ಬೆಂಗಳೂರು: ಕಳೆದ ಒಂದು ವರ್ಷದಿಂದ ಕೇಂದ್ರ ಪಶುಸಂಗೋಪನೆ ಇಲಾಖೆಯೊಂದಿಗೆ ಸಂವಹನ ನಡೆಸಿದ ಪರಿಣಾಮ ರಾಜ್ಯಕ್ಕೆ 275 ಪಶುಸಂಜೀವಿನಿ ಸಂಚಾರಿ ಪಶು ಚಿಕಿತ್ಸಾ ವಾಹನ ರಾಜ್ಯಕ್ಕೆ ದೊರಕಿವೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಪತ್ರಿಕಾಗೊಷ್ಟಿ ನಡೆಸಿದ ಸಚಿವರು, ರಾಜ್ಯದಲ್ಲಿ ಪಶುಸಂಜೀವಿನಿ ಯಶಸ್ವಿಯಾಗಿದ್ದು ಎಲ್ಲ ತಾಲೂಕುಗಳಿಂದ ಬೇಡಿಕೆ ಹೆಚ್ಚು ಬರುತ್ತಿತ್ತು. ರೈತರ ಮನೆ ಬಾಗಿಲಿಗೆ ಸಂಚಾರಿ ಪಶು ಚಿಕಿತ್ಸಾ ವಾಹನ ತೆರಳಿ ಚಿಕಿತ್ಸೆ ನೀಡುತ್ತಿರುವುದರಿಂದ ರೈತರಿಗೆ ಈ ಯೋಜನೆ ಹೆಚ್ಚು ಉಪಯೋಗವಾಗಿದೆ ಎಂದು ಸಚಿವರು ತಿಳಿಸಿದರು.

ಅಲ್ಲದೇ ಎಲ್ಲ ತಾಲೂಕುಗಳಿಗೂ ಇದನ್ನು ವಿಸ್ತರಣೆ ಮಾಡಬೇಕು ಎಂದು ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಪಶುಸಂಗೋಪನೆ ಇಲಾಖೆಯ ಕೇಂದ್ರ ಸಚಿವರುಗಳೊಂದಿಗೆ ನಿರಂತರವಾಗಿ ಚರ್ಚೆ ನಡೆಸಿದ ಪರಿಣಾಮ ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯಕ್ಕೆ 275 ಪಶು ಚಿಕಿತ್ಸಾ ವಾಹನಗಳು ದೊರೆತಿವೆ ಎಂದು ವಿವರಿಸಿದರು.
ವಾಹನ ಒದಗಿಸಲು ಕೇಂದ್ರದಿಂದ ಒಟ್ಟು 44 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದ್ದು ಪ್ರತಿ ಪಶು ಚಿಕಿತ್ಸಾ ವಾಹನಕ್ಕೆ ರೂ.16 ಲಕ್ಷ ವೆಚ್ಚವಾಗಲಿದೆ. ವಾರ್ಷಿಕವಾಗಿ ವಾಹನ ನಿರ್ವಹಣೆ ಪಿಪಿಪಿ ಮಾದರಿಯಲ್ಲಿ ನಡೆಯಲಿದೆ, ಪ್ರತಿ ವರ್ಷ ವಾಹನ ಹಾಗೂ ಸಿಬ್ಬಂದಿಯ ನಿರ್ವಹಣೆಗೆ ಹೆಚ್ಚುವರಿಯಾಗಿ 50 ಕೋಟಿ ರೂ. ಅನುದಾನವನ್ನು ಕೇಂದ್ರ ಹಾಗೂ ರಾಜ್ಯದ ಪಾಲುದಾರಿಕೆಯಲ್ಲಿ ನೀಡಲಾಗಿದೆ. ರಾಜ್ಯದ ಪಾಲು ಶೇ 40 ಹಾಗೂ ಕೇಂದ್ರದ ಪಾಲು ಶೇ 60 ಇರಲಿದೆ ಎಂದರು.
ವಾಹನದಲ್ಲಿ ಒರ್ವ ಪಶುವೈದ್ಯರು, ಪಶುವೈದ್ಯಕೀಯ ಸಹಾಯಕ ಹಾಗೂ ನುರಿತ ಚಾಲಕ/ಪರಿಚಾರಕ ಇರಲಿದ್ದಾರೆ. ಪಶು ಕಲ್ಯಾಣ ಸಹಾಯವಾಣಿ ದೇಶದಲ್ಲೇ ಮೊದಲಬಾರಿಗೆ ರಾಜ್ಯದಲ್ಲಿ ಸ್ಥಾಪನೆ ಆಗಿದ್ದು ಅತ್ಯಂತ ಯಶಸ್ವಿಯಾಗಿ ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪಶುಸಂಗೋಪನೆ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಇದಿಂದಾಗಿ ಪಶುಸಂಜೀವಿನಿ ರಾಜ್ಯಾದ್ಯಂತ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ.
ರಾಜ್ಯಕ್ಕೆ 50 ಲಕ್ಷ ಡೋಸ್
ಸದ್ಯ ರಾಜ್ಯದಲ್ಲಿ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಪಶುಸಂಗೋಪನೆ ಇಲಾಖೆ ತೊಡಗಿದೆ. ಸದ್ಯ ಕೇಂದ್ರದಿಂದ ರಾಜ್ಯಕ್ಕೆ 50 ಲಕ್ಷ ಡೋಸ್ ದೊರೆತಿದ್ದು ರಾಜ್ಯದಲ್ಲಿ ಕಾಲುಬಾಯಿ ರೋಗ ಕಂ ಡಬಂದ ಪ್ರದೇಶದಲ್ಲಿ ಆದ್ಯತೆಯ ಮೇಲೆ ಲಸಿಕೆ ವಿತರಣೆ ತುರ್ತಾಗಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಕರ್ನಾಟಕ ಅನುಷ್ಠಾನಕ್ಕೆ ತಂದ ವಿನೂತನ ಯೋಜನೆ ಪಶುಸಂಜೀವಿಯ ಪರಿಕಲ್ಪನೆಯನ್ನು ದೇಶದ ಎಲ್ಲಾ ರಾಜ್ಯಗಳಿಗೆ ಕೇಂದ್ರದಿಂದ ವಿಸ್ತರಣೆ ಮಾಡುತ್ತಿರುವುದರ ಬಗ್ಗೆ ಸ್ವತಃ ಕೇಂದ್ರ ಪಶುಸಂಗೋಪನೆ ಸಚಿವರು ಕರೆ ಮೂಲಕ ತಿಳಿಸಿದ್ದಾರೆ. ಇದು ಕರ್ನಾಟಕಕ್ಕೆ ಹಾಗೂ ಪಶುಸಂಗೋಪನೆ ಇಲಾಖೆಗೆ ಅತ್ಯಂತ ಸಂತೋಷದ ಸಂಗತಿ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.