ವಿಧಾನಮಂಡಲ ಅಧಿವೇಶನ ಅವಧಿ ವಿಸ್ತರಣೆ ಕುರಿತು ಚರ್ಚಿಸಿ ತೀರ್ಮಾನ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಬೆಳಗಾವಿ : ಮುಂಬರುವ ದಿನಗಳಲ್ಲಿ  ಜಂಟಿ ಅಧಿವೇಶನ,ಬಜೆಟ್ ಅಧಿವೇಶನ ಸೇರಿದಂತೆ ಅಧಿವೇಶನ ಕಲಾಪದ ಅವಧಿಯನ್ನು ಹೆಚ್ಚಿಗೆ ನಿಗದಿಪಡಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.ಇದರಿಂದ ಸದನದಲ್ಲಿ ಅರ್ಥಪೂರ್ಣ ಚರ್ಚೆ ಹೆಚ್ಚಿನ ಸಮಯ ನಡೆಯಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಅವರು ಸದನ ಮತ್ತಷ್ಟು ಅರ್ಥಪೂರ್ಣವಾಗಿ ನಡೆಯಬೇಕೆನ್ನುವ ಕುರಿತು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು,ಸದನದ ಅಧಿವೇಶನದಲ್ಲಿ ನಿಗದಿಪಡಿಸಿರುವ ನಿಯಮಾವಳಿಗಳನ್ನು ಪಾಲಿಸಿದರೆ ಯಾವು ದೇ ಸಮಸ್ಯೆ ಬರುವುದಿಲ್ಲ.ಎರಡೂ ಸದನಕ್ಕೆ ಒಂದು ಪರಂಪರೆ ಇದೆ.ವಿಷಯಗಳನ್ನು ಚರ್ಚಿಸಲು ರೀತಿ ನೀತಿ ಇದೆ ಎಂದರು. ರೂಲ್ಸ್ ಬುಕ್ ಇದೆ.ಅದರಂತೆ ನಾವು ನಡೆದುಕೊಳ್ಳಬೇಕು ಎಂದು ಸದಸ್ಯರಲ್ಲಿ ಮನವಿ ಮಾಡಿದರು.

ವಿರೋಧಪಕ್ಷಕ್ಕೆ ಸಹಜವಾಗಿ ಹೆಚ್ಚಿನ ಅವಧಿ ದೊರೆಯಬೇಕು.ಆಡಳಿತ ಪಕ್ಷದವರೂ ತಮ್ಮ ಅಭಿಪ್ರಾಯಗಳನ್ನು ಹೇಳಬಹುದು. ಕೆಲವು ವಿಚಾರಗಳಲ್ಲಿ ವಿರೋಧ ಪಕ್ಷಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗುತ್ತದೆ.ಈ ನೀತಿಯ ಅನುಸಾರ,ಸದಸ್ಯರ ಸಂಖ್ಯೆಯ ಆಧಾರದ ಮೇಲೆ  ಪಕ್ಷಕ್ಕೆ ವಿಷಯಗಳ ಬಗ್ಗೆ ಚರ್ಚಿಸಲು ಅವಧಿ ನೀಡುವ ವ್ಯವಸ್ಥೆ ಲೋಕಸಭೆಯಲ್ಲಿಯೂ ಇದೆ.ಈ ನೀತಿಯನ್ನು ಇಲ್ಲಿಯೂ ಪಾಲಿಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.

ಯಾವುದಾದರು ಸದಸ್ಯರು ಒಂದು ವಿಷಯ ಚರ್ಚೆಗೆ ತೆಗೆದುಕೊಂಡಾಗ,ಉಳಿದ ಸದಸ್ಯರು ಅದೇ ವಿಷಯವಾಗಿ ಮಾತನಾಡಿದಾಗ ಸಮಯದ ಕೊರತೆ ಉಂಟಾಗುತ್ತದೆ.ಈ ನಿಟ್ಟಿನಲ್ಲಿ ಕೆಲವು ನೀತಿ ನಿಯಮಗಳನ್ನು ಪುನರ್ ಪರಿಶೀಲನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅವರು ಸದಸ್ಯರಲ್ಲಿ ಕಿವಿಮಾತು ಹೇಳಿದರು.

ಸದನದ ಸಮಯವನ್ನು ಇನ್ನಷ್ಟು ವಿಸ್ತರಿಸಬೇಕು.ಸದನದ ಅವಧಿ ವಿಸ್ತರಣೆಯ ಜೊತೆಗೆ ಅಧಿವೇಶನದ ಸಂದರ್ಭದಲ್ಲಿ ಎಷ್ಟು ಚರ್ಚೆಗಳು ಫಲಪ್ರದವಾದವು ಎಂಬ ಬಗ್ಗೆಯೂ ಗಮನ ಹರಿಸಬೇಕಾಗಿದೆ ಎಂದು ಅವರು ವಿವರಿಸಿದರು.

More News