ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 152ನೇ ಜನ್ಮದಿನ ಹಾಗೂ ಮಾಜಿ ಪ್ರಧಾನಿಗಳಾದ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 117ನೇ ಜನ್ಮದಿನವನ್ನು ಬೆಂಗಳೂರಿನ ವಿಧಾನ ಸೌಧದ ಆವರಣದಲ್ಲಿ ಆಚರಿಸಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧ ಆವರಣದಲ್ಲಿರುವ ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು, ಹಾಗೂ ಶಾಸ್ತ್ರಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಮಹಾನ್ ಚೇತನಗಳನ್ನು ನೆನಪಿಸಿಕೊಂಡರು. ಅವರ ಹುಟ್ಟುದಿನ ಒಟ್ಟಿಗೆ ಬಂದಿರೋದು ಉತ್ತಮಸಂದೇಶ ನಾಡಿಗೆ ಸಿಕ್ಕಿದೆ. ಇಬ್ಬರಲ್ಲಿ ಸತ್ಯ ಎನ್ನುವ ಅಂಶ ಸಾಮಾನ್ಯವಾಗಿತ್ತು. ಸತ್ಯದ ಮಾರ್ಗದಲ್ಲಿ ನುಡಿದರಲ್ಲದೆ, ನಡೆದವರು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
ಗ್ರಾಮಗಳ ಅಭಿವೃದ್ಧಿಯಾದ್ರೆ, ದೇಶದ ಅಭಿವೃದ್ಧಿ ಸಾಧ್ಯ ಎನ್ನುವ ಗಾಂಧಿಯವರ ದೂರದೃಷ್ಠಿಯನ್ನು ಸಾಕಾರಗೊಳಿಸಬೇಕಿದೆ ಎಂದು ತಿಳಿಸಿದ ಅವರು, ಇಬ್ಬರ ಸರಳ ಬದುಕು ನಮಗೆಲ್ಲರಿಗೆ ಪ್ರೇರಣೆ ಎಂದು ತಿಳಿಸಿದರು.
ಶಾಸ್ತ್ರಿಯವರು ಪ್ರಾಮಾಣಿಕತೆಯ ಪ್ರತೀಕರಾಗಿದ್ದಾರೆ. ಅತ್ಯುನ್ನತ ಸ್ಥಾನದಲ್ಲಿದ್ರೂ ಸರಳತೆ, ಸೂಕ್ಷ್ಮತೆ ಅವರನ್ನು ಉನ್ನತ ಸ್ಥಾನಕ್ಕೇರಿಸಿತ್ತು.