Search

DK SHIVAKUMAR ANGRY ON KUMARASWAMY: ಬರ ಪರಿಹಾರ ಸಾಕು ಎಂದಿರುವ ಕುಮಾರಸ್ವಾಮಿ ನಾಡದ್ರೋಹಿ, ಕೇಂದ್ರದ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ

ಬೆಂಗಳೂರು, ಏ.27: “ಕೇಂದ್ರ ಸರ್ಕಾರ ಕರ್ನಾಟಕದ ಬರಕ್ಕೆ ಅಲ್ಪ ಪರಿಹಾರ ಮೊತ್ತ ಘೋಷಿಸಿದ್ದು, ನಾವು ನಮ್ಮ ಕಾನೂನು ಹೋರಾಟ ಮುಂದುವರಿಸುತ್ತೇವೆ. ಈ ಮಧ್ಯೆ, ಈಗ ಬಿಡುಗಡೆ ಮಾಡಿರುವ ಪರಿಹಾರ ಮೊತ್ತ ಸಾಕು ಎಂದು ಹೇಳಿರುವ ಮಾಜಿ ಸಿಎಂ ಕುಮಾರಸ್ವಾಮಿ ನಾಡ ವಿರೋಧಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶಿವಕುಮಾರ್ ಅವರು ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಘೋಷಿಸಿರುವ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

“ಕೇಂದ್ರ ಸರ್ಕಾರದ ಹಣ ರಾಜ್ಯಕ್ಕೆ ಇನ್ನು ಬಂದಿಲ್ಲ. ಆದರೂ ಬಿಜೆಪಿ ನಾಯಕರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಈ ಮಧ್ಯೆ ಕುಮಾರಸ್ವಾಮಿ ಅವರು ಈ ಮೊತ್ತ ಸಾಕು ಎಂದಿದ್ದಾರೆ. ಇದು ರಾಜ್ಯಕ್ಕೆ ಬರಬೇಕಾದ ಪರಿಹಾರ ಮೊತ್ತವೇ ಹೊರತು, ಇಷ್ಟು ಸಾಕು ಎನ್ನಲು ಇದು ಅವರ ಮನೆ ಆಸ್ತಿಯಲ್ಲ. ಇಂತಹ ಹೇಳಿಕೆ ಕೊಟ್ಟಿರುವ ಕುಮಾರಸ್ವಾಮಿ ನಾಡದ್ರೋಹಿ.

ನೀವು ಜನಪ್ರತಿನಿಧಿಯಾಗಿ ನಿಮ್ಮ ಮೈತ್ರಿ ಸರ್ಕಾರಕ್ಕೆ ಹೇಳಿ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಸಿಗುವಂತೆ ಮಾಡಬೇಕು. ಆದರೆ ಅವರು ಇಷ್ಟು ಪರಿಹಾರ ಸಾಕು ಎಂದು ಹೇಳಿದ್ದಾರೆ. ಇದು ಪಕ್ಷ ಅಥವಾ ರಾಜಕೀಯ ವಿಚಾರವಲ್ಲ. ರಾಜ್ಯಕ್ಕೆ ಆಗುತ್ತಿರುವ ದ್ರೋಹ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ರಾಜ್ಯವನ್ನು ಕಡೆಗಣಿಸಲಾಗುತ್ತಿದೆ.

ನಮ್ಮ ರಾಜ್ಯದಲ್ಲಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಸೆಪ್ಟೆಂಬರ್ 13, 2023ರಂದು ಸರ್ಕಾರ ಘೋಷಣೆ ಮಾಡಿತ್ತು. ಬರಗಾಲದ ಹಿನ್ನೆಲೆಯಲ್ಲಿ 46 ಲಕ್ಷ ಹೆಕ್ಟೇರ್ ಕೃಷಿ ಭೂಮಿ, 2.06 ಲಕ್ಷ ಹೆಕ್ಟೇರ್ ತೋಟಗಾರಿಕ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಒಟ್ಟಾರೆಯಾಗಿ 35 ಸಾವಿರ ಕೋಟಿಯಷ್ಟು ನಷ್ಟವಾಗಿದ್ದು, ಎನ್ ಡಿಆರ್ ಎಫ್ ಮಾರ್ಗಸೂಚಿ ಅನುಸಾರ ಕರ್ನಾಟಕ ರಾಜ್ಯ ಸರ್ಕಾರ 2024ರ ಸೆಪ್ಟೆಂಬರ್ 22ರಂದು ಕೇಂದ್ರ ಸರ್ಕಾರಕ್ಕೆ 18,172 ಕೋಟಿ ಬರ ಪರಿಹಾರ ನೀಡುವಂತೆ ಮನವಿ ಮಾಡಿತ್ತು.

ಅಕ್ಟೋಬರ್ 25ರಂದು ನಮ್ಮ ಸರ್ಕಾರದ ಸಚಿವರುಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದರು. ನವೆಂಬರ್ 25ರಂದು ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಕೇಂದರ ಹಣಕಾಸು ಸಚಿವರನ್ನು ಭೇಟಿ ಮಾಡಿ ತಕ್ಷಣವೇ ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದರು.

19, 20 ಡಿಸೆಂಬರ್ ರಂದು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಪ್ರಧಾನಮಂತ್ರಿ ಹಾಗೂ ಗೃಹಸಚಿವರನ್ನು ಭೇಟಿ ಮಾಡಿ ಬರ ಪರಿಹಾರ ನೀಡುವಂತೆ ಮನವಿ ಮಾಡಿದರು. 2024 ಜನವರಿ 20ರಂದು ಮುಖ್ಯಮಂತ್ರಿಗಳು ಮೋದಿ ಅವರಿಗೆ ಬರ ಪರಿಹಾರ ಬಿಡುಗಡೆ ಮಾಡಲು ಮನವಿ ಮಾಡಿದ್ದಾರೆ.

ಈ ಮಧ್ಯೆ ನರೆಗಾ ಯೋಜನೆಯಲ್ಲಿ 100 ದಿನಗಳ ಕೂಲಿ ದಿನಗಳನ್ನು 150ಕ್ಕೆ ಏರಿಕೆ ಮಾಡಬೇಕು ಎಂಬ ಅವಕಾಶವಿದ್ದರೂ ಕೇಂದ್ರ ಸರ್ಕಾರ ಮಾಡಿಲ್ಲ. ಇದು ಬೇಸರದ ವಿಚಾರ. ಇದರಿಂದ ನಮ್ಮ ರಾಜ್ಯಕ್ಕೆ ಬರಬೇಕಾಗಿದ್ದ ಅವಕಾಶವನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಇದನ್ನು ಮಾಡಿದ್ದರೆ ರಾಜ್ಯದ ಅನೇಕ ಕಾಮಗಾರಿಗಳಿಗೆ ಅವಕಾಶ ಇರುತ್ತಿತ್ತು.

ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದ ನೀಡದ ಕಾರಣ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೆವು. ನಂತರ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಒಪ್ಪಿಗೆ ನೀಡಿತು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ಕೇಂದ್ರ 3,454 ಕೋಟಿ ನೀಡಿದ್ದಾರೆ. ಇದು ಯಾವಾಗ ನಮ್ಮ ಖಾತೆಗೆ ಬರುತ್ತದೆಯೋ ಗೊತ್ತಿಲ್ಲ.

ಬಜೆಟ್ ನಲ್ಲಿ ಘಷಿಸಿದ ಹಣ ಯಾಕೆ ಬರಲಿಲ್ಲ?

ಕೇಂದ್ರ ಸರ್ಕಾರ ಎಲ್ಲಾ ವಿಚಾರದಲ್ಲೂ ರಾಜ್ಯಕ್ಕೆ ಚೊಂಬು ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ 5400 ಕೋಟಿ ಘೋಷಣೆ ಮಾಡಿದರೂ ರಾಜ್ಯಕ್ಕೆ ಹಣ ಯಾಕೆ ನೀಡಲಿಲ್ಲ. ಮಹಾದಾಯಿ, ಎತ್ತಿನಹೊಳೆ ಯೋಜನೆ ರಾಷ್ಟ್ರೀಯ ಯೋಜನೆ ಮಾಡಲಿಲ್ಲ ಯಾಕೆ? ಗೆದ್ದರೆ ಒಂದೇ ತಿಂಗಳಲ್ಲಿ ಮೋಕೇದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎನ್ನುತ್ತಾರೆ.

ನೀವು ಅವರ ಜತೆ ಕೈಜೋಡಿಸಿದ ದಿನವೇ ಮೇಕೆದಾಟು ಯೋಜನೆಗೆ ಸಹಿ ಹಾಕಿಸಬೇಕಿತ್ತು. ನಮ್ಮ ಹೇರಾಟದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ಅಧಿಕಾರ ಕೊಟ್ಟರೆ ಮಾತ್ರ ರಾಜ್ಯದ ಹಿತದ ಬಗ್ಗೆ ಯೋಚಿಸುತ್ತಾರೆ, ಇಲ್ಲದಿದ್ದರೆ ಯೋಚಿಸುವುದಿಲ್ಲವೇ?

ರಾಜ್ಯಕ್ಕೆ ಅನ್ಯಾಯ ಆಗಿದೆ, ರಾಜ್ಯ ಕೇಳಿರುವುದು 18 ಸಾವಿರ ಕೋಟಿ, ಕೇಂದ್ರ ಕೊಟ್ಟಿರುವ ಪರಿಹಾರ ತೃಪ್ತಿಯಿಲ್ಲ. ದಿನೇದಿನೆ ರಾಜ್ಯದ ಬಗ್ಗೆ ಘೋರ ಅನ್ಯಾಯವಾಗುತ್ತಿದೆ. ಬಿಜೆಪಿ ನಾಯಕರು ಕಳೆದ ನಾಲ್ಕು ದಿನಗಳಿಂದ ಸಿನಿಮಾ ನೋಡಿ ಮೌನವಾಗಿದ್ದಾರೆ.

ನಾಳೆ ಪ್ರತಿಭಟನೆ:

ಕೇಂದ್ರ ಸರ್ಕಾರ ಕರ್ನಾಟಕ ಕೇಳಿರುವ ಪರಿಹಾರ ಮೊತ್ತದಲ್ಲಿ ಅತ್ಯಂತ ಕಡಿಮೆ ಪ್ರಮಾಣವನ್ನು ಪರಿಹಾರವಾಗಿ ಘೋಷಿಸಿದೆ. ಇದು ಆನೆಗೆ ಮೂರು ಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ. ಹೀಗಾಗಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಮ್ಮ ನಾಯಕರೊಂದಿಗೆ ಪ್ರತಿಭಟನೆ ಮಾಡಲಾಗುವುದು. ಇನ್ನು ನಮ್ಮ ರಾಜ್ಯಕ್ಕೆ ಬರಬೇಕಾದ ಪರಿಹಾರ ಮೊತ್ತ ಪಡೆಯಲು ಕಾನೂನು ಹೋರಾಟ ಮುಂದುವರಿಸುತ್ತೇವೆ.

ಖಂಡಿತಾ ಕಾನೂನು ಮುಂದುವರಿಯುತ್ತದೆ. ನಾವು ಭಿಕ್ಷೆ ಕೇಳುತ್ತಿಲ್ಲ. ಇದು ನಮ್ಮ ಹಕ್ಕು, ಅದನ್ನು ಕೇಳುತ್ತಿದ್ದೇವೆ. ಇದನ್ನು ನೀಡುವುದು ಕೇಂದ್ರದ ಕರ್ತವ್ಯ. ನ್ಯಾಯಾಲಯ ಹಾಗೂ ಜನರ ಮುಂದೆ ನಮ್ಮ ಹೋರಾಟ ಮುಂದುವರಿಯಲಿದೆ

ಪ್ರಶ್ನೋತ್ತರ:

ನಿಮ್ಮ ಪ್ರಕಾರ ರಾಜ್ಯಕ್ಕೆ ಎಷ್ಟು ಪರಿಹಾರ ಮೊತ್ತ ಬರಬೇಕಾಗಿತ್ತು ಎಂದು ಕೇಳಿದಾಗ, “35 ಸಾವಿರ ಕೋಟಿ ನಷ್ಟದಲ್ಲಿ 18 ಸಾವಿರ ಕೋಟಿ ಕೇಳಿದ್ದೆವು. ನಾವು ಕೇಳಿದ್ದು 50% ಮಾತ್ರ. ಆದರೂ ಅವರು ಕಡಿಮೆ ಪರಿಹಾರ ನೀಡಿದ್ದು ಆನೆಗೆ ಮೂರು ಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ. ನಾವು ವರದಿ ಕೊಟ್ಟಿದ್ದು ಬಹಳ ಹಿಂದೆ ಅದಾದ ನಂತರವೂ ರಾಜ್ಯಕ್ಕೆ ಹೆಚ್ಚಿನ ನಷ್ಟವಾಗಿದೆ” ಎಂದರು.

ನಗರ ಪ್ರದೇಶದಲ್ಲಿ ಮತದಾನ ಕಡಿಮೆ ಆಗಿರುವ ಬಗ್ಗೆ ಕೇಳಿದಾಗ, “ಎಲ್ಲಾ ಮತದಾರರಿಗೆ ಧನ್ಯವಾದಗಳು. ಒಂದೆರಡು ಬೂತ್ ಗಳಲ್ಲಿ ಚಿಕ್ಕ ಗಲಾಟೆ ಬಿಟ್ಟರೆ ರಾಜ್ಯದಲ್ಲಿ ಶಾಂತಿಯುತ ಮತದಾನ ಆಗಿದೆ. ನ್ಮಗೆ ಉತ್ತಮ ವಾತಾವರಣ ಇದ್ದು ಮೊದಲ ಹಂತದಲ್ಲಿ ನಾವು ಎರಡಂಕಿ ಸ್ಥಾನ ಗೆಲ್ಲುತ್ತೇವೆ” ಎಂದರು.

ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿ ಅವರು ತಂತ್ರಗಾರಿಕೆ ಮಾಡಿದ್ದು ಈ ಕ್ಷೇತ್ರ ಗೆಲ್ಲುತ್ತೇವೆ ಎಂಬ ಅಶೋಕ್ ಅವರ ಹೆಳಿಕೆ ಬಗ್ಗೆ ಕೇಳಿದಾಗ, “ಹಾಸನದಲ್ಲಿ ಯಾಕೆ ಹೇಳಲ್ಲಿಲ್ಲ. ದೇವೇಗೌಡರು ಪಕ್ಷದ ನಾಯಕರು. ಅವರೇ ಬಿಜೆಪಿ ಪಕ್ಷದ ನಾಯಕರು ಹಾಸನ ಮತ್ತು ಮಂಡ್ಯದಲ್ಲಿ ಸಹಕಾರ ಕೊಟ್ಟಿಲ್ಲ, ಮೈತ್ರ ಧರ್ಮ ಪಾಲನೆ ಮಾಡಿಲ್ಲ ಅಂತಾ ಯಾಕೆ ಹೇಳಿದರು. ಅದು ಹಾಲಿ ಸಂಸದರು, ಹಾಲಿ ಶಾಸಕರ ಬಗ್ಗೆ ಹೇಳಿದ್ದಾರೆ. ಅವರ ಮಾತು ಮುಖ್ಯವೋ, ಅಶೋಕ್ ಅವರ ಮಾತು ಮುಖ್ಯವೋ?. ಬೆಂಗಳೂರು ಗ್ರಾಮಾಂತರದಲ್ಲೂ ಮೈತ್ರಿ ಧರ್ಮ ಪಾಲನೆಯಾಗದೇ ಮೋಸ ನಡೆದಿದೆ” ಎಂದರು.

ಕುಮಾರಣ್ಣನ ಜೇಬಿನಲ್ಲಿದ್ದ ಪೆನ್ ಡ್ರೈವ್ ನಲ್ಲಿ ಏನಿತ್ತು ಎಂದು ಈಗ ಗೊತ್ತಾಯ್ತು:

ರಾಜ್ಯ ಮಹಿಳಾ ಆಯೋಗ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಹಾಸನ ನಾಯಕರ ಮೇಲೆ ಆರೋಪ ಬರುತ್ತಿದ್ದು ಇದರ ವಿರುದ್ಧ ಎಸ್ಐಟಿ ತನಿಖೆ ಮಾಡಬೇಕು ಎಂದು ಕೇಳೃರುವ ಬಗ್ಗೆ ಪ್ರಶ್ನಿಸಿದಾಗ, “ಪೆನ್ ಡ್ರೈವ್ ಬಗ್ಗೆ ಕುಮಾರಣ್ಣನಿಗೆ ಗೊತ್ತು. ಅವರ ಜೇಬಿನಲ್ಲೇ ಇಟ್ಟುಕೊಂಡಿದ್ದನ್ನು ತೋರಿಸಿದ್ದರು. ಅದು ಯಾವ ಪೆನ್ ಡ್ರೈವ್, ಅದರಲ್ಲಿ ಏನಿದೆ ಎಂದು ನನಗೆ ಗೊತ್ತಿರಲಿಲ್ಲ. ಈಗ ಅದರಲ್ಲಿ ಏನಿದೆ ಎಂದು ಗಾತ್ತಾಯಿತು. ಹೀಗಾಗಿ ಇದರ ಬಗ್ಗೆ ಕುಮಾರಸ್ವಾಮಿ ಅವರನ್ನು ಕೇಳಬೇಕು. ಇನ್ನು ಮಾಧ್ಯಮಗಳು ಈ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಅದು ನಾಯಕರಲ್ಲ. ಹಾಸನದ ಲೋಕಸಭಾ ಕ್ಷೇತ್ರದ ಎಡಿಎ ಮೈತ್ರಿ ಕೂಟದ ಸಂಸದ. ಈ ವಿಚಾರವಾಗಿ ಪ್ರಧಾನಮಂತ್ರಿಗಳು, ವಿಜಯೇಂದ್ರ, ಶೋಭಕ್ಕ, ಅಶೋಕ್, ಕುಮಾರಣ್ಣ, ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದ ಅಶ್ವತ್ಥ್ ನಾರಾಯಣ ಅವರು ಈ ಬಗ್ಗೆ ಉತ್ತರ ನೀಡಬೇಕು. ನಮ್ಮ ಹೆಸರಿಗೆ ಮಸಿ ಬಳಿಯಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅವರೇ ದೂರು ಕೊಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ಓದಿದೆ. ಮಹಿಳಾ ಆಯೋಗ ಇದೆಲ್ಲವನ್ನು ನೋಡಿ ಗೃಹ ಸಚಿವರು ಹಾಗೂ ಸಿಎಂಗೆ ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ನೀವು ಯಾಕೆ ಮೌನ ತಾಳುತ್ತಿದ್ದೀರಿ ಈ ವಿಚಾರದಲ್ಲಿ ನೀವು ರಾಜ್ಯದ ಜನತೆಗೆ ಬೆಳಕು ಚೆಲ್ಲಬೇಕು ಎಂದು ಮನವಿ ಮಾಡುತ್ತೇನೆ” ಎಂದರು.

ಎಸ್ಐಟಿ ತನಿಖೆ ಬಗ್ಗೆ ಸರ್ಕಾರದ ನಿಲುವೇನು ಎಂದು ಕೇಳಿದಾಗ, “ಈ ಬಗ್ಗೆ ಮುಖ್ಯಮಂತ್ರಿ, ಗೃಹಮಂತ್ರಿಗಳನ್ನು ಕೇಳಬೇಕು. ನಾನು ಸರ್ಕಾರದ ಭಾಗವಾಗಿದ್ದರು, ಸಚಿವರು, ಸಿಎಂ ಜತೆ ಚರ್ಚೆ ಮಾಡಲು ಆಗಿಲ್ಲ” ಎಂದರು.

ಮಹಿಳೆಯರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆಯೇ ಎಂದು ಕೇಳಿದಾಗ, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳು ಒಂದು ಆಧಾರಸ್ತಂಭ. ನೀವು ನಿಮ್ಮ ನಡುವಣ ಆಂತರಿಕ ವಿಚಾರಕ್ಕೆ, ಬೇರೆಯವರಿಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಇಂತಹ ದೊಡ್ಡ ವಿಚಾರಗಳನ್ನು ಮುಚ್ಚಿಹಾಕುತ್ತಿರುವುದು ನಿಮಗೆ ಶೋಭೆ ತರುವುದಿಲ್ಲ ಎಂದು ಭಾವಿಸುತ್ತೇನೆ. ನಮ್ಮ ಆತ್ಮಸಾಕ್ಷಿಗಾದರೂ ನಾವು ಕೆಲಸ ಮಾಡಬೇಕು” ಎಂದರು.

ಕುಮಾರಸ್ವಾಮಿ ಈ ಪ್ರಕರಣದಲ್ಲಿ ನನ್ನ ಹೆಸರು ಹೇಳಲಿ:
ಮಹಿಳೆಯರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಅವರಿಗೆ ಒಳ್ಳೆಯದಾಗುತ್ತಾ ಎಂದು ಕುಮಾರಸ್ವಾಮಿ ಅವರು ನಿಮ್ಮ ಬಗ್ಗೆ ಮಾತನಾಡಿದ್ದಾರೆ ಎಂದು ಕೇಳಿದಾಗ, “ಅವರು ನನ್ನ ಹೆಸರು ಹೇಳಿ ಮಾತನಾಡಲಿ. ಆಮೇಲೆ ನನ್ನ ಪುರಾಣ, ನನ್ನ ಕಥೆ, ನನ್ನ ಮುಡಿಮುತ್ತುಗಳನ್ನು ಹೇಳುತ್ತೇನೆ. ಆ ಹೆಣ್ಣು ಮಕ್ಕಳ ಮಾನ ಹರಣವಾಗಿರುವುದನ್ನು ಕುಮಾರಸ್ವಾಮಿ ಅವರು ಈ ರೀತಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರಾ?” ಎಂದರು.

ಸರ್ಕಾರ ಈ ವಿಚಾರದಲ್ಲಿ ಜವಾಬ್ದಾರಿ ನಿರ್ವಹಿಸಬೇಕಲ್ಲವೇ ಎಂದು ಕೇಳಿದಾಗ, “ಮಾಧ್ಯಮಗಳು ಮೊದಲು ಈ ಬಗ್ಗೆ ರಾಜ್ಯದ ಜನರಿಗೆ ಬೆಳಕು ಚೆಲ್ಲಲಿ. ಮಹಿಳಾ ಆಯೋಗ ಹಂತ ಹಂತವಾಗಿ ಏನು ಮಾಡಬೇಕೋ ಮಾಡಲಿ. ನೀವು ಈ ವಿಚಾರವಾಗಿ ಹೆಚ್ಚಿನ ತನಿಖೆ ಮಾಡಿ ಮಾಹಿತಿ ಒದಗಿಸಿಕೊಟ್ಟರೆ ನಾವು ಕೂಡ ಮುಂದಿನ ಹೆಜ್ಜೆ ಬಗ್ಗೆ ಗಮನ ಹರಿಸುತ್ತೇವೆ” ಎಂದು ತಿಳಿಸಿದರು.

ಇಬ್ಬರು ಸಂತ್ರಸ್ತೆಯರು ಡಿಜಿ ಅವರಿಗೆ ದೂರು ನೀಡಿರುವ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ. ಮಾಹಿತಿ ಇಲ್ಲದೆ ಮಾತನಾಡಬಾರದು” ಎಂದರು.

ಶಾಸಕರು ಮಂತ್ರಿಗಳು ಉತ್ತರ ಕರ್ನಾಟಕ ಭಾಗದ ಚುನಾವಣೆ ಜವಾಬ್ದಾರಿ:
“ಈ ಮಧ್ಯೆ, ನಮ್ಮ ಎಲ್ಲಾ ಶಾಸಕರು ಮಂತ್ರಿಗಳಿಗೆ ಉತ್ತರ ಕರ್ನಾಟಕ ರಾಜ್ಯಗಳಿಗೆ ಜವಾಬ್ದಾರಿ ನೀಡಿದ್ದೇವೆ. ಎಲ್ಲರೂ ಹೋಗಿ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಲು ನೀಡಿದ್ದೇವೆ. ನಾನು ನಾಳೆಯಿಂದ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಮಾಜಿ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಮಾಧ್ಯಮ ಕಾರ್ಯದರ್ಶಿ ದೀಪಕ್ ತಿಮ್ಮಯ ಉಪಸ್ಥಿತರಿದ್ದರು.

More News

You cannot copy content of this page