ಬೆಂಗಳೂರು : ಧರ್ಮ, ದೇವರು ಯಾರಪ್ಪನ ಮನೆ ಆಸ್ತಿಯೂ ಆಗಬಾರದು, ಧರ್ಮ, ದೇವರು ಪ್ರತಿಯೊಬ್ಬರಲ್ಲೂ ಇರಬೇಕು, ವಿನಹಃ ನಂದೇ ಧರ್ಮ, ನಾನೇ ಸ್ಥಾಪನೆ ಮಾಡ್ತೀನಿ, ನಾನೇ ದೇವಸ್ಥಾನ ಕಟ್ಟಿಬಿಟ್ಟೆ ಅನ್ನುವ ಆಭಾಸತನದಿಂದ ದೇಶ ದಿವಾಳಿ ಆಗುತ್ತಿದೆ ಎಂದು ಸಚಿವ ಆರ್ ಬಿ ತಿಮ್ಮಾಪೂರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಧರ್ಮ ಆಗಬೇಕು, ಎಲ್ಲರ ರಾಮ ಆಗಬೇಕು, ರಾಮನ ಗುಡಿ ಕಟ್ಟಿದರೆ ಸಾಲದು, ರಾಮ ರಾಜ್ಯ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಹಿಂದೂ ಕರಸೇವಕರ ಅರೆಸ್ಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದು ಕಾನೂನಿನ ವಿಚಾರ, ಕಾನೂನಿನ ಎದುರುಗಡೆ ನಾನೂ, ನೀನೂ, ಇವನು ಯಾರೂ ದೊಡ್ಡವರಲ್ಲ, ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ವಿನಹ ಇವರು ಅವರು ಎನ್ನೋದು ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಾನೂನು ಅಡಿಯಲ್ಲಿ ಮಂತ್ರಿಯೂ ಬರುವುದಿಲ್ಲ, ಪ್ರಧಾನ ಮಂತ್ರಿಯೂ ಬರುವುದಿಲ್ಲ, ಕರಸೇವಕನೂ ಇಲ್ಲ, ರಾಮನ ಭಕ್ತನು ಇಲ್ಲ, ಅಲ್ಲಾ ನ ಭಕ್ತನೂ ಇಲ್ಲ, ಕಾನೂನು ಅಡಿಯಲ್ಲಿ ಎಲ್ಲರೂ ಒಂದೇ, ಕಾನೂನು ಪ್ರಕಾರ ಕ್ರಮ ಆಗುತ್ತದೆ ಅಷ್ಟೇ ಎಂದು ಹೇಳಿದರು.
ಬಿಜೆಪಿಯವರೆಲ್ಲ ಧರ್ಮ, ದೇವರನ್ನು ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತಲೇ ಬಂದಿದ್ದಾರೆ, ಇದನ್ನು ಬಿಟ್ಟು ಅವರು ಬೇರೇನೂ ಮಾಡುವುದಿಲ್ಲ, ಅವರು ಅಭಿವೃದ್ಧಿ ಬಗ್ಗೆ ಮಾತಾಡಿದ್ದಾರಾ?, ಬಿಜೆಪಿಯವರಿಗೆ ರಾಮ ಗೊತ್ತು ಅಷ್ಟೇ, ರಾಮರಾಜ್ಯ ಗೊತ್ತಿಲ್ಲ ಎಂದು ಕಿಡಿಕಾರಿದರು.




