ಮಂಗಳೂರು : ಚುನಾವಣಾ ಬಾಂಡ್ ರಾಜಕೀಯ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ, ಹಾಗೆಯೇ ಇದಜು ಪ್ರಪಂಚದ ದೊಡ್ಡ ಹಗರಣ ಎಂದು ನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಮಂತ್ರಿ ಈ ವಿಚಾರದಲ್ಲಿ ಏಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ಅವರ ಮನ್ ಕೀ ಬಾತ್ ನಲ್ಲಿ ಈ ಲೂಟಿಯ ಬಗ್ಗೆ ಯಾಕೆ ಪ್ರಸ್ತಾಪಿಸುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ನಾವು 6000 ಕೋಟಿ ತೆಗೆದುಕೊಂಡಿದ್ದೇವೆ. ಆದರೆ 330 ಸಂಸದರಿದ್ದೇವೆ. ಕಡಿಮೆ ಸಂಸದರು ಹೊಂದಿರುವ ಪಾರ್ಟಿ ಹೆಚ್ಚು ತೆಗೆದುಕೊಂಡಿದ್ದಾರೆ ಎನ್ನುತ್ತಿದ್ದಾರೆ. ಇದರರ್ಥ ಏನು ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್, ಹೆಚ್ಚು ತೆಗೆದುಕೊಂಡರೆ ಶಿಕ್ಷೆ ಕಡಿಮೆ ಆಗಬೇಕೆಂದೇ ಎಂದು ಮರು ಪ್ರಶ್ನಿಸಿದರು.
ಡಿಎಂಕೆ ಲಾಟರಿ ಏಜೆಂಟ್ ಮಾರ್ಟಿನ್ ಅವರಿಂದ ಚುನಾವಣಾ ಬಾಂಡ್ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಪ್ರಧಾನಮಂತ್ರಿ ಇದನ್ನು ಹೇಳಲು ಸಿದ್ದರಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದು ಪ್ರಪಂಚದ ಅತ್ಯಂತ ದೊಡ್ಡ ಹಗರಣವಾಗಿದ್ದು, ನೀವು ಈ ಹಣದಿಂದಲೇ ಶಾಸಕರನ್ನು ಕೊಂಡುಕೊಳ್ಳುತ್ತೀದ್ದೀರಾ..? ಬಗೆ ಬಗೆಯ ಪೋಷಾಕಿಗೂ ಈ ಹಣವನ್ನು ಬಳಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಚುನಾವಣಾ ಸಮೀಕ್ಷೆ ವ್ಯಾಪಾರವಾಗಿದ್ದು ಇದನ್ನು ಹಣ ಕೊಟ್ಟು ಮಾಡಿಸುತ್ತಿದ್ದಾರೆ ಎಂಬ ಸಂದೇಹ ಮೂಡಿದೆ ಎಂದು ತಿಳಿಸಿದ ಅವರು, ಲೋಕಸಭೆ ಚುನಾವಣೆಯಲ್ಲಿ ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ ಎಂದರು.