ಬೆಂಗಳೂರು : ನಗರದ ಮಹದೇವಪುರ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ವತಿಯಿಂದ ನೂರಾರು ಕಾರ್ಯಕರ್ತರು ಆಟೋ ಮೆರವಣಿಗೆ ನಡೆಸುವುದರ ಮೂಲಕ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.
ಕ್ಷೇತ್ರದ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಶೇ.60ಕ್ಕೂ ಹೆಚ್ಚು ಪೆಟ್ರೋಲ್, ಡೀಸೆಲ್ ಹಾಗೂ ತೈಲ ಬೆಲೆಗಳ ಮೇಲೆ ಎಕ್ಸೈಸ್ ಸುಂಕ, ವ್ಯಾಟ್ ಹಾಗೂ ಇನ್ನಿತರ ಸೆಸ್ ಗಳನ್ನು ವಿಧಿಸುವುದರ ಮೂಲಕ ದೇಶದ ಎಲ್ಲಾ ಪ್ರಜೆಗಳ ಜೇಬಿಗೆ ಕನ್ನ ಹಾಕುವ ಕೆಲಸಗಳನ್ನು ಮಾಡುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ವಿನಿಮಯ ದರ ಹೆಚ್ಚಾಗಿದೆ ಮುಂತಾದ ಅವಾಸ್ತವಿಕ ವಿಚಾರಗಳನ್ನು ಸುಳ್ಳು ಹೇಳುವುದರ ಮೂಲಕ ರಾಜ್ಯ ಹಾಗೂ ದೇಶದ ಪ್ರಜೆಗಳ ದಿಕ್ಕನ್ನು ತಪ್ಪಿಸಿ, ಬೆಲೆ ಏರಿಸಿ ಜನತೆಯ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದರು.
ಇತ್ತೀಚೆಗೆ ವಿಧಾನ ಸಭೆಯಲ್ಲೂ ಸಹ ಪುಂಖಾನುಪುಂಕವಾಗಿ ಚರ್ಚೆ ನಡೆದರೂ ಕರ್ನಾಟಕ ರಾಜ್ಯ ಬಿ ಜೆ ಪಿ ಸರ್ಕಾರ ಇದುವರೆವಿಗೂ ಯಾವುದೇ ತೆರಿಗೆಯನ್ನು ಇಳಿಸುತ್ತಿಲ್ಲ. ಈ ಕೂಡಲೇ ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ಇಳಿಸದಿದ್ದರೆ ಆಮ್ ಆದ್ಮಿ ಪಾರ್ಟಿ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.