ಬೆಂಗಳೂರು: ಎರಡು ಬಾರಿ ಸಿಎಂ ಆದವರು ಇಂಥ ಕೆಳಮಟ್ಟಕ್ಕೆ ಇಳಿಯೋದು ಸಂಸ್ಕಾರ ಅಲ್ಲ. ಅವ್ರ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕು. ಇದೆಲ್ಲಾ ಜಾಸ್ತಿ ದಿನ ನಡೆಯಲ್ಲ. ಇದನ್ನೇ ಮುಂದುವರೆಸಿದ್ರೆ ನಮ್ಮ ಕೆಲಸ ನಾವು ಮಾಡಬೇಕಾಗುತ್ತೆ ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ
ನಡೆಸಿದ್ದಾರೆ.
ಅನಾಮಧೇಯ ಪತ್ರ ರಾಜಭವನಕ್ಕೆ ಬಂದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆ ಶಾಸಕರೊಂದಿಗೆ ರಾಜ್ಯಪಾಲರನ್ನು ಸಚಿವ ಚೆಲುವರಾಯಸ್ವಾಮಿ ನೇತೃತ್ವದ ನಿಯೋಗ ಭೇಟಿ ಮಾಡಿತು. ಮಧ್ಯಾಹ್ನ ೨ ಗಂಟೆಗೆ ರಾಜ್ಯಪಾಲರ ಭೇಟಿ ಮಾಡಿದ ಸಚಿವ ಚೆಲುವರಾಯಸ್ವಾಮಿ, ಪಿ.ಎಂ ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡ್ಡಿಸಿದ್ದೇಗೌಡ, ರವಿಗಣಿಗಾ, ಕೆ.ಎಂ ಉದಯ್ ಗೌಡ, ದಿನೇಶ್ ಗೂಳಿಗೌಡ, ಮಧು ಮಾದೇಗೌಡ ಹಾಗೂ ಮಾಜಿ ಶಾಸಕರಾದ ಹೊನ್ನಲಗೆರೆ ಶ್ರೀ ರಾಮಕೃಷ್ಣ, ಕೆ.ಬಿ ಚಂದ್ರಶೇಖರ್ ನಿಯೋಗ ಪತ್ರದ ಕುರಿತು ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮಕ್ಕೆ ಹೇಳಿಕೆ ನೀಡಿದ ಸಚಿವ ಚಲುವರಾಯಸ್ವಾಮಿ, ನನ್ನ ಹೇಳಿಗೆಯನ್ನು ಸಹಿಸದೇ, ಜೆಡಿಎಸ್ ನವರೇ ಈ ಕೆಲಸ ಮಾಡಿದ್ದಾರೆ ಎಂದು ನೇರವಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಮೈತ್ರಿ ಸರ್ಕಾರ ಬರುತ್ತೆ ಅಂದುಕೊಂಡಿದ್ರು ಆಗಲಿಲ್ಲ. ಚೆಲುವರಾಯಸ್ವಾಮಿನ ಸಹಿಸಲು ಆಗ್ತಿಲ್ಲ. ಮಂಡ್ಯದಲ್ಲಿ ಆರು ಸ್ಥಾನ ಗೆದ್ದಿರೋದಕ್ಕೆ ಸಹಿಸ್ತಿಲ್ಲ. ಸಿದ್ದು, ಡಿಕೆಶಿ ನಿಯಂತ್ರಣ ಅವ್ರಿಂದ ಆಗ್ತಿಲ್ಲ. ಅದಕ್ಕೆ ಫಾರಿನ್ ಗೆ ಹೋಗಿದ್ದಾರೆ ಅನಿಸುತ್ತಿದೆ. ಪತ್ರ ಬರೆದವನು ಯಾರು, ಮನೆ ಅಡ್ರೆಸ್ ಗೊತ್ತಾಗ್ತಿಲ್ಲ. ಪತ್ರದಲ್ಲಿ ಕುಮಾರಸ್ವಾಮಿ ನಮ್ಮ ನಾಯಕರು ಅಂತಾ ಮೆನ್ಶನ್ ಮಾಡಿದ್ದಾರೆ. ಜನತಾದಳದವರೇ ಇದನ್ನ ಕ್ರಿಯೇಟ್ ಮಾಡಿದ್ದಾರೆ. ಚೆಲುವರಾಯಸ್ವಾಮಿ ಒಕ್ಕಲಿಗರು ಅದಕ್ಕೆ ಸಹಿಸಲು ಆಗ್ತಿಲ್ಲ. ರಾಜ್ಯಪಾಲರಿಗೆ ಬಂದ ಲೆಟರ್ ಫೇಕ್ ಆಗಿದ್ದು, ಲೆಟರ್ ಪೂರಕವಾಗಿರೋರು ಯಾರು ಅಂತ ಗೊತ್ತಾಗಬೇಕು ಅದಕ್ಕೆ ಸಿಎಂ ಸಿಐಡಿ ತನಿಖೆಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಶಾಸಕ ನರೇಂದ್ರಸ್ವಾಮಿ, ರಾಜ್ಯಪಾಲರಿಗೆ ಅನಾಮಧೇಯ ಪತ್ರ ಹೋಗಿದೆ.ಪತ್ರದಲ್ಲಿ ಯಾವುದೇ ವಿಷಯ ಸ್ಪಷ್ಟತೆಯಿಂದ ಕೂಡಿಲ್ಲ.ಪಕ್ಷದ ಘನತೆ ಗೌರವ ಹಾಳು ಮಾಡುವ ಉದ್ದೇಶದಿಂದ ಮಾಡಿದ್ದಾರೆ. ಯಾರು ರೂವಾರಿ, ಆತನ ಹೆಸರು, ಫೋನ್ ನಂಬರ್ ಏನೂ ಬರೆದಿಲ್ಲ. ತನಿಖೆಯ ಹಂತದಲ್ಲಿದೆ. ರಾಜ್ಯಪಾಲರಲ್ಲಿ ನಿವೇದನೆ ಮಾಡಿಕೊಂಡಿದ್ದೇವೆ. ನಿಮ್ಮ ಸಿಬ್ಬಂದಿ ಪರಿಶೀಲಿಸಿ, ಕ್ರಮಕ್ಕೆ ಕಳುಹಿಸಬೇಕು ಎಂದು ಮನವಿ ಮಾಡಿದ್ದೇವೆ.ಇನ್ಮುಂದೆ ವಿಮರ್ಶೆ ಆಗದೇ ಹೋಗಲ್ಲ ಎಂದು ಗವರ್ನರ್ ಹೇಳಿದ್ದಾರೆ
. ಇದು ಫೇಕ್ ಲೆಟರ್ ಎಂದು ಗವರ್ನರ್ ಅವ್ರೇ ಹೇಳಿದ್ದಾರೆ. ಪ್ರತಿಯೊಂದನ್ನೂ ಅರ್ಥ ಮಾಡಿಕೊಂಡಿದ್ದಾರೆ
ರಾಜ್ಯಪಾಲರ ಭೇಟಿ ಸಫಲ ಆಗಿದೆ ಎಂದರು.




