ. ಬದಲಾಗಿ ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದಿದ್ದಾರೆ. ಅದಕ್ಕೆ ಗೃಹ ಸಚಿವರು ಉತ್ತರ ಕೊಟ್ಟಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲಿದೆ ಎಂದರು.
ಯಾರನ್ನು ರಕ್ಷಣೆ ಮಾಡುವುದು, ಯಾರಿಗೆ ರಕ್ಷಣೆ ಕೊಡದೆ ಇರುವ ಕೆಲಸ ನಾವು ಮಾಡಲ್ಲ. ಯಾರ ಹಕ್ಕುಚ್ಯುತಿ ಮಾಡುವುದು ಮಾಡಲ್ಲ.
ಕಾನೂನು ರೀತಿಯಲ್ಲಿ ಕ್ರಮ ಆಗಬೇಕು ತಪ್ಪು ಮಾಡಿದವರಿಗೆ. ರಾಜಣ್ಣ ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ನಡೆಯಲಿದೆ ಎಂದು ತಿಳಿಸಿದರು.
ಯಾರಿಗೂ ರಕ್ಷಣೆ ಮಾಡಲ್ಲ, ನಮ್ಮ ಪಕ್ಷದವರು ಇರಲಿ ನಿಮ್ಮ ಪಕ್ಷವೇ ಇರಲಿ. ಯಾರೇ ಮಾಡಿದರು ತಪ್ಪೇ. ಸದನದಲ್ಲಿ ಸಚಿವರು ಹೇಳಿದಾಗ ಸುಮ್ಮನಿರಲು ಆಗಲ್ಲ. ಎಲ್ಲರಿಗೂ ರಕ್ಷಣೆ ಕೊಡುವ ಜವಾಬ್ದಾರಿ ನಮ್ಮದು. ಯಾರ ಹೆಸರು ರಾಜಣ್ಣ ಹೇಳಿಲ್ಲ, ಹೇಳಿದ್ದರೆ ಕ್ರಮ ಕೈಗೊಳ್ಳಬಹುದಿತ್ತು ಎಂದು ಹೇಳಿದರು.
ನ್ಯಾಯಾಂಗ ತನಿಖೆ ನೀಡಿ!
ಹನಿಟ್ರ್ಯಾಪ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಿ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗ್ರಹಿಸಿದರು.ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಇದರ ತನಿಖೆ ಆಗಲಿ ಎಂದು ಆಗ್ರಹಿಸಿದರು.
ರಾಜಣ್ಣ ದೂರು ನೀಡಿಲ್ಲ!
ಸದನದಲ್ಲಿ ಕೆ ಎನ್ ರಾಜಣ್ಣ ಹನಿಟ್ರ್ಯಾಪ್ ಬಗ್ಗೆ ಹೇಳಿದ್ದಾರೆ.ಆದರೆ ಈವರೆಗೆ ರಾಜಣ್ಣ ದೂರು ನೀಡಿಲ್ಲ. ದೂರು ಬಂದ ಕೂಡಲೇ ಮುಂದಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಡಾ. ಜಿ ಪರಮೇಶ್ವರ್ ಅವರು ಸದನದಲ್ಲಿ ಭರವಸೆ ನೀಡಿದರು.
ಸಿಎಂ ಹಾಗೂ ಗೃಹ ಸಚಿವರ ಉತ್ತರಕ್ಕೆ ತೃಪ್ತಿಯಾಗದ ಬಿಜೆಪಿ ಸದಸ್ಯರು ಗದ್ದಲ ಉಂಟು ಮಾಡಿದರು. ಕೂಡಲೇ ಇದರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.




