ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ನಿನ್ನೆ ರಾಜ್ಯ ಬಂದ್ ಘೋಷಣೆ ಬೆನ್ನಲ್ಲೇ, ಇಂದು ಸರಣಿ ಪ್ರತಿಭಟನೆ ನಡೆಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟ ಬಿಜೆಪಿ, ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರು ನಮ್ಮದು… ನೀರು ನಿಲ್ಲಿಸಿ ರೈತರನ್ನ ಉಳಿಸಿ..ಜನ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ..ಬೆಂಗಳೂರು ವಿರೋಧಿ ಡಿಕೆ ಶಿವಕುಮಾರ್ ಗೆ ದಿಕ್ಕಾರ..ಎಂದು ಘೋಷಣೆ ಕೂಗಿ ಟೀಕಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಇದೊಂದು ಅದ್ಭುತ ಹೋರಾಟ. ಹೆಚ್ಚಿಗೆ ಮಾತನಾಡುವ ಅವಶ್ಯಕತೆ ಇಲ್ಲ.ಹಳೆಯ ಮೈಸೂರು ಭಾಗದಲ್ಲಿ ಹೋರಾಟ ಆಗುತ್ತಿದೆ. ಇಂದು ಆಡಳಿತ ಮಾಡುತ್ತಿರುವ ಕಾಂಗ್ರೆಸ್ ರಾಜ್ಯದ ಹಿತಾಸಕ್ತಿ ಹಾಳು ಮಾಡುತ್ತಿದೆ.ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ಮಳೆ ಕಡಿಮೆಯಾದಾಗಲೂ ನೀರು ಹರಿಸುವುದು ಸರಿಯಲ್ಲ.
ಸರ್ವಪಕ್ಷ ಸಭೆಯಲ್ಲಿ ವಿಪಕ್ಷಗಳು ಕೊಡುವ ಸಲಹೆ ಪರಿಗಣಿಸಬೇಕು. ಅವರ ಮಾತಿಗೆ ಬೆಲೆಗೆ ಕೊಡದೇ, ಸರ್ಕಾರ ತಮಗೆ ಇಷ್ಟ ಬಂದಂತೆ ಮಾಡುತ್ತಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ವಾದ ಸರಿಯಾಗಿ ಮಾಡುತ್ತಿಲ್ಲ ಎಂದು ದೂರಿದರು.

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಬಿಜೆಪಿ ನಾಯಕ ಬಿವೈ ವಿಜಯೇಂದ್ರ, ಕಾವೇರಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರ ಎಡವಿದೆ. ತಮಿಳುನಾಡು ಮೂರನೇ ಬೆಳೆ ಬೆಳೆಯಲು ನೀರು ಉಪಯೋಗ ಮಾಡಿದಾಗ ಎಚ್ಚರಿಕೆ ವಹಿಸಬೇಕಿತ್ತು . ಇದಕ್ಕೆ ಆ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಬೇಕಿತ್ತು. ಆದರೆ ಮೂರನೇ ಬೆಳೆಗೆ ಒಂದು ಟಿಎಂಸಿ ಉಪಯೋಗ ಮಾಡ್ತಿದೆ. ಇದನ್ನು ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಬೇಕಿತ್ತು. ಇವಾಗ ನೀರು ಖಾಲಿ ಆಗಿದೆ, ಕುಡಿಯುವ ನೀರಿನ ಸಮಸ್ಯೆ ಆಗ್ತಿದೆ. ಒಟ್ಟಾರೆ ರಾಜ್ಯ ಸರ್ಕಾರ ರಾಜಕೀಯ ಮಾಡ್ತಿದೆ. ಪ್ರಾಮಾಣಿಕ ಕೆಲಸ ಮಾಡ್ತಿಲ್ಲ,ಇದು ದುರದೃಷ್ಟಕರ. ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಆಗ್ರಹ ಮಾಡುವುದು ಸಿಎಂಗೆ ಶೋಭೆ ತರಲ್ಲ ಎಂದರು




