ಆನ್ ಲೈನ್ ಜೂಜು ನಿಷೇಧಿಸಲು ಸಂಪುಟ ಸಭೆ ತೀರ್ಮಾನ : ಕಾನೂನು ಸಚಿವ ಮಾಧುಸ್ವಾಮಿ

ಬೆಂಗಳೂರು : ಆನ್ ಲೈನ್ ಗೇಮ್ಸ್ ನಿಷೇಧಿಸುವ ನಿಟ್ಟಿನಲ್ಲಿ ಕರ್ನಾಟಕ‌ ಪೊಲೀಸ್ ಕಾಯ್ದೆಗೆ ತಿದ್ದುಪಡಿ ವಿಧೇಯಕ ತರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,ಆನ್ ಲೈನ್ ಗೇಮಿಂಗ್ ನಿಷೇಧಿಸುವ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.ಕಂಪ್ಯೂಟರ್,ಮೊಬೈಲ್,ಎಲೆಕ್ಟ್ರಾನಿಕ್ ಸಾಧನ ಬಳಸಿ ಆನ್‌ಲೈನ್ ಮೂಲಕ ಹಣದ ವ್ಯವಹಾರ ನಡೆಯುವ ಜೂಜಾಟವನ್ನು ನಿಷೇಧಿಸಲು ವಿಧೇಯಕ ತರಲಾಗುತ್ತಿದೆ.‌ಈ‌ ಸಂಬಂಧ ಹೈಕೋರ್ಟ್ ನಲ್ಲಿ ರಿಟ್ ಪಿಟಿಷನ್ ಇತ್ತು.ಅದರನ್ವಯ ಇದೀಗ ಮುಂದಿನ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲಾಗುವುದು. ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಆನ್ ಲೈನ್ ಗ್ಯಾಂಬ್ಲಿಂಗ್ ಮಟ್ಟ ಹಾಕಲಾಗುತ್ತದೆ.ಹಣದ ವ್ಯವಹಾರ ನಡೆ ಸುವ,ಎಲೆಕ್ಟ್ರಾನಿಕ್ ಹಣದ ವಹಿವಾಟು ನಡೆಸುವ ಅಸನ್ ಲೈನ್ ಗೇಮಿಂಗ್ ನಿಷೇಧಿಸುವ ಸಂಬಂಧವೂ ಈ ತಿದ್ದುಪಡಿ ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾಗಿದೆ ಎಂದರು.

ಕ್ಷೇತ್ರ ಮರು ವಿಂಗಡನೆ ಆಯೋಗ ರಚನೆಗೆ ನಿರ್ಧಾರ : ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಕ್ಷೇತ್ರಗಳ ಮರು ವಿಂಗಡನೆ ಆಯೋಗ ರಚನೆಗೆ ಡಿಮಿಲಿಟೇಷನ್ ಸಂಬಂಧ ಡಿಮಿಲಿಟೇಷನ್ ಕಮಿಷನ್ ರಚಿಸಲು ಸಂಪುಟ ಸಭೆ ‌ನಿರ್ಧರಿಸಿದೆ.ಆ ಮೂಲಕ ತಾ.ಪಂ,ಜಿ.ಪಂ ಚುನಾವಣೆ ಮುಂದೂಡಲು ಸರ್ಕಾರ ಚಿಂತನೆ ನಡೆಸಿದೆ.ಈ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಡೀ‌ಲಿಮಿಟೇಷನ್ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.

ಕ್ಷೇತ್ರ ಮರು ವಿಂಗಡನೆ ಆಯೋಗ ರಚನೆಗೆ ಮೂಲಕ ಜಿಲ್ಲಾಧಿಕಾರಿಗಳ ಹಂತದಲ್ಲೇ ತಕರಾರು ಹಾಗೂ ಆಯೋಗ ಮಟ್ಟದಲ್ಲಿ ತಕರಾರು ತೆಗೆಯಲು ಅವಕಾಶ ನೀಡಲಾಗುತ್ತದೆ.ಈ ಮುಂಚಿನ ವ್ಯವಸ್ಥೆಯಲ್ಲಿ ಆ ಅವಕಾಶ ಇರಲಿಲ್ಲ.ಒಂದು ವೇಳೆ ಕೋರ್ಟ್ ಅನುಮತಿ ನೀಡದರೆ,ಮತ್ತೆ ಡಿಮಿಲಿಟೇಷನ್ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.

ಗಣೇಶ ಹಬ್ಬದ ಬಗ್ಗೆ ಎರಡು ದಿನದಲ್ಲಿ ನಿರ್ಧಾರ : ಇನ್ನು ಎರಡು ದಿನಗಳಲ್ಲಿ ಗಣೇಶ ಚತುರ್ಥಿ ನಿರ್ಬಂಧ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುವುದು.ಕೋವಿಡ್ ಮಾರ್ಗಸೂಚಿಯನ್ವಯ ಹಬ್ಬ ಹೇಗೆ ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಸಲಾ ಗುತ್ತದೆ.ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು,ತಜ್ಞರ ಜೊತೆ ಸಮಾಲೋಚಿಸಿ ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಮೈಸೂರು ಅರಮನೆ ಫೊಟೋ ಶೂಟ್ ಪ್ರಕರಣ ಕೈಬಿಟ್ಟ ಸರ್ಕಾರ : ಭಾರೀ ಸದ್ದು ಮಾಡಿದ್ದ ಮೈಸೂರು ಅರಮನೆ ಫೊಟೋ ಶೂಟ್ ಪ್ರಕರಣ ಹಾಗೂ ಚಿನ್ನದ ಲೇಪನ ಪ್ರಕರಣವನ್ನು ಸಚಿವ ಸಂಪುಟ ಸಭೆ ಕೈ ಬಿಟ್ಟಿದೆ.ಮೈಸೂರು ಅರಮನೆಯ ಗೋಡೆ ಮತ್ತು ಕಂಬಗಳಿಗೆ ಚಿನ್ನದ ಲೇಪನ ಕಾಮಗಾರಿ ಹಾಗೂ ಆನೆಗಳಿಗೆ ನೆಲಹಾಸು ಹಾಕುವ ಕಾಮಗಾರಿಗಳಲ್ಲಿ ಕರ್ತವ್ಯ ಲೋಪವೆಸ ಗಿರುತ್ತಾರೆಂಬ ಆರೋಪದ ಮೇಲೆ ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ವಿರುದ್ಧ ಉಪ ಲೋಕಾ ಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯ್ದೆ,1984ರ ಕಲಂ 12(3)ರಡಿ ಮಾಡಿರುವ ಶಿಫಾರಸ್ಸನ್ನು ತಿರಸ್ಕರಿಸಲು ತೀರ್ಮಾನ ಮಾಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಸಂಪುಟ ಸಭೆಯ ಪ್ರಮುಖ ತೀರ್ಮಾನವೇನು : ಹೇಮಾವತಿ ನಾಲೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿ ನ ಆಯ್ದ 26 ಕೆರೆಗಳಿಗೆ ನೀರನ್ನು ಒದಗಿಸುವ ಯೋಜನೆಯಲ್ಲಿನ ಉಳಿಕೆ ಕಾಮಗಾರಿ ಮತ್ತು ಹೆಚ್ಚುವರಿ ಅಡ್ಡಮೋರಿ ಕಾಮಗಾರಿಗಳ 98.50 ಕೋಟಿ ರೂ. ಮೊತ್ತದ ಅಂದಾಜು ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಬೀಜೋತ್ಪಾದನ ಕಾರ್ಯಗಳಿಗೆ ನೀಡಲಾಗಿದ್ದ 10 ಕೋಟಿ ರೂ.ಕ್ಯಾಷ್  ಕ್ರೆಡಿಟ್ ಸೌಲಭ್ಯವನ್ನು 20 ಕೋಟಿ ರೂ.ಗೆ ಹೆಚ್ಚಿಸಿ, ಸರ್ಕಾರದ ಗ್ಯಾರಂಟಿಯನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ.

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಇವರಿಗೆ ರಸಗೊಬ್ಬರ ಕಾಪು ದಾಸ್ತಾನು ಯೋಜನೆಗೆ ಬೇಕಾಗಿರುವ 400 ಕೋಟಿ ರೂ. ದುಡಿಯುವ ಬಂಡವಾಳ ಸಾಲ ಸೌಲಭ್ಯಕ್ಕೆ ಸರ್ಕಾರದ ಗ್ಯಾರಂಟಿಯನ್ನು ನೀಡಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆಗಾಗಿ ಸಮಾಲೋಚಕರು,ಚಿಂತಕ ಪಾಲುದಾರರಾಗಿರುವ ಮೆ|ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಬಿಸಿಜಿ) ಸೇವೆಯನ್ನು ಮುಂದಿನ 12 ತಿಂಗಳ ಅವಧಿ ಗೆ ವಿಸ್ತರಿಸಲು ಅಸ್ತು.ವರ್ಷಕ್ಕೆ 12 ಕೋಟಿ ರೂ.ಗೌರವ ಧನ,ಅವಧಿ ವಿಸ್ತರಿಸಲಾಗಿದೆ.

ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷಗಳ ಡಿಪ್ಲೋಮಾ ಕೋರ್ಸ್ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನ ವಿದ್ಯಾರ್ಹತೆಯೆಂದು(ಉನ್ನತ ಶಿಕ್ಷಣ ಹಾಗೂ ಅನುಕಂಪದ ಆಧಾರದ ನೇಮಕಾತಿಗೆ)ಪರಿಗಣಿಸಲು ತೀರ್ಮಾನಿಸಲಾಗಿದೆ.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಮನೆಗಳ ಟೆಂಡರ್ ಅನುಮೋದನೆಗೆ ಸಂಬಂಧಿಸಿದಂತೆ 27ನೇ ಹಾಗೂ 28ನೇ ಎಸ್ಎಲ್ಎಸ್ಎಂಸಿ ಸಮಿತಿ ಸಭೆಯಲ್ಲಿ ವಿಧಿಸಿದ ಷರತ್ತುಗಳಿಗೆ ವಿನಾಯಿತಿ ಹಾಗೂ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ 2,928 ಮನೆಗಳ 11 ಟೆಂಡರ್‌ಗಳಿಗೆ ಹಾಗೂ 4,556 ಮನೆಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆಗೆ ಸಂಬಂಧಿಸಿದಂತೆ 13ನೇ ಎಸ್ಎಲ್ಇಸಿಎ ಹೆಚ್ ಸಭೆ ವಿಧಿಸಿದ ಷರತ್ತುಗಳಿಗೆ ವಿನಾಯತಿ ನೀಡಲು ನಿರ್ಧಾರಿಸಲಾಗಿದೆ.

ಕರ್ನಾಟಕ ಗೃಹ ಮಂಡಳಿಯಿಂದ ಸೂರ್ಯನಗರ 2ನೇ ಹಂತದ ವಸತಿ ಯೋಜನೆಗಾಗಿ ಆನೇಕಲ್ ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಭೂಸ್ವಾಧೀನಕ್ಕೆ ಒಳಪಡಿಸಿರುವ ಒಟ್ಟು ವಿಸ್ತೀರ್ಣ 110-18 ಎಕರೆ ಜಮೀನಿಗೆ ಭೂ ಮಾಲೀಕರ ಕೋರಿಕೆಯಂತೆ ಶೇಕಡಾ 50:50 ಅನುಪಾತದಡಿಯಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ.

ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟೂರಾದ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿ ವೀರಪುರ ಗ್ರಾಮದಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು 25 ಕೋಟಿ ರೂ.ವೆಚ್ಚ ದಲ್ಲಿ ಸ್ಥಾಪಿಸಲು ಅಸ್ತು.ಕೆಆರ್ ಐಡಿಎಲ್‌ನವರು ಇದನ್ನು ನಿರ್ಮಿಸಲಿದ್ದಾರೆ.

ಬೆಳಗಾವಿ ಜಿಲ್ಲೆ,ಸವದತ್ತಿ ತಾಲ್ಲೂಕಿನ ಸವದತ್ತಿ ಗ್ರಾಮದಲ್ಲಿನ ಒಟ್ಟು 32 ಎಕರೆ ಗಾಯರಾಣ ಜಮೀನನ್ನು ಪವನ್ ವಿದ್ಯುತ್ ಯೋಜನೆಗಾಗಿ ಮ:ರೋಹನ್ ಸೋಲಾರ್ ಪವರ್ ಪ್ರೈವೇಟ್ ಲಿಮಿಟೆಡ್ ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ತೀರ್ಮಾನಿಸಲಾಗಿದೆ.

ಬಂಜಾರ ಭವನ ನಿರ್ಮಾಣಕ್ಕಾಗಿ ಉಪಯೋಗಿಸಿಕೊಂಡಿರುವ ಖಾಸಗಿ ಜಮೀನಿಗೆ ಬದಲಾಗಿ ರಾಯ ಚೂರು ಜಿಲ್ಲೆಯ ರಾಯಚೂರು ತಾಲ್ಲೂಕಿನ ಸಿದ್ದರಾಂಪೂರ ಗ್ರಾಮದ ಸರ್ವೆ ನಂ.106ರಲ್ಲಿ 4.20 ಎಕರೆ ಸರ್ಕಾರಿ ಜಮೀನನ್ನು ರಾಜೇಶ್ ಪಿ.ಪಾಟೀಲ್ ಎಂಬವರಿಗೆ ಮಂಜೂರು ಮಾಡಲು ಅಸ್ತು ನೀಡಲಾಗಿದೆ.

ಭದ್ರಾ ಮೇಲ್ದಂಡೆ ಯೋಜನೆ ಪ್ಯಾಕೇಜ್ 1,2 ಮತ್ತು 3ರ ಕಾಮಗಾರಿಗಳಿಗೆ ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದನ್ವಯ ಅರ್ಜಿದಾರರ ಮನವಿಗಳನ್ನು ಪರಿಗಣಿಸಿ,ಬೆಲೆ ಮರು ನಿಗದಿಪಡಿಸಲು ತೀರ್ಮಾನ.ಅಜ್ಜಂಪುರ ಮತ್ತು ನರಸಿಂರಾಜಪುರ ತಾಲೂಕುಗಳಲ್ಲಿ ಬೆಲೆ ಮರು ನಿಗದಿ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಸುಮಾರು 1,97,00,000 ಹೆಚ್ಚುವರಿ ವೆಚ್ಚ ಆಗಲಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳಿಗೆ ಯುಪಿಎಸ್ ಮತ್ತು ಬ್ಯಾಟರಿಗಳನ್ನು 12.65 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿರುವುದಕ್ಕೆ ಸಚಿವ ಸಂಪುಟದ ಘಟನೋತ್ತರ ಅನುಮೋದನೆ

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಗ್ರಾಮಗಳಲ್ಲಿ ಎರಡು ಜಿ.ಟಿ.ಟಿ.ಸಿ ಕೇಂದ್ರಗಳನ್ನು ನಬಾರ್ಡ್ RIDF-27ರ ಯೋಜನೆಯಡಿ 101.97 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲು ನಿರ್ಧಾರ

2021-22 ಸಾಲಿನಲ್ಲಿ ರಾಜ್ಯದ ಎಲ್ಲಾ ಐಟಿಐಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ನೀಡಲು 13,061 ಟೂಲ್ ಕಿಟ್‌ಗಳನ್ನು 17.18 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಖರೀದಿಸಿ ವಿತರಿಸಲು ಅಸ್ತು.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ತಿದ್ದುಪಡಿ) ವಿಧೇಯಕ-2021ಕ್ಕೆ (ಅಧ್ಯಾದೇಶ ಬದಲಿ ವಿಧೇಯಕ) ಅನುಮೋದನೆ.

ಮೈಸೂರು ಮಹಾನಗರಪಾಲಿಕೆಯ ವಿದ್ಯಾರಣ್ಯಪುರಂ ಡಂಪ್ ಸೈಟ್‌ನಲ್ಲಿರುವ 3.08ಲಕ್ಷ ಟನ್‌ಗಳಷ್ಟು ಪಾರಂಪರಿಕ ತ್ಯಾಜ್ಯದ ಬಯೋ ಮೈನಿಂಗ್‌ನ ಅಂದಾಜು 14.38 ಕೋಟಿ ರೂ. ಮೊತ್ತದ ವಿಸ್ತತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ  ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಜಕ್ಕೂರಿನಲ್ಲಿ ರಾಜೀವ್ ಗಾಂಧಿ ಏರೋ ಸ್ಪೋರ್ಟ್ಸ್‌ ಸೊಸೈಟಿ ಸ್ಥಾಪನೆ ಮಾಡಿರುವ ಆದೇಶವನ್ನು  ಹಿಂಪಡೆದು, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ನಿರ್ಧಾರ

ಮೂರನೇ ಅಲೆ ನಿರ್ವಹಣೆ ಸಂಬಂಧ ವಿವಿಧ ಔಷಧಿಗಳ ಖರೀದಿಗಾಗಿ 17.72 ಕೋಟಿ ರೂ.ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ವಿವರಿಸಿದರು.

More News

You cannot copy content of this page