ಧಾರವಾಡ : ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಲು ವ್ಯಾಕ್ಸಿನ್ ಪಡೆಯುವಂತೆ ಸಾರ್ವಜನಿಕರನ್ನು ಪ್ರೋತ್ಸಾಹಿಸಲು ಕೆಪಿಸಿಸಿ ವತಿಯಿಂದ ನಡೆಸಲಾದ ”ವ್ಯಾಕ್ಸಿನೇಟ್ ಕರ್ನಾಟಕ” ಅಭಿಯಾನದ ವಿಜೇತರಿಗೆ ಭಾನುವಾರ ಬಹುಮಾನ ವಿತರಣೆ ಮಾಡಲಾಯಿತು.
ಧಾರವಾಡ ಜಿಲ್ಲೆಯ ಐಶ್ವರ್ಯ ಮತ್ತು ನಿಧಿ ಎನ್.ಶೆಟ್ಟಿ ಹಾಗೂ ಬೆಳಗಾವಿ ಜಿಲ್ಲೆಯ ಆದರ್ಶ್ ದಾಸನಕೊಪ್ಪ ಮತ್ತು ಎಸ್. ಅಭಿನಂದನ್ ಅವರು ಬಹುಮಾನ ಪಡೆದ ಅದೃಷ್ಟಶಾಲಿಗಳು.ಧಾರವಾಡ ಮತ್ತು ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿಜೇತ ಮಕ್ಕಳಿಗೆ ಟ್ಯಾಬ್ ಗಳನ್ನು ಬಹುಮಾನವಾಗಿ ವಿತರಿಸಿ,ಅಭಿನಂದಿಸಿದರು.
ಮಹಾಮಾರಿ ಕೋವಿಡ್ 3 ನೇ ಅಲೆಯಿಂದ ರಕ್ಷಣೆ ಪಡೆಯಲು ವಯಸ್ಕರೆಲ್ಲರೂ ಲಸಿಕೆ ಪಡೆಯಬೇಕು ಎಂಬುದು ತಜ್ಞರ ಸಲಹೆಯಾಗಿತ್ತು.ಅಂತೆಯೇ,ಲಸಿಕೆ ಪಡೆಯುವಂತೆ ಪೋಷಕರು ಮತ್ತು ಸಾರ್ವಜನಿಕರು ಲಸಿಕೆ ಪಡೆಯುವಂತೆ ಪ್ರೇರೇಪಿಸಲು ಕೆಪಿಸಿಸಿ ಅಧ್ಯಕ್ಷರು ವ್ಯಾಕ್ಸಿನೇಟ್ ಕರ್ನಾಟಕ ಎಂಬ ವಿನೂತನ ಆನ್ಲೈನ್ ವಿಡಿಯೋ ಅಭಿಯಾನ ಆರಂಭಿಸಿದ್ದರು.

ಈ ಅಭಿಯಾನದಡಿ ಲಸಿಕೆ ಪಡೆಯುವಂತೆ ವಯಸ್ಕರನ್ನು ಪ್ರೇರೇಪಿಸುವ ಸೃಜನಶೀಲ ವಿಡಿಯೋಗಳನ್ನು ಸಿದ್ದಪಡಿಸಿ ”ವ್ಯಾಕ್ಸಿ ನೇಟ್ ಕರ್ನಾಟಕ” ಹ್ಯಾಸ್ ಟ್ಯಾಗ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.ರಾಜ್ಯದ ಎಲ್ಲಾ ಭಾಗಗಳ ಶಾಲಾ ಮಕ್ಕಳು ಈ ಅಭಿಯಾನ ದಲ್ಲಿ ಪಾಲ್ಗೊಂಡಿದ್ದರು.50 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಆನ್ ಲೈನ್ ವಿಡಿಯೋ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.
ಅದರಲ್ಲಿ ಉತ್ತಮ 100 ವಿಡಿಯೋಗಳಿಗೆ ತಲಾ ಒಂದು ಟ್ಯಾಬ್ಲೆಟ್ ಅನ್ನು ಬಹುಮಾನವಾಗಿ ನೀಡುವುದಾಗಿ ಘೋಷಣೆ ಮಾಡ ಲಾಗಿತ್ತು.ಅಂತೆಯೇ,ಕೆಪಿಸಿಸಿ ಅಧ್ಯಕ್ಷರ ತಮ್ಮ ಪ್ರವಾಸದ ವೇಳೆ ಆಯಾ ಜಿಲ್ಲೆಗಳಲ್ಲೇ ವಿಜೇತ ಮಕ್ಕಳನ್ನು ಭೇಟಿ ಮಾಡಿ ಬಹು ಮಾನ ವಿತರಣೆ ಮಾಡಿದರು.ಜತೆಗೆ,ಈ ಮಕ್ಕಳೊಂದಿಗೆ ಸಂವಾದ ನಡೆಸಿ, ರಾಜ್ಯದ ಅಭಿವೃದ್ದಿ ವಿಚಾರದಲ್ಲಿ ಈ ಮಕ್ಕಳಲ್ಲಿನ ವಿನೂತನ ಚಿಂತನೆ, ಆಶಯಗಳನ್ನು ಆಲಿಸುತ್ತಿದ್ದಾರೆ.




