ಬೆಂಗಳೂರು : ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಮಾಡಿರುವ ಸಮೀಕ್ಷೆ ಇದೀಗ ಕಾಂಗ್ರೆಸ್ ಸರ್ಕಾರವನ್ನು ತೀವ್ರ ಮುಜುಗರ ಕ್ಕೀಡಾಗುವಂತೆ ಮಾಡಿದೆ.
ರಾಜ್ಯದ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧೀನದಲ್ಲಿನ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮೈಸೂರು ಮೂಲದ ಗ್ರಾಸ್ರೂಟ್ಸ್ ರಿಸರ್ಚ್ ಆ್ಯಂಡ್ ಅಡ್ವೊಕಸಿ ಮೂವ್ಮೆಂಟ್’ (ಜಿಆರ್ಎಎಎಂ) ಸಂಸ್ಥೆ ಮೂಲಕ 2025ರ ಮೇ ತಿಂಗಳಿನಲ್ಲಿ ಇವಿಎಂ ವಿಶ್ವಾಸಾರ್ಹತೆ ಮೇಲೆ ಸಮೀಕ್ಷೆ ನಡೆಸಿತ್ತು. ರಾಜ್ಯದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ ಜನರಿಂದ ಇವಿಎಂ ಯಂತ್ರಗಳು ನಿಖರ ಫಲಿತಾಂಶ ಕೊಡುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇವಿಎಂ ಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇವಿಎಂ ವಂಚನೆ, ವೋಟ್ ಚೋರಿ ಬಗ್ಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟ್ರಾದ್ಯಂತ ಹೋರಾಟ ನಡೆಸುತ್ತಿದೆ. ಇದರ ಮಧ್ಯೆ ಸಮೀಕ್ಷೆ ಇವಿಎಂಗಳ ಮೇಲಿನ ನಂಬಿಕೆ ಜನರಲ್ಲಿ ಹೆಚ್ಚಾಗಿದೆ ಎಂದು ಹೇಳಿರುವ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಪ್ರಕಟಿಸಿರುವ ಸಮೀಕ್ಷಾ ವರದಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿದೆ.
ಇವಿಎಂ ಸಮೀಕ್ಷೆಯಲ್ಲೇನಿದೆ?:
ಮೈಸೂರು ಮೂಲದ ಗ್ರಾಸ್ರೂಟ್ಸ್ ರಿಸರ್ಚ್ ಆ್ಯಂಡ್ ಅಡ್ವೊಕಸಿ ಮೂವ್ಮೆಂಟ್’ (ಜಿಆರ್ಎಎಎಂ) ಸಂಸ್ಥೆ ಮೂಲಕ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಮತ್ತು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸಹಭಾಗಿತ್ವದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಇವಿಎಂಗಳು ನಿಖರ ಫಲಿತಾಂಶ ನೀಡುತ್ತವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ 5,100 ಜನರ ಪೈಕಿ ಶೇ.83.61ರಷ್ಟು ಜನರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು,ಬೆಳಗಾವಿ, ಕಲಬುರಗಿ ಮತ್ತು ಮೈಸೂರು ಕಂದಾಯ ವಿಭಾಗಗಳಲ್ಲಿ ಸಮೀಕ್ಷೆ ನಡೆಸಿದೆ.ಈ 4 ಕಂದಾಯ ವಿಭಾಗಗಳ 102 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. ಸಮೀಕ್ಷೆಯಲ್ಲಿ 5,100 ಮಂದಿ ಭಾಗಿಯಾಗಿದ್ರು.ಈ ಪೈಕಿ ಶೇ.83.61ರಷ್ಟು ಮಂದಿ ಮತಯಂತ್ರದ ಪರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವಿಎಂಗಳು ನಿಖರ ಫಲಿತಾಂಶ ನೀಡುತ್ತವೆ ಅಂತ ಸಮೀಕ್ಷೆಯಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುತ್ತವೆ ಎಂದು ಬಹುತೇಕ ಜನರಿಂದ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡ 5,100 ಜನರಲ್ಲಿ ಶೇ.95.75 ರಷ್ಟು ಮಂದಿ 2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದೇವೆ ಎಂದಿದ್ದಾರೆ.
ಶೇ.95.44ರಷ್ಟು ಜನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳ ವಿವರ ಸರಿ ಇರುವುದಾಗಿ ದೃಢಪಡಿಸಿದ್ದಾರೆ. ಚುನಾವಣೆಗಳು ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯುತ್ತವೆ ಎಂದು ಸರಾಸರಿ ಶೇ 84.55 ಜನರು ಹೇಳಿದ್ದಾರೆ.ಅದರಲ್ಲೂ ಕಲಬುರಗಿ ವಿಭಾಗದಲ್ಲಿ ಅತೀ ಹೆಚ್ಚು ಅಂದರೆ ಶೇ.84.67ರಷ್ಟು ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆ ಪೈಕಿ ಶೇ.10.19ರಷ್ಟು ಜನರು ಈ ಅಭಿಪ್ರಾಯ ವನ್ನು ಬಲವಾಗಿ ಪ್ರತಿಪಾದಿಸಿದ್ದಾರೆ. ಬೆಳಗಾವಿ ವಿಭಾಗದ ಶೇ.69.62ರಷ್ಟು ಜನರು ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತವೆ ಎಂದಿದ್ದಾರೆ. ಈ ಪೈಕಿ, ಶೇ.19.24ರಷ್ಟು ಜನರು ಈ ಅಭಿಪ್ರಾಯ ವನ್ನು ಬಲವಾಗಿ ಸಮರ್ಥಿಸಿದ್ದಾರೆ. ಇವಿಎಂಗಳು ನಿಖರ ಫಲಿತಾಂಶಗಳನ್ನು ನೀಡುತ್ತವೆ ಎಂದು ಶೇ.83.61ರಷ್ಟು ನಾಗರಿಕರು ನಂಬಿದ್ದಾರೆ. ಕಲಬುರಗಿ ವಿಭಾಗದಲ್ಲಿ ಈ ನಂಬಿಕೆ ಅತೀ ಹೆಚ್ಚಾಗಿದೆ. ಕಲಬುರ್ಗಿಯಲ್ಲಿ ಶೇ.83.24ರಷ್ಟು ಜನರು ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಶೇ 11.24 ಜನರು ಬಲವಾಗಿ ನಿಖರ ಫಲಿತಾಂಶ ಬಗ್ಗೆ ಒಪ್ಪಿಕೊಂಡಿದ್ದಾರೆ.ಮೈಸೂರು ವಿಭಾಗದಲ್ಲಿ ಶೇ.70.67ರಷ್ಟು ಜನರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.17.92ರಷ್ಟು ಜನರು ಬಲವಾಗಿ ಇದನ್ನು ಸಮರ್ಥಿಸಿದ್ದಾರೆ. ಅಲ್ಲದೇ, ಇವಿಎಂಗಳ ಮೇಲಿನ ನಂಬಿಕೆ 2023ರಲ್ಲಿ ಶೇ.77.90ರಷ್ಟಿದ್ದರೆ, ಈಗ ಶೇ.83.61ಕ್ಕೆ ವೃದ್ಧಿಸಿದೆ ಎಂದೂ ಈ ಸಮೀಕ್ಷೆ ಹೇಳಿದೆ. ಈ ಸಮೀಕ್ಷಾ ವರದಿಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಹಾಗೂ ಕರ್ನಾಟಕ ಸರ್ಕಾರದ ಕಾರ್ಯದರ್ಶಿ ಹಾಗೂ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಿಇಒ ಮನೋಜ್ ಜೈನ್ ಅಂಕಿತ ಹಾಕಿದ್ದಾರೆ. ಈ ಸಮೀಕ್ಷಾ ವರದಿ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಕೆಸರೆರಚಾಟಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿ ಮುಖಕ್ಕೆ ಮಾಡಿದ ಮಂಗಳಾರತಿ:
ಇವಿಎಂ ವಿಶ್ವಾಸಾರ್ಹತೆ ಮೇಲೆ ಮಾಡಿರುವ ಸಮೀಕ್ಷಾ ವರದಿಯನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಮರ್ಥಿಸಿಕೊಂಡಿದ್ದಾರೆ. ಇವಿಎಂ ಸರಿಯಿಲ್ಲ ಅಂತ ರಾಹುಲ್ ಗಾಂಧಿ ಹೇಳ್ತಿದ್ರು. ಈಗ ಸರ್ವೆಯಲ್ಲಿ ಶೇ.83 ರಷ್ಟು ಜನ ಇವಿಎಂ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.. ಇದು ರಾಹುಲ್ ಗಾಂಧಿ ಮುಖಕ್ಕೆ ಮಂಗಳಾರತಿ ಮಾಡಿದಂತೆ ಅಂತ ತಿರುಗೇಟು ನೀಡಿದ್ದಾರೆ. ಧೈರ್ಯ ಇದ್ರೆ ಅವರು ಅಫಿಡವಿಟ್ ಸಲ್ಲಿಸಿ ದೂರು ನೀಡಲಿ, ಬರಿ ಭಾಷಣ ಮಾಡಿದ್ರೆ ಆಗಲ್ಲ. ವೋಟ್ ಚೋರಿ ಎಲ್ಲಿ ಆಗುತ್ತಿತ್ತು. ಕಾಂಗ್ರೆಸ್ ಪಾರ್ಟಿಯೊಳಗೆ ಆಗುತ್ತಿತ್ತು. ಈಗ ಪಕ್ಷದೊಳಗೆ ಬೆಂಕಿ ಉರಿಯುತ್ತಿದೆ ಎಂದು ಟೀಕಿಸಿದರು.
ಮೋದಿ ಭಕ್ತರು ಮಾಡಿದ ಸರ್ವೆ ಇದು:
ಇತ್ತ ಸಮೀಕ್ಷೆ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್, ಈಗ ಇವಿಎಂಗಳ ಸರ್ವೆ ಮಾಡುವ ಅವಶ್ಯಕತೆ ಏನಿತ್ತು?. ರಾಹುಲ್ ಗಾಂಧಿ ವೋಟ್ ಚೋರಿ ಅಭಿಯಾನ ದೇಶದ ಜನರ ಗಮನಸೆಳೆದಿತ್ತು. ಇವಿಎಂಗಳು ಒರಿಜಿನಲ್ ಅಂತ ಸಾಬೀತು ಮಾಡಿ ಬಿಂಬಿಸೋಕೆ ಈ ಸರ್ವೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸರ್ವೆ ಮಾಡಿರೋದು ಮೈಸೂರು ಮೂಲದ ಸಂಸ್ಥೆ. ಚುನಾವಣಾ ಆಯೋಗದ ಜೊತೆ ಸಹಬಾಗಿತ್ವ ಹೊಂದಿರುವ ಸಂಸ್ಥೆ. ಪ್ರಧಾನಿ ಮೋದಿಯವರ ಬಗ್ಗೆ ಮೋದಿಮಾಲಾ ಎಂಬ ಬುಕ್ ಬರೆದಿದ್ದ ಲೇಖಕರು ಈ ಸಂಸ್ಥೆಯ ಮುಖ್ಯಸ್ಥರು. ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವ ಇವರು ಇನ್ಯಾವ ಮಾನದಂಡದ ಮೇಲೆ ಸರ್ವೆ ಮಾಡಿದ್ದಾರೆ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯದ 102 ವಿಧಾನಸಭಾ ಕ್ಷೇತ್ರಗಳಿಂದ 5,100 ಜನಾಭಿಪ್ರಾಯ ಸಂಗ್ರಹಿಸಿದ್ದಾರೆ. ರಾಜ್ಯದ 7 ಕೋಟಿ ಜನರ ಅಭಿಪ್ರಾಯ ಇದು ಆಗುತ್ತಾ?. ಚುನಾವಣಾ ಆಯೋಗ ತಾನು ಸರಿಯಾಗಿದ್ದೇನೆ ಎಂದು ಬಿಂಬಿಸಿಕೊಳ್ಳೋಕೆ ಈ ಪ್ರಯತ್ನ ಮಾಡಿದೆ. ಮೋದಿ ಹೊಗಳು ಭಟ್ಟರು ಮಾಡಿರುವ ಸಮೀಕ್ಷೆ ಇದು. ಇದನ್ನ ಹೇಗೆ ನಂಬೋಕೆ ಸಾಧ್ಯ ಹೇಳಿ?. ನಾಗಪುರ ಯೂನಿವರ್ಸಿಟಿ ಸರ್ವೆ ಇದು ಎಂದು ಆರೋಪಿಸಿದ್ದಾರೆ.




