ಬಾಗಲಕೋಟೆ: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜತೆ ಇನ್ನೂ ಮೂವರು ಉಪಮುಖ್ಯಮಂತ್ರಿಗಳ ನೇಮಕ ಕುರಿತು ಸಚಿವ ಕೆ ಎನ್ ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ, ಹೈಕಮಾಂಡ್ ಅವಕಾಶ ನೀಡಿದರೆ ಡಿಸಿಎಂ ಆಗಲು ತಾವು ಸಿದ್ದವಿರುವುದಾಗಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಪಕ್ಷದ ಹೈಕಮಾಂಡ್ ಮುಂದೆ ಇಂತಹ ಯಾವುದೇ ಬೇಡಿಕೆಯಿಲ್ಲ, ನಾನು ಈಗಾಗಲೇ ಸರ್ಕಾರದಲ್ಲಿ ಸಚಿವನಾಗಿದ್ದೇನೆ, ಒಂದು ವೇಳೆ ಡಿಸಿಎಂ ಹುದ್ದೆ ಸೃಷ್ಟಿಸಿ ಅವಕಾಶ ನೀಡಿದರೆ ಅದೊಂದು ಹುದ್ದೆಯಲ್ಲಿ ಬಡ್ತಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕೇವಲ ಈ ಸಮುದಾಯ ತಮ್ಮನ್ನು ಬೆಂಬಲಿಸಿದೆ, ಎಲ್ಲಾ ಸಮುದಾಯದವರು ಪಕ್ಷದ ಬೆನ್ನುಲುಬಾಗಿ ನಿಂತಿದ್ದರಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಇಂತಹ ಬೇಡಿಕೆ ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಸರ್ಕಾರವನ್ನು ನಿಯಂತ್ರಿಸುವ ಪ್ರಯತ್ನ ಎಂದು ಯಾರೂ ಪರಿಗಣಿಸಬಾರದು ಎಂದು ಇದೇ ಸಂದರ್ಭದಲ್ಲಿ ಸಟಿಲ ಸತೀಶ್ ಜಾರತಿಹೊಳಿ ತಿಳಿಸಿದರು.
ಹೆಚ್ಚಿನ ಡಿಸಿಎಂ ನೇಮಕ ಮಾಡುವ ನಿರ್ಧಾರ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಹೇಳಿದ ಅವರು ಇದು ಸಮಾಜಿಕ ನ್ಯಾಯ ಸಿಗಲಿದೆ ಎಂದರು. ಸಂಸತ್ ಮತ್ತು ರಾಜ್ಯ ಸಭೆಯಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ ನಿರ್ಧಾರವನ್ನು ಸ್ವಾಗತಿಸಿದ ಅವರು, ಇದನ್ನು ಈ ಹಿಂದೆಯೇ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಸಾಕಷ್ಟು ಶ್ರಮಿಸಿತ್ತು ಎಂದು ಅಭಿಪ್ರಾಯಪಟ್ಟರು.




