ಕೇಶವ ಕೃಪ ಡೈರೆಕ್ಷನ್ ನಲ್ಲಿ ಸಿಎಂ ಬೊಮ್ಮಾಯಿ ಸರ್ಕಾರ : ಮೋದಿ ಅವರು ಆರ್ ಎಸ್ ಎಸ್ ಕೀಲುಗೊಂಬೆ : ಹೆಚ್ ಡಿ ಕುಮಾರಸ್ವಾಮಿ ಆರೋಪ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರ್ ಎಸ್ ಎಸ್ ಕೀಲುಗೊಂಬೆ ಆಗಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜಪೇಟೆಯ ಕೇಶವ ಕೃಪದ ಕೃಪಾಕಟಾಕ್ಷ, ಡೈರೆಕ್ಷನ್’ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದಾರೆ.
ಬಿಡದಿಯ ತೋಟದಲ್ಲಿ ಕಳೆದ ಏಳು ದಿನಗಳಿಂದ ನಡೆದ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಾಗಾರದ ಕೊನೆ ದಿನವಾದ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಆರ್ ಎಸ್ ಎಸ್ ಬಗ್ಗೆ ಕೆಲ ಸ್ಫೋಟಕ ಅಂಶಗಳನ್ನು ಮಾಜಿ ಮುಖ್ಯಮಂತ್ರಿಗಳು ಬಿಚ್ಚಿಟ್ಟರು.


ಕಳೆದ ಹಲವು ದಿನಗಳಿಂದ ಆರ್ ಎಸ್ ಎಸ್ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಹಲವಾರು ಪುಸ್ತಕಗಳನ್ನು ಓದುತ್ತಿದ್ದೇನೆ. ಆರ್ ಎಸ್ ಎಸ್ ಹೇಗೆ ಕೆಲಸ ಮಾಡುತ್ತಿದೆ ಹಾಗೂ ಚುನಾಯಿತ ಸರಕಾರಗಳನ್ನು ಹೇಗೆ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುತ್ತಿದೆ ಎಂಬುದನ್ನು ತಿಳಿದು ನನಗೆ ಆಘಾತ ಆಗಿದೆ ಎಂದು ತಿಳಿಸಿದರು.
ಸಂಘದ ಐಡಿಯಾಲಜಿ ಹೊಂದಿರುವ ಅಧಿಕಾರಿಗಳನ್ನು ತನ್ನ ತಾಳಕ್ಕೆ ತಕ್ಕಂತೆ ಆರ್ ಎಸ್ ಎಸ್ ಬಳಸಿಕೊಳ್ಳುತ್ತಿದೆ, ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಸಂಘದ ತರಬೇತಿ ಪಡೆದು ಕೆಲಸ ಮಾಡುತ್ತಿದ್ದಾರೆ ಅನ್ನುವ ಮಾತಿದೆ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನಾಯಕರಿಗೆ ಸ್ವಾತಂತ್ರ್ಯ ಇಲ್ಲ. ನಮ್ಮ ರಾಜ್ಯದ ಬಿಜೆಪಿ ಸರಕಾರದ ಎರಡನೇ ಮುಖ್ಯಮಂತ್ರಿ ಕೇಶವಕೃಪಕ್ಕೆ ಏಕೆ ಹೋದರು. ಎಲ್ಲಿಯೇ ಹೋದರೂ ಆರ್ ಎಸ್ ಎಸ್ ಕಚೇರಿಗಳಿಗೆ ಯಾಕೆ ಹೋಗುತ್ತಾರೆ? ರಾಜ್ಯದಲ್ಲಿ ಇರುವುದು ಸಂಪೂರ್ಣ ಆರ್ ಎಸ್ ಎಸ್ ಸರಕಾರ. ಕೇಶವಕೃಪಕ್ಕೆ ಜನ ಮತ ಹಾಕಿಲ್ಲ ಎಂಬುದನ್ನು ಆಡಳಿತ ನಡೆಸುವವರು ಅರ್ಥ ಮಾಡಿಕೊಳ್ಳಬೇಕು ಕುಮಾರಸ್ವಾಮಿ ಹೇಳಿದರು.
ಇವರಿಗೆ ದೇಶದ ಮತ್ತು ರಾಜ್ಯದ ಪ್ರಗತಿಯ ಅಜೆಂಡಾ ಇಲ್ಲ. ಜನರನ್ನು ಮನುಸ್ಮೃತಿ ಯುಗಕ್ಕೆ ತೆಗೆದುಕೊಂಡು ಹೋಗುವುದೇ ಅವರ ಅಜೆಂಡಾ. ನಾವು ಕೂಡ ಹಿಂದುಗಳೇ. ನಮಗೆ ಹಿಂದುತ್ವಕ್ಕಿಂತ ಮೊದಲು ದುಡಿಯುವ ಕೈಗೆ ದುಡುಮೆ ಬೇಕು. ಅನ್ನ ಬೇಕು. ಸರ್ಕಾರ ಈ ರಾಜ್ಯದ, ದೇಶದ ಬಡವರ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಅಟಲ್ ಬಿಹಾರಿ ವಾಜಪೇಯಿ ಎಂಥ ನಾಯಕರು ಎಂಬುದು ನಮಗೆಲ್ಲರಿಗೂ ಗೊತ್ತು. ಹೆಜ್ಜೆ ಹೆಜ್ಜೆಗೂ ಅವರ ಸರಕಾರಕ್ಕೆ ಅಡ್ಡಿ ಮಾಡಿತು ಆರ್ ಎಸ್ ಎಸ್ . ಜಿನ್ನಾ ಅವರನ್ನು ಹೊಗಳಿದ ಒಂದೇ ಕಾರಣಕ್ಕೆ ಅಡ್ವಾಣಿ ಅವರನ್ನು ರಾಜಕೀಯವಾಗಿ ಮುಗಿಸಲಾಯಿತು. ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಅಪಮಾನಕರ ರೀತಿಯಲ್ಲಿ ಕೆಳಗಿಳಿಸಲಾಯಿತು ಎಂದು ಆರೋಪಿಸಿದರು.


ಈ ದೇಶದಲ್ಲಿ ಸಣ್ಣ ಪುಟ್ಟ ಸಮಾಜಗಳಿಗೆ ಶಿಕ್ಷಣ, ಆರೋಗ್ಯ ಕೊಟ್ಟಿರುವುದು ಆರ್ ಎಸ್ ಎಸ್ ಅಲ್ಲ. ಹಿಂದುತ್ವ ಹಾಗೂ ಕೋಮುವಾದವನ್ನು ಹರಡುವ ಕೆಲಸವನ್ನು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಅದು ಮಾಡಿಲ್ಲ. ದೇಶದ ಬಡತನದ ಬಗ್ಗೆ, ಸಮಸ್ಯೆಗಳ ಬಗ್ಗೆ ಆರ್ ಎಸ್ ಎಸ್ ಸಭೆಗಳಲ್ಲಿ ಚರ್ಚೆ ಆಗಿಲ್ಲ. ದೇಶವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವುದು ಒಂದೇ ಅವರ ಅಜೆಂಡಾ ಎಂದು ಟಿಕೀಸಿದರು.
ಆರ್ ಎಸ್ ಎಸ್ ಕೇಂದ್ರ ಬಿಂದು ಇಟ್ಟಕೊಂಡು ಬಿಜೆಪಿ ಕೆಲಸ ಮಾಡುತ್ತಿದೆ. ರಾಜಕೀಯವಾಗಿ ಪಕ್ಷಕ್ಕೆ ಸ್ವಾತಂತ್ರ್ಯ ಇಲ್ಲ. ಕೆಲ ವರ್ಷಗಳ ಹಿಂದೆ ಬಿಜೆಪಿಯನ್ನೆ ವಿಸರ್ಜಿಸಿ ಹೊಸ ಪಕ್ಷ ರಚನೆಯತ್ತ ಅದು ಅಲೋಚನೆ ಮಾಡಿತ್ತು ಎಂದು ಅನೇಕ ಸತ್ಯಗಳನ್ನು ಕುಮಾರಸ್ವಾಮಿ ಬಹಿರಂಗ ಪಡಿಸಿದರು.
ವಿಧೇಯಕದ ಬದಲು ವಿಶ್ವಾಸ ಮೂಡಿಸಬೇಕು
ಮತಾಂತರ ನಿಷೇಧ ವಿಧೇಯಕದ ಬದಲು ಜನರಲ್ಲಿ ವಿಶ್ವಾಸ ತುಂಬಬೇಕು. ಉದ್ಯೋಗ ಶಿಕ್ಷಣ ಕೊಡಬೇಕು. ಆರ್ಥಿಕ ಶಕ್ತಿ ತಂದುಕೊಡಬೇಕು ಇದರಿಂದ ಮತಾಂತರ ತಡೆಯಬಹುದು ಎಂದು ಕುಮಾರಸ್ವಾಮಿ ತಿಳಿಸಿದರು.
ಮತಾಂತರ ನಿಷೇಧ ವಿಧೇಯಕದಿಂದ ಮತಾಂತರವನ್ನು ನಿಲ್ಲಿಸಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ, ವಸತಿ ಮುಂತಾದ ಸೌಲಭ್ಯಗಳನ್ನು ಉತ್ತಮವಾಗಿ ಒದಗಿಸಿದ್ದರೆ ಮತಾಂತರ ಎನ್ನುವ ಶಬ್ದವೇ ಕೇಳುತ್ತಿರಲಿಲ್ಲ. ಸ್ವಯಂ ಪ್ರೇರಿತರಾಗಿ ಬೇರೆ ಧರ್ಮಕ್ಕೆ ಜನ ಹೋಗುತ್ತಿರುವ ಉದಾಹರಣೆ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಬೌದ್ಧ ಧರ್ಮಕ್ಕೆ ಹೋದರು. ಇದು ಇಂದಿನ ಸಮಸ್ಯೆ ಅಲ್ಲ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.


ಬಿಜೆಪಿಯವರಿಗೆ ಬೇಕಾಗಿರುವುದು ಶಾಂತಿ ಅಲ್ಲ, ನೆಮ್ಮದಿ ಅಲ್ಲ. ಅವರು ಪದೇಪದೆ ಈ ವಿಚಾರ ಹೇಳುತ್ತಿದ್ದಾರೆ. ವಿಧಾನಸಭಾ ಕಲಾಪದಲ್ಲಿ ಮತಾಂತರದ ಬಗ್ಗೆ ಚರ್ಚೆಯನ್ನು ಗಮನಿಸಿದ್ದೇನೆ. ಶಾಸಕರ ತಾಯಿ ಒಬ್ಬರು ಮತಾಂತರ ಆಗಿದ್ದರ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆದರೆ, ಇಂದಿನ ಕಾರ್ಯಗಾರದಲ್ಲಿ ಭಾಗಿಯಾಗಿದ್ದ ಕ್ರೈಸ್ತ ಗುರು ಒಬ್ಬರು, ಬೈಬಲ್’ನಲ್ಲಿ ಒತ್ತಾಯ ಮಾಡಿ ಮತಾಂತರ ಮಾಡುವುದಕ್ಕೆ ಬೆಂಬಲ ಇಲ್ಲ. ಪ್ರೀತಿಯನ್ನು ನಾವು ಬಯಸುವವರು. ನಾವು ಬೇರೆ ದೇಶದಲ್ಲಿ ಹುಟ್ಟಿದ್ದಲ್ಲ. ನಾವು ಭಾರತೀಯರೇ ಅಂತ ಹೇಳಿದರು. ಅವರ ಮಾತುಗಳ ಬಗ್ಗೆ ಅಲೋಚನೆ ಮಾಡಬೇಕಿದೆ, ಅದು ಸತ್ಯವಾದ ಮಾತು ಎಂದರು.
ಕಾಂಗ್ರೆಸ್ ತಪ್ಪು ಮಾಡಿದೆ
ಕಾಂಗ್ರೆಸ್ ಸರಿಯಾಗಿದ್ದಿದ್ದರೆ ದೇಶದ ಸ್ಥಿತಿ ಬೇರೆ ರೀತಿಯೇ ಇರುತ್ತಿತ್ತು. ಅವರ ಸ್ವೇಚ್ಛಾ ವರ್ತನೆಯೇ ಇಂತಹ ವಾತಾವರಣ ನಿರ್ಮಾಣ ಮಾಡಿ ಬಿಜೆಪಿ ಆಟಾಟೋಪಗಳಿಗೆ ಅಂಕೆ ಇಲ್ಲದಂತೆ ಆಗಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲೂ ಆ ಪಕ್ಷದ್ದು ಆದೆ ಕತೆ. ಸುಧೀರ್ಘ ಅಧಿಕಾರ ಇದ್ದಾಗ ಏನು ಮಾಡಲಿಲ್ಲ. ಮೂರು ಸಾವಿರ ರೈತರು ಸಾಯುವರೆಗೂ ಏನೂ ಗೊತ್ತಿಲ್ಲ ಅಂತ ಇದ್ದವರು ಆಗಿನ ಮುಖ್ಯಮಂತ್ರಿ. ಈಗ ರಾಜಕೀಯಕ್ಕೆ ಹಾಗೂ ಅಧಿಕಾರ ಹಿಡಿಯಲು ತರಾತುರಿಯಲ್ಲಿ ಪಂಜಿನ ಮೆರವಣಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇವತ್ತಿನ ಏಳನೇ ದಿನ ಕಾರ್ಯಗಾರ ನಡೆಯಿತು. ಪ್ರಥಮ ಬಾರಿಗೆ ಕ್ರೈಸ್ತ ಸಮಾಜದವರಿಗೆ ಕಾರ್ಯಗಾರ ಮಾಡಲಾಯಿತು. ಆ ಸಮುದಾಯದ ಪ್ರತಿನಿಧಿಗಳ ಜತೆ ಚರ್ಚೆ ನಡೆಸಲಾಯಿತು. ಅವರಿಗೆ ನಂಬಿಕೆ, ವಿಶ್ವಾಸ ಮೂಡಿಸುವ ಕೆಲಸವನ್ನು ಪಕ್ಷ ಮಾಡಿದೆ. ಪ್ರಥಮ ಬಾರಿಗೆ ನಾವು ಕೂಡ ನಿಮ್ಮ ಜೊತೆಗೂಡುತ್ತೇವೆ ಅಂತ ಬಂದಿದ್ದಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡಲಾಗುವುದು. ಕ್ರೈಸ್ತ ಸಮುದಾಯದ ಜನರ ಬಗ್ಗೆ ಸರಕಾರ ಮೊಸಳೆ ಕಣ್ಣೀರು ಹಾಕಿದೆ ಅಷ್ಟೇ. ಅವರಿಗೆ ರಕ್ಷಣೆ ನೀಡುವ ಕೆಲಸ ಆಗಿಲ್ಲ ಎಂದರು.

More News

You cannot copy content of this page