ಬೆಂಗಳೂರು: ರಸ್ತೆಗಳ ವಿಚಾರದಲ್ಲಿ ಜನರಿಂದ ನಾವು ಸಾಕಷ್ಟು ಟೀಕೆ ಎದುರಿಸುತ್ತಿದ್ದು, ಬೆಂಗಳೂರಿನ ಪ್ರತಿ ವಾರ್ಡಿನ ಮುಖ್ಯ ರಸ್ತೆಗಳ ಕುರಿತು ರೋಡ್ ಆಡಿಟ್ ಮಾಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್ ರಮೇಶ್ ಬೆಂಗಳೂರು ನಗರದ ರಸ್ತೆಗಳ ಗುಂಡಿ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, ಕಾಲಕಾಲಕ್ಕೆ ಮಾರ್ಪಾಡು ಮಾಡುವ ಕಾರಣದಿಂದ ರಸ್ತೆ ನಿರ್ಮಾಣ ವಿಳಂಬವಾಗಲಿದೆ, ಎಲ್ಲಾ ಸ್ಮಾರ್ಟ್ ಸಿಟಿಯಲ್ಲಿಯೂ ತಜ್ಞರ ಅಭಿಪ್ರಾಯ ಪಡೆದು ಕಾಮಗಾರಿ ಮಾಡಬೇಕಾಗಿದೆ ಎಂದರು.
ಇದಕ್ಕೆ ಸದಸ್ಯರು ತೃಪ್ತರಾಗದೇ ಇದ್ದಾಗ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಾರ್ವಜನಿಕರ ಮನಸ್ಸಿನಲ್ಲಿ ಕಾಡುತ್ತಿರುವ ಪ್ರಶ್ನೆಯೂ ರಸ್ತೆ ಗುಂಡಿಯದ್ದಾಗಿದೆ. ವಿಳಂಬ ಮತ್ತು ಗುಣಮಟ್ಟದ ಬಗ್ಗೆ ಸದಸ್ಯರು ಪ್ರಶ್ನಿಸಿದ್ದಾರೆ. ಪಾಟ್ ಹೋಲ್, ಥರ್ಮಲ್ ಕ್ರ್ಯಾಕಿಂಗ್, ಸ್ಟ್ರಿಪ್ಪಿಂಗ್ ಇಲ್ಲದ ರಸ್ತೆ ದೇಶದಲ್ಲೇ ಎಲ್ಲೂ ಸಿಗಲ್ಲ, ಆದರೂ, ಒಂದಲ್ಲಾ ಒಂದು ಸಮಸ್ಯೆ ಇರಲಿದೆ, ಬೆಂಗಳೂರಿನ ರಸ್ತೆಗೆ ಸಾಕಷ್ಟು ಟೀಕೆ ಎದುರಿಸುತ್ತಿದ್ದೇವೆ.
ಮುಖ್ಯ ರಸ್ತೆಗಳ ಬಗ್ಗೆ ರೋಡ್ ಮೇಂಟಡನ್ಸ್ ರೋಡ್ ಆಡಿಟ್ ಮಾಡಲು ನಿರ್ಧಾರಿಸಿದ್ದು, ರಸ್ತೆ ನಿರ್ಮಾಣ, ರಸ್ತೆ ನಿರ್ಮಿಸಿ ಎಷ್ಟು ವರ್ಷ ಆಗಿದೆ, ನಿರ್ವಹಣೆ ಆಗಿದೆಯಾ, ದುರಸ್ತಿ, ಪಾಟ್ ಹೋಲ್, ಯಾವ ಏಜೆನ್ಸಿ ರಸ್ತೆ ಕೆಲಸ ಮಾಡಿದೆ, ಲೋಪವಾಗಿದ್ದರೆ ಯಾರು ಹೊಣೆ ಎನ್ನುವ ಕುರಿತು ಆಡಿಟ್ ಮಾಡಲಾಗುತ್ತದೆ, ಮಾಗಡಿ ರಸ್ತೆ ಬಗ್ಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಕ್ರೀಡಾಂಗಣ ನಿರ್ವಹಣೆ ಮಾಡದಿದ್ದಲ್ಲಿ ವಾಪಸ್:
ಬೆಂಗಳೂರಿನ ಹನುಮಂತ ನಗರದಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣಕ್ಕೆ ಮೂಲಸೌಕರ್ಯ ಕಲ್ಪಿಸಿ ಕ್ರೀಡಾಂಗಣ ನಿರ್ವಹಣೆ ಮಾಡಲು ಬಿಬಿಎಂಪಿಗೆ ಸಾಧ್ಯವಾಗದೇ ಹೋದಲ್ಲಿ ಕ್ರೀಡಾಂಗಣವನ್ನು ಸರ್ಕಾರ ವಾಪಸ್ ಪಡೆದು ಬೇರೆ ಪ್ರಾಧಿಕಾರಕ್ಕೆ ವಹಿಸಲಿದೆ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಕ್ರೀಡಾಂಗಣ ನಿರ್ವಹಣೆ ಮಾಡಲು ಬಿಬಿಎಂಪಿ ವಿಫಲವಾಗಿದ್ದು ಬೇರೆ ಪ್ರಾಧಿಕಾರಕ್ಕೆ ವಹಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಬಿಎಂಪಿಗೆ ಕೊಟ್ಟಿರುವುದನ್ನು ಬೇರೆ ಪ್ರಾಧಿಕಾರಗಳಿಗೆ ಕೊಡುತ್ತಾ ಹೋಗುವುದಕ್ಕೆ ಸಾಧ್ಯವಿಲ್ಲ, ಆದರೆ ಕ್ರೀಡಾಂಗಣದ ನಿರ್ವಹಣೆ ಕುರಿತು ಪಾಲಿಕೆ ಕ್ರಮ ಕೈಗೊಂಡಿದೆ, ಅನುದಾನ ಬಳಕೆ ಮಾಡಿಕೊಂಡು ಮೂಲಸೌಕರ್ಯ ಕಲ್ಪಿಸಲು ಟೆಂಡರ್ ಕರೆದು ಕೆಲಸ ಶುರು ಮಾಡಿದೆ ಈ ಮಾಹಿತಿ ತಪ್ಪಾಗಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿ ಜಿಲ್ಲೆಯಲ್ಲೂ ಮಹಿಳಾ ಠಾಣೆ, ಪ್ರತಿ ಠಾಣೆಯಲ್ಲೂ ಮಹಿಳಾ ಪೊಲೀಸ್ ಇರಲಿದ್ದಾರೆ,ಹೆಚ್ಚು ಜನರಿರುವ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿ ಇರಲಿದೆ, ಕಾಲೇಜು ಕ್ಯಾಂಪಸ್ ಇತ್ಯಾದಿಯಲ್ಕಿ ಕಣ್ಗಾವಲು ಇರಿಸಲಾಗಿದೆ ಕ್ರೈಂ ತಡೆಗೆ ಸರ್ಕಾರ ಎಲ್ಲ ರೀತಿಯ ಕ್ರಮ ವಹಿಸಿದೆ ಎಂದರು.(11.52-11.59)