ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ 12, ಕಾಂಗ್ರೆಸ್ ವಿರುದ್ಧ 9 ಹಾಗೂ ಜೆಡಿ ಎಸ್ ವಿರುದ್ಧ 2 ಪ್ರಕರಣ ಚುನಾವಣಾ ಆಯೋಗದಲ್ಲಿ ದಾಖಲು ಮಾಡಲಾಗಿದೆ.
ಈ ಬಾರಿಯ ಲೋಕಸಭಾ ಚುನಾವಣಾ ಅಖಾಢದಲ್ಲೂ ಧರ್ಮ ಸೂಕ್ಷ್ಮತೆ ಮರೆತು ರಾಜಕೀಯ ನಾಯಕರು ಹೇಳಿಕೆ ನೀಡಿದ್ದರು. ಆದರೆ ಇಂತಹಾ ಹೇಳಿಕೆಗಳ ವಿರುದ್ಧ ಚುನಾವಣಾ ಆಯೋಗ ಕಣ್ಣಿಟ್ಟಿದೆ. ದ್ವೇಷ ಭಾಷಣದ ಬಗ್ಗೆ ಪರಸ್ಪರ ಕಾಂಗ್ರೆಸ್ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ದೂರನ್ನು ಪರಿಶೀಲನೆ ನಡೆಸಿದ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.
ಮಕ್ಕಳ ಬಳಕೆ ವಿರುದ್ಧನೂ ಕ್ರಮ
ಚುನಾವಣೆಯ ಪ್ರಚಾರದಲ್ಲಿ ಮಕ್ಕಳನ್ನು ಬಳಕೆ ಮಾಡುವುದು ಅಪರಾಧವಾಗಿದೆ. ಇದರ ವಿರುದ್ಧವೂ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಈ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ 7, ಬಿಜೆಪಿ ವಿರುದ್ಧ 7 ಹಾಗೂ ಪಕ್ಷೇತರ ಅಭ್ಯರ್ಥಿ ವಿರುದ್ಧ 1 ದೂರು ದಾಖಲಾಗಿದೆ.
ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ಸ್ಥಳಗಳನ್ನು ಬಳಕೆ ಮಾಡಿದ ಆರೋಪದ ಅಡಿಯಲ್ಲಿ ಬಿಜೆಪಿ ವಿರುದ್ಧ 8, ಕಾಂಗ್ರೆಸ್ ವಿರುದ್ಧ 6 ಹಾಗೂ ಜೆಡಿ ಎಸ್ ವಿರುದ್ಧ 1 ದೂರು ದಾಖಲಾಗಿದೆ. ಹೀಗೆ ಒಟ್ಟಾರೆಯಾಗಿ 189 ನೀತಿ ಸಂಹಿತೆ ಉಲ್ಲಂಘನೆ ದೂರುಗಳು ದಾಖಲಾಗಿವೆ.
ಬಹಿರಂಗ ಪ್ರಚಾರಕ್ಕೆ ಸಂಜೆ ತೆರೆ
ಬುಧವಾರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ಆದರೆ ಮನೆ ಮನೆಗೆ ತೆರಳಿ 5 ಜನರಿಗೆ ಮಾತ್ರ ಮತಯಾಚನೆ ಮಾಡಲು ಅವಕಾಶ ಇದೆ. ಕ್ಷೇತ್ರದಲ್ಲಿ ಮತದಾರರು ಅಲ್ಲದ
ರಾಜಕಾರಣಿಗಳು ಸಂಜೆ 6 ಗಂಟೆಯಿಂದ ಕ್ಷೇತ್ರದಲ್ಲಿ ಇರಲು ಅವಕಾಶ ಇಲ್ಲ.