ಬೆಂಗಳೂರು: ನನ್ನ ಜೊತೆಗೆ ವ್ಯವಹಾರ ಮಾಡಿದವರಿಗೆಲ್ಲ ಸಿಬಿಐ ನೊಟೀಸ್ ನೀಡುತ್ತಿದೆ, ವಿಜಯ ಮುಳುಗುಂದ ಮಾತ್ರವಲ್ಲ 30-40 ಜನರಿಗೆ ನೊಟೀಸ್ ಕೊಡುತ್ತಿದ್ದಾರೆ, ಎಷ್ಟೂ ಅಂತಾ ಕಿರುಕುಳ ಕೊಡ್ತೀರಾ, ಕಿರುಕುಳ ಕೊಡೊದ್ದಕ್ಕೂ ಒಂದು ಲಿಮಿಟ್ ಇರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಗಳದ್ದೂ ವ್ಯವಹಾರ ತನಿಖೆ ಮಾಡಿಸಿ ನೋಡೋಣ, ಶಾಸಕರಾಗಿದ್ದಾಗ ಎಷ್ಟಿತ್ತು, ಈಗ ಮಂತ್ರಿಗಳಾದಾಗ ಅವರ ಆಸ್ತಿ ಎಷ್ಟಿದೆ ಎನ್ನುವುದನ್ನು ತನಿಖೆ ಮಾಡಿಸಿ. ಅವರೆಲ್ಲ ಬೆಳ್ಳುಳ್ಳಿ ಅಡಿಕೆ ಬೆಳೆದು ಆಸ್ತಿ ಮಾಡಿದ್ದಾರಾ ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.
ನಾನೂ ಮಂತ್ರಿಗಳ ಆಸ್ತಿ ವಿವರವನ್ನು ಆರ್ಟಿಐ ಮೂಲಕ ಎಲ್ಲಾ ದಾಖಲೆಗಳನ್ನು ಸಂಗ್ರಹ ಮಾಡಿದ್ದೇನೆ, ನನಗೆ ಕಿರಕುಳ ನೀಡಲು ಇನ್ನೇನು ಬಾಕಿ ಉಳಿದಿದೆ. ನನ್ನ ತಾಯಿಯ ಆಸ್ತಿಗೆ ನಾನು ಬೇನಾಮಿ ಅಂತ ಸೀಜ್ ಮಾಡುತ್ತಾರೆ. ಇದರಿಂದಲೇ ತಿಳಿಯುತ್ತೇ ಬಾಕಿ ಏನು ಉಳಿದಿದೆ? ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.
ನಾನು ಆಗಸ್ಟ್ ಗೆ ಶುರುವಾಗತ್ತೆ ಅಂತ ಈ ಹಿಂದೆನೇ ಹೇಳಿದ್ದೆ, ಅದೇ ರೀತಿ ಈಗ ನಡೆಯುತ್ತಿದೆ. ನಮಗೂ ಮಾಹಿತಿ ಕೊಡೋರು ಇದಾರೆ, ಏನೇನ್ ಮಾಡುತ್ತಾರೆ ಅನ್ನೋದು ನಮಗೆ ಹೇಳೋರು ಇದಾರೆ. ನನ್ನದು ಇನ್ನೇನು ಉಳಿದಿದೆ..?ಬಿಜೆಪಿಯಲ್ಲಿ ಇರೋರೆಲ್ಲಾ ಸತ್ಯ ಹರಿಶ್ಚಂದ್ರರಾ? ಎಂದು ಪ್ರಶ್ನಿಸಿದರು.
ಬಿಜೆಪಿ ಅನುಕೂಲಗೋಸ್ಕರ ಆರೋಪ ಮಾಡುತ್ತಿದೆ
ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ಕಾಂಗ್ರೆಸ್ ಏಜೆಂಟ್ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವತ್ತಿನ ತನಕ ನನ್ನನ್ನಾಗಲಿ, ಸಿದ್ದರಾಮಯ್ಯನವರನ್ನಾಗಲಿ ಅವರು ಭೇಟಿ ಆಗಿರಲಿಲ್ಲ, ನಿನ್ನೆ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ಏಜೆಂಟ್ ಆಗಿದ್ರೆ ಯಾಕೆ ಸಿಎಂ ಭೇಟಿ ಮಾಡಿದ್ದರು? ಇವರು ಇವರ ಅನುಕೂಲಕ್ಕೋಸ್ಕರ ಆರೋಪ ಮಾಡುತ್ತಾರೆ ಎಂದು ಆರೋಪಿಸಿದರು.

ಬಿಜೆಪಿಯವರು ಏಳು ಎಂಟು ಕಡೆ ಜನೋತ್ಸವ ಆಚರಣೆ ಮಾಡ್ತಾರಂತೆ ಮಾಡಿಕೊಳ್ಳಲಿ. ವಿರೋಧ ಪಕ್ಷವಾಗಿ ನಾವು ಅವರ ಭ್ರಷ್ಟೋತ್ಸವ ಆಚರಣೆ ಮಾಡಬೇಕಲ್ಲ, ವಿರೋಧ ಪಕ್ಷವಾಗಿ ನಮ್ಮ ಮೇಲೂ ಜವಾಬ್ದಾರಿ ಇದೆಯಲ್ಲ. ಇವರ ಮಾಜಿ ಸಚಿವರೊಬ್ಬರು ಅಪೆಕ್ಸ್ ಬ್ಯಾಂಕ್ ಗೆ ೬೦೦-೭೦೦ ಕೋಟಿ ಸಾಲ ಬಾಕಿ ಇಟ್ಕೊಂಡಿದ್ದಾರೆ. ಅವರ ಬಗ್ಗೆಯೂ ಮಾತನಾಡಬೇಕಲ್ಲ ನಾವು? ಎಂದರು.
ಈಶ್ವರಪ್ಪಗೆ ತನಿಖೆ ಆಗೋ ಮೊದಲೇ ಕ್ಲಿನ್ ಚಿಟ್ ಕೊಟ್ರಲ್ಲ.ಅದರ ಬಗ್ಗೆಯೂ ನಾವು ಮಾತಾಡಬೇಕಲ್ಲ. ಇದೇ ಕೋಲಾರ ಇನಚಾರ್ಜ್ ಮಿನಿಸ್ಟರ್ ವಿಷಯಕ್ಕೆ ಚಾಮರಾಜನಗರ ರೈತರು ಪತ್ರ ಬರೆದಿದ್ದರಲ್ಲ. ಪ್ರಧಾನಿಗಳಿಗೇ ಪತ್ರ ಬರೆದರೂ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಕಿಡಿಕಾರಿದರು.




