ಬೆಂಗಳೂರು: ಪಕ್ಷವನ್ನು ನಿಮ್ಮ ಕೈಗೆ ತೆಗೆದುಕೊಳ್ಳಿ, ಇಲ್ಲದಿದ್ದರೆ ರಾಜ್ಯಕ್ಕೆ ಕರಾಳ ದಿನ ಬರುತ್ತೆ! ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಲಹೆ ನೀಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮಾರ್ಮಿಕ ನಗು ಬೀರಿದ್ದು ಗಮನಸೆಳೆಯಿತು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಸಿದ್ದರಾಮಯ್ಯ ಪ್ರಾರಂಭ ಮಾಡುವ ಮುನ್ನ, ಬಜೆಟ್ ಯಾರಿಗೂ ಇಷ್ಟ ಇಲ್ಲ, ಆದರೆ ಶಾಸಕರಿಗೆ ನನ್ನ ಹಾಗೆ ಹೇಳಲು ಆಗುವುದಿಲ್ಲ. ಪಾಪ, ಯತ್ನಾಳ್ ಗೆ ಕೂಡಾ ಇಷ್ಟ ಇಲ್ಲ, ನನ್ನ ಹಾಗೆ ಹೇಳಲು ಆಗಲ್ಲ ಎಂದರು.
ಇದಕ್ಕೆ ಉತ್ತರಿಸಿದ ಶಾಸಕ ಯತ್ನಾಳ್, ಇಲ್ಲಿ ನಿಮ್ಮ ಬೆಂಬಲಿಗರು ಮಾತ್ರ ಇದ್ದಾರೆ, ಕಾಂಗ್ರೆಸ್ ಈ ಬಜೆಟ್ ಗೆ ವಿರೋಧ ಮಾಡುತ್ತೋ ಅಥವಾ ನಿಮ್ಮ ಬಣ ಮಾತ್ರ ವಿರೋಧ ಮಾಡುತ್ತೋ? ನಿಮ್ಮ ಪಕ್ಷವನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯ ಕರಾಳ ದಿನ ಎದುರಿಸಬೇಕಾಗುತ್ತದೆ ಎಂದರು.

ಯತ್ನಾಳ್ ಮಾತಿಗೆ ನಗುತ್ತಾ ಆಯ್ತು ಆಯ್ತು ಎಂದು ಸಿದ್ದರಾಮಯ್ಯ ಉತ್ತರಿಸಿದರು. ಇದೇ ಸಂದರ್ಭದಲ್ಲಿ, ನಿಮ್ಮ ಬಗ್ಗೆ ನಿಮ್ಮ ಕಡೆ ಪ್ರೀತಿ ಇಲ್ಲದಿದ್ದರೂ ಈ ಕಡೆ ಜಾಸ್ತಿ ಇದೆ ಸಾರ್ ಎಂದು ಸಿದ್ದರಾಮಯ್ಯಗೆ ಹೇಳಿದ ಸಚಿವ ಸಿ.ಸಿ. ಪಾಟೀಲ್ ಕಾಳೆಲೆದರು. ಅದಕ್ಕೆ ನೀನು ಯಾವಾಗಲೂ ನನ್ನ ಪರ ಕೂತ್ಕೋ ಎಂದು ಅವರದ್ದೇ ಶೈಲಿಯಲ್ಲಿ ಹೇಳಿದರು.




