ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿಗೆ ಕಾಂಗ್ರೆಸ್ ಬಾಹ್ಯ ಬೆಂಬಲದ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಸುಮಾರು ಹದಿನೈದು ದಿನದಿಂದ ನಾನು ಧಾರವಾಡದಲ್ಲಿಯೇ ಠಿಕಾಣಿ ಹೂಡಿದ್ದೆ. ದಿಂಗಾಲೇಶ್ವರರ ಬಗ್ಗೆ ನನಗೆ ಅಪಾರವಾಗಿ ಗೌರವವಿದೆ. ಸ್ವಾಮೀಜಿಗಳು ರಾಜಕೀಯಕ್ಕೆ ಬಂದಿದ್ದು, ಏನು ಬೇಕಾದರೂ ಬದಲಾವಣೆ ಆಗಬಹುದು ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಮಗೆ ದಿಂಗಾಲೇಶ್ವರ ಶ್ರೀಗಳ ಬಗ್ಗೆ ಅಪಾರವಾದ ಗೌರವವಿದೆ. ರಾಜಕೀಯಕ್ಕೆ ಬಂದಿರುವುದರಿಂದ ಬಹುದೊಡ್ಡ ಬದಲಾವಣೆಗಳು ಆಗಬಹುದು ಅದರ ಬಗ್ಗೆ ಊಹೆ ಕೂಡ ಮಾಡಲು ಆಗಲ್ಲ. ಆದರೆ ನಾವು ಅವರ ಆಶೀರ್ವಾದದೊಂದಿಗೆ ಚುನಾವಣೆಯಲ್ಲಿ ಮುಂದುವರೆಯುತ್ತಿವೆ. ಅವರಿಗೂ ಕೂಡ ಅಪಾರವಾದ ಭಕ್ತರು, ಅಭಿಮಾನಿಗಳು ಇದ್ದಾರೆ ನೋಡೋಣ ಏನಾಗುತ್ತದೆಯೋ ಎಂದರು.
ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆಯಿಂದ ಎಫೆಕ್ಟ್ ಆಗುತ್ತದೆಯಾ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಈಗ ರಾಜಕೀಯ ವಿಶ್ಲೇಷಣೆ ಮಾಡಿ ಏನನ್ನು ಮಾಡಲು ಆಗುವುದಿಲ್ಲ. ಈಗಾಗಲೇ ಚುನಾವಣೆ ಅರ್ಧ ಘಟ್ಟ ತಲುಪಿದೆ. ಈಗ ಆಗುವುದನ್ನು ನೋಡಬೇಕು ಎಂದು ಅವರು ಹೇಳಿದರು.
ವಿನಯ ಕುಲಕರ್ಣಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ವಿನಯ ಕುಲಕರ್ಣಿ ಅವರು ತಮಗೆ ಆಗಿರುವ ನೋವನ್ನು ಅವರು ಹೇಳಿಕೊಂಡಿದ್ದಾರೆ. ಅವರಿಗೆ ಅವರ ಫ್ಯಾಮಿಲಿ, ಮಕ್ಕಳನ್ನು ಮೀಟ್ ಮಾಡೋಕೆ ಆಗಿಲ್ಲ. ಇದರಿಂದ ಮನಸಿಗೆ ನೋವು ಉಂಟಾಗಿರುವುದರಿಂದ ಹೀಗೆ ಹೇಳಿದ್ದಾರೆ ಎಂದು ಅವರು ಹೇಳಿದರು.