ಬೆಂಗಳೂರು : ಮೈಸೂರು ಜಿಲ್ಲಾಡಳಿತ ದೇವಸ್ಥಾನಗಳನ್ನು ತೆರವುಗೊಳಿಸುತ್ತಿರುವ ಪ್ರಕರಣ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರತಿಧ್ವನಿಸಿದೆ.ಸೆ.13ರಂದು ಸಂಜೆ ಖಾಸಗಿ ಹೊಟೇಲಿನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ದೇವಸ್ಥಾನ ತೆರವು ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಸುಪ್ರೀಂ ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ವಿಚಾರದಲ್ಲೂ ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟನೆ ಸಭೆಗೆ ನೀಡಿದ್ದಾರೆ ಎನ್ನಲಾಗಿದೆ.ಇದಲ್ಲದೇ ವರ್ಗಾವಣೆ ವಿಚಾರದಲ್ಲಿಯೂ ಶಾಸಕರಿಗೆ ಅಗತ್ಯಕ್ಕೆ ತಕ್ಕಂತೆ ಆಡಳಿತ ಅನುಕೂಲಕ್ಕೆ ವರ್ಗಾವಣೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದ್ದು,ಶಾಸಕರ ಕ್ಷೇತ್ರದ ಅನುದಾನಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮೈಸೂರು ಜಿಲ್ಲಾಧಿಕಾರಿ,ನಂಜನಗೂಡು ತಹಶೀಲ್ದಾರ್ ಗೆ ವಿವರಣೆ ಕೇಳಿದ್ದೇವೆ.ಸುಪ್ರೀಂ ಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥೈಸಿ ದೇವಸ್ಥಾನ ತೆರವು ಜಾರಿಗೆ ತಂದಿಲ್ಲ.ಹೀಗಾಗಿ ಈ ಬಗ್ಗೆ ವಿವರಣೆ ಕೇಳಿದ್ದೇವೆ.ಜೊತೆಗೆ ದೇವಾಲಯ ತೆರವು ಮಾಡದಂತೆ ಸೂಚಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಧೀವೇಶನ ನಡೆಯುವ ವೇಳೆ ಮಂಗಳವಾರ ಶಾಸಕಾಂಗ ಸಭೆ ನಡೆಸುವುದು,ಶಾಸಕರ ಕುಂದು ಕೊರತೆಗಳು,ಅವಹಾಲು ಕೇಳಲು ಪ್ರತೀ ಗುರುವಾರ ವಿಧಾನ ಸೌಧದಲ್ಲಿ ಲಭ್ಯವಿರುವುದು ಸೇರಿದಂತೆ ಶಾಸಕರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿ ದ್ದಾರೆ ಎನ್ನಲಾಗಿದೆ.