ಬೆಂಗಳೂರು: ತಮ್ಮಿಬ್ಬರ ನಡುವೆ ಭಿನ್ನಮತ ಇದೆ ಎಂದು ಬಿಂಬಿಸಿದ್ದವರಿಗೆ ಉತ್ತರ ಕೊಟ್ಟ ಜೆಡಿಎಸ್ ಯುವ ನಾಯಕರು. ಕುಟುಂಬದಲ್ಲಿಯೂ ನಾವು ಒಂದೇ.ಪಕ್ಷದಲ್ಲಿ ಕೂಡ ಒಂದೇ.ನಮ್ಮನ್ನು ಬೇರೆ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಘೋಷಿಸಿದರು.
ನಾಲ್ಕು ದಿನಗಳಿಂದ ಬಿಡದಿ ತೋಟದಲ್ಲಿ ನಡೆದ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಾಗಾರ ದಲ್ಲಿ ಕೊನೆಯ ದಿನ ವಾದ ಇಂದು ಜನತಾದಳದ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಸಂಸದ ಪ್ರಜ್ವಲ್ ರೇವಣ್ಣಇಬ್ಬರು ಯುವ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸಭೆಯಲ್ಲಿ ಯುವ ಪ್ರತಿನಿಧಿಗಳಿಗೆ ಮತ್ತಷ್ಟು ಹುರುಪು,ಹುಮ್ಮಸ್ಸು ತುಂಬಿದರು.

ಕಾರ್ಯಗಾರದಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು,ಅಣ್ಣ ತಮ್ಮಂದಿರಾಗಿ ನಾವು ಯಾವತ್ತಿಗೂ ಒಂದೇ.ರಾಜ್ಯದಲ್ಲಿ ಪಕ್ಷ ಕಟ್ಟಲು ನಾವಿಬ್ಬರು ಒಂದಾಗಿ ಇದ್ದೇವೆ.ಕುಮಾರಣ್ಣ ಅವರನ್ನು ಮತ್ತೆ ಸಿಎಂ ಮಾಡಲು ನಾವು ಇಬ್ಬರು ಯಾವಾಗಲೂ ಒಂದಾಗಿ ಇರ್ತೀವಿ,ಪಕ್ಷದ ಕೆಲಸ ಮಾಡುತ್ತೇವೆ.ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದರು.
ಇಬ್ಬರು ಧರ್ಮಸ್ಥಳ ಹಾಗೂ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇವೆ.ಮೈಸೂರಿಗೆ ಮೊದಲು ಹೋಗಿ ತಾಯಿ ಚಾಮುಂಡೇಶ್ವರಿ ಅಮ್ಮ ನ ಆಶೀರ್ವಾದ ಪಡೆದು ಕಾರ್ಯಕ್ರಮ ಮಾಡುತ್ತೇವೆ.ಅಲ್ಲಿಂದಲೇ ಯುವಕರನ್ನು ಒಟ್ಟುಗೂಡಿಸುತ್ತೇವೆ ಎಂದ ಪ್ರಜ್ವಲ್ ಅವರು, ಇವತ್ತು ನಮ್ಮಿಬ್ಬರನ್ನು ನೋಡಿ ಕುಮಾರಣ್ಣಗೆ ಬಹಳ ಸಂತೋಷವಾಗಿದೆ ಎಂದು ಅವರು ಹೇಳಿದರು.

ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ,ಪ್ರಜ್ವಲ್ ನನ್ನ ತಮ್ಮ.ಒಂದೇ ವೇದಿಕೆಯಲ್ಲಿ ಕಾಣಿಸಲ್ಲ ಅಂತಿದ್ದರು.ಇವತ್ತು ಜತೆ ಯಲ್ಲಿದ್ದೇವೆ.ಯಾವತ್ತೂ ಇರುತ್ತೇವೆ.ಅನುಮಾನವೇ ಬೇಡ.ಇವತ್ತು ನಾವು ಬೇರೆ ಬೇರೆ ಎಂದು ಬಿಂಬಿಸಿದ್ದವರಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸಿದ್ದೇನೆ ಎಂದರು.2023 ನಮ್ಮದೇ ಸಂಕಲ್ಪ ಬಲದಿಂದ ಮುಂದೆ ಹೋಗೋಣ.ನಮ್ಮ ಪಕ್ಷದ ಸರಕಾರ ಬರಲು ಎಲ್ಲಾ ಶ್ರಮವನ್ನು ಹಾಕೋಣ.ನಾನು ಮತ್ತು ಪ್ರಜ್ವಲ್ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತೇವೆ ಎಂದು ನಿಖಿಲ್ ಅವರು ತಿಳಿಸಿದರು.




