ನವದೆಹಲಿ: ಭಾರತದ ನೆರೆಯ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಮತ್ತು ಕ್ರೈಸ್ತರ ಸುರಕ್ಷತೆ ಕುರಿತಂತೆ ಇದೀಗ ಹೊಸ ಚರ್ಚೆ ಆರಂಭವಾಗಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇದೀಗ ಹಿಂದೂ ಹೆಣ್ಣು ಮಕ್ಕಳ ಬಲವಂತದ ಮದುವೆ, ಮತಾಂತರ ಪಿಡುಗಿನ ಬಗ್ಗೆ ಪಾಕಿಸ್ತಾನದ ಸೆನಟರ್ರೊಬ್ಬರು ಧ್ವನಿ ಎತ್ತಿದ್ದಾರೆ.
ಪಾಕಿಸ್ತಾನದ ಹಿಂದೂ ಸೆನಟರ್ ದಾನೇಶ್ ಪಲ್ಯಾನಿ ಈ ಸಂಬಂಧ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ದುಷ್ಕರ್ಮಿಗಳು ಅಪಹರಿಸುತ್ತಿದ್ದಾರೆ. ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ. ಇದರಿಂದ ಅಲ್ಪಸಂಖ್ಯಾತ ಹಿಂದೂ ಸಮುದಾಯದಲ್ಲಿ ಭೀತಿ ಮೂಡಿದೆ ಎಂದು ಸೆನಟರ್ ದಾನೇಶ್ ಪಲ್ಯಾನಿ ಹೇಳಿದ್ದಾರೆ.
ಧರ್ಮ ಗ್ರಂಥಗಳನ್ನು ಉಲ್ಲೇಖಿಸಿ ಮಾತನಾಡಿರುವ ದಾನೇಶ್ ಪಲ್ಯಾನಿ, ವಿಶ್ವದ ಯಾವುದೇ ಧರ್ಮ ಬಲವಂತದ ಮತಾಂತರದ ಬಗ್ಗೆ ಹೇಳಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ಧಾರ್ಮಿಕ ನಂಬಿಕೆಗಳನ್ನು ಮುಂದುವರಿಸುವ ಸ್ವಾತಂತ್ರ್ಯ ನೀಡಿದೆ. ಇಂತಹ ಉದಾತ್ತ ನಂಬಿಕೆ ತತ್ವಗಳಿದ್ದರೂ ಅದಕ್ಕೆ ವಿರುದ್ಧವಾಗಿ ಘಟನೆಗಳು ನಡೆಯುತ್ತಿವೆ. ಇದು ಅತ್ಯಂತ ಕಳವಳಕಾರಿಯಾದ ವಿದ್ಯಮಾನವಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದೂ ಹೆಣ್ಣು ಮಕ್ಕಳ ಗೌರವ ಉಳಿಸಬೇಕಾಗಿದೆ. ಪಾಕಿಸ್ತಾನ ಸರ್ಕಾರ ಈ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳಬೇಕು ಎಂದು ದಾನೇಶ್ ಆಗ್ರಹಿಸಿದ್ದಾರೆ.
ಧರ್ಮದ ಆಧಾರದಲ್ಲಿ 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಯಿತು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು. ಪಾಕಿಸ್ತಾನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ನಿರಾಶ್ರಿತರು ಭಾರತಕ್ಕೆ ಆಗಮಿಸಿದ್ದರು. ಅದೇ ರೀತಿ ಭಾರತದಿಂದ ಲಕ್ಷಾಂತರ ಮಂದಿ ಪಾಕಿಸ್ತಾನಕ್ಕೆ ತೆರಳಿದ್ದರು.
ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಕಳೆದರೂ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಗಮನಾರ್ಹ ಪ್ರಗತಿ ಸಾಧಿಸಿಲ್ಲ