ಮೈಸೂರು : ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಟಿಕೆಟ್ ತಪ್ಪುವ ಆತಂಕದಿಂದ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ನಡುರಾತ್ರಿಯಲ್ಲಿ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದಾರೆ. ಹಾಗೆಯೇ ಹತ್ತು ವರ್ಷ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಮೈಸೂರು ಜನತೆಗೆ ಧನ್ಯವಾದ ಸಮರ್ಪಿಸಿದ ಅವರು, ಕಣ್ಣೀರು ಹಾಕಿದ್ದಾರೆ.
ನಿಮ್ಮ ಪೃದಯದಲ್ಲಿ ಸ್ಥಾನಕೊಟ್ಟಿದ್ದೀರಿ, ನೀವು ತೋರಿಸಿದ ಪ್ರೀತಿಯನ್ನು ಮರೆಯಲಾರೆ ಎಂದು ಹೇಳಿ ಬಾವುಕರಾಗಿದ್ದರು. ಇದರಿಂದ ಅವರಿಗೆ ಈ ಬಾರಿ ಟಿಕೇಟ್ ಸಿಗಲ್ಲ ಎಂಬ ಕಾರಣದಿಂದ ಅವರು ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದ ಜನತೆಗೆ ಧನ್ಯವಾದ ಸಮರ್ಪಿಸಿದ್ದಾರೆ ಎನ್ನಲಾಗಿದೆ.
ಈ ಕ್ಷೇತ್ರಕ್ಕೆ ಮೈಸೂರು ಒಡೆಯರ್ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಇದು ಗ್ಯಾರಂಟಿಯಾಗುತ್ತಿದ್ದಂತೆ ಪ್ರತಾಪ್ ಸಿಂಹ್ ಫೇಸ್ ಬುಕ್ ಲೈವ್ ಬಂದು ತಮ್ಮ ಮನದಾಳದ ಮಾತನ್ನು ಆಡಿದ್ದಾರೆ. ಸ್ವಾರ್ಥಕ್ಕಾಗಿ ನಾನು ಯಾರ ಮನೆ ಬಾಗಿಲನ್ನೂ ತಟ್ಟಿಲ್ಲ ಎಂದಿದ್ದಾರೆ.
ನನಗೆ ಟಿಕೆಟ್ ಸಿಗುತ್ತೋ ಇಲ್ಲವೋ ಅದನ್ನು ಚಾಮುಂಡಿ ನಿರ್ಧರಿಸುತ್ತಾಳೆ ಎಂದ ಅವರು ನನ್ನ ಹತ್ತು ವರ್ಷ ಸಂಸದರಾಗಿ ಸೇವೆ ಸಲ್ಲಿಸಲು ಹಾಗೂ ನನ್ನ ಏಳಿಗೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು.

ಮೈಸೂರಿನಲ್ಲಿ ಇರುವಷ್ಟು ರಾಜಕಾರಣ ಇನ್ನೆಲ್ಲಿಯೂ ಇರಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಮಡಿಕೇರಿ ಜನರು ನೇರ ಮತ್ತು ನಿಷ್ಠುರವಾದಿಗಳು. ಜನರ ಮಧ್ಯೆ ಇರುವವರಿಗೆ ಟಿಕೇಟ್ ನೀಡಬೇಕು ಎಂದಿದ್ದಾರೆ. ರಹಾಗೆಯೇ ನನ್ನಿಂದ ಯಾರೂ ಸೋತಿಲ್ಲ, ನನ್ನ ವಿರುದ್ಧ ಸುಮ್ಮನೆ ಇಲ್ಲ ಸಲ್ಲದ ಆರೋಪ ಮಾಡಲಾಗಿದೆ. ಪಕ್ಷ ತಮಗೆ ಟಿಕೇಟ್ ನೀಡಲಿದೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ.
ಈ ಬಾರಿಯ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಎಂದು ನಾನು ಪ್ರಧಾನಿ ಮೋದಿಯವರಿಗೆ ತಿಳಿಸಿದ್ದೇನೆ. ನನಗೆ ಟಿಕೇಟ್ ನೀಡಲಿದ್ದಾರೆ ಎಂದುಕೊಂಡಿದ್ದೇನೆ. ಆದರೆ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಮೋದಿಯಂಥ ಮೋದಿಯೇ ಗೌಣವಾಗಿದ್ದರು. ಸೂರ್ಯನಿಗೇ ಗ್ರಹಣ ಬಡಿಯುತ್ತದೆ. ಇನ್ನು ನಾನ್ಯಾರು ಎಂದು ಭಾವುಕರಾಗಿ ತಿಳಿಸಿದ್ದಾರೆ.
ಅದೇ ರೀತಿಯಲ್ಲಿ ಪರೋಕ್ಷವಾಗಿ ಮಾಜಿ ಶಾಸಕ ನಾಗೇಂದ್ರ ಮತ್ತು ರಾಮದಾಸ್ ವಿರುದ್ಧ ಕಿಡಿಕಾರಿದ ಅವರು, ಮುಡಾದಲ್ಲಿ ನಾನು ಬದಲಿ ಸೈಟ್ ಮಾಡಲಿಲ್ಲ. ಮಾಡಿದ್ದರೆ ಕೋಟ್ಯಂತರ ರೂಪಾಯಿ ಮಾಡಬಹುದಿತ್ತು. ಗ್ಯಾಸ್ ಪೈಪ್ ಲೈನ್ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ ಎಂದಿದ್ದಾರೆ.




