ಹುಬ್ಬಳ್ಳಿ: ಸಚಿವ ಸತೀಶ್ ಜಾರಕಿಹೊಳಿಯವರು ಶಾಸಕರೊಂದಿಗೆ ವಿದೇಶ ಪ್ರವಾಸಕ್ಕೆ ಹೋದರೇ ತಪ್ಪೇನಿದೆ..? ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಡನಾಡಿದ ಅವರು, ಯಾವ್ಯಾವ ಶಾಸಕರು ಅವರೊಂದಿಗೆ ಹೋಗುತ್ತಿದ್ದಾರೆ ಎನ್ನುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಸತೀಶ್ ಜಾರಕಿಹೊಳಿಯವರು ಕೆಲವು ಶಾಸಕರನ್ನು ಸ್ನೇಹದಿಂದ ಕರೆದುಕೊಂಡು ಹೋಗುತ್ತಿದ್ದಾರೆ. ಇದರಲ್ಲಿ ರಾಜಕೀಯ ವಿಶ್ಲೇಷಣೆ ಮಾಡುವುದು, ಬಣಗಳನ್ನು ಸೃಷ್ಠಿ ಮಾಡುವುದು ಸರಿಯಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ನಿನ್ನೆ ಸಿಎಂ ಸಿದ್ಧರಾಮಯ್ಯ ಅವರು ಪಕ್ಷದ ಹಿತದೃಷ್ಠಿಯಿಂದ ಹಾಗೂ ಸರ್ಕಾರದ ಸಣ್ಣಪುಟ್ಟ ಲೋಪ ಸರಿಪಡಿಸಲು ಸಭೆ ನಡೆಸಿದ್ದಾರೆ. ಆ ಸಭೆಗೆ ಡಿಕೆಶಿಗೆ ಆಹ್ವಾನ ಇಲ್ಲದಿರುವುದು ನನಗೆ ಗೊತ್ತಿಲ್ಲ ಎಂದರು. ಮುಖ್ಯಮಂತ್ರಿಯಾದವರು ಸಭೆ ನಡೆಸಿದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ಬಿಜೆಪಿಯವರು ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದಿದ್ದು
ಈ ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಆಪರೇಶನ್ ಕಮಲ ಆಕ್ಟಿವ್ ಆಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ಏನಾಗಿದೆ ಇದೆಲ್ಲ ಗೊತ್ತಿರೋ ವಿಚಾರ. ಬಿಜೆಪಿಯವರು ಕಳೆದ ಹತ್ತು ವರ್ಷಗಳಿಂದ ಸರ್ಕಾರ ಬೀಳಿಸುವ, ಸರ್ಕಾರ ರಚನೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಠಿಯಲ್ಲಿ ನಾವು ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಇಂದು ಸಹ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಬಾರಿ 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. 70 ವರ್ಷ ಕಾಂಗ್ರೆಸ್ ಏನೂ ಮಾಡಿಲ್ಲ ಅಂತಾ ಬಿಜೆಪಿಯವರು ಪ್ರಚಾರ ತೆಗೆದುಕೊಂಡ್ರು. ನಾವು 70 ವರ್ಷ ಮಾಡಿದ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಗಳಿಗೆ ಇವರಿಂದ ಬಣ್ಣ ಬಳಿಯಲು ಸಾಧ್ಯವಾಗಿಲ್ಲ. ಕಳೆದ ಹತ್ತು ವರ್ಷಗಳಿಂದ ಪ್ರಚಾರ ತೆಗೆದುಕೊಳ್ಳೋದು ಬಿಟ್ಟು ಬೇರೇನೂ ಮಾಡಿಲ್ಲ. ಈಗ ಅಭಿವೃದ್ದಿ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ. ಈಗ ಜನರು ಕಾಂಗ್ರೆಸ್ ಒಳ್ಳೇದು ಅಂತ ಅರ್ಥ ಮಾಡಿಕೊಂಡಿದ್ದಾರೆ ಎಂದು ಅವರು ಬಿಜೆಪಿ ವಿರುದ್ಧ ಕಿಡಿಕಾರಿದರು.
2013 ರಿಂದ 2018 ಮತ್ತು ಈ ಬಾರಿ ನಮ್ಮಸರ್ಕಾರ ಮಾಡಿದ ಕೆಲಸ ಜನತೆಗೆ ತಲುಪಿವೆ. ಸರರ್ಕಾರದ ಐದನೇ ಗ್ಯಾರಂಟಿ ಶೀಘ್ರವೇ ಜಾರಿಗೆ ಬರಲಿದೆ. ರಾಜ್ಯ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ವೈಯಕ್ತಿಕವಾಗಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿರುತ್ತವೆ. ಇದು ರಾಜಕೀಯ ವಿಕೋಪಕ್ಕೆ ಹೋಗಬಾರದು ಎಂದರು.
ಪವರ್ ಶೇರಿಂಗ್ ವಿಚಾರಕ್ಕೆ ಡಿಕೆಶಿ ನೋಟೀಸ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಇದಕ್ಕೆ ಅವರೇ ಉತ್ತರ ನೀಡಬೇಕು ಈ ಬಗ್ಗೆ ನಾನು ಏನನ್ನು ಹೇಳುವುದಿಲ್ಲ ಎಂದು ಅವರು ಹೇಳಿದರು.




