ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪ್ರೈ ಓವರ್ ಕಾಮಗಾರಿ ವೇಳೆಯಲ್ಲಿ ಭಾರಿ ಅವಘಡ ಸಂಭವಿಸಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯ ಮೇಲೆ ಕಬ್ಬಿಣದ ರಾಡ್ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಈಗಷ್ಟೇ ನಡೆದಿದೆ.
ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಭೀರಾಜ್ ಎಂಬುವರು ಕೋರ್ಟ್ ಸರ್ಕಲ್ ಬಳಿ ಬೈಕ್ನಲ್ಲಿ ಫೈ ಓವರ್ ಬ್ರಿಡ್ಜ್ ಕೆಳಗಡೆ ಹೋಗುತ್ತಿದ್ದರು. ಆಗ ಕಬ್ಬಿಣದ ರಾಡ್ ಎಎಸ್ಐ ತಲೆಯ ಮೇಲೆ ಬಿದ್ದ ಪರಿಣಾಮ ಪೊಲೀಸ್ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಆಟೋದಲ್ಲಿ ಕರೆದುಕೊಂಡು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ಕೊಡಿಸಲಾಗುತ್ತಿದೆ. ಸದ್ಯ ಎಎಸ್ಐ ನಬೀರಾಜ್ ಸ್ಥಿತಿ ಗಂಭೀರವಾಗಿದೆ. ದೇಶಪಾಂಡೆ ನಗರದಲ್ಲಿನ ವಿವೇಕಾನಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಅವಘಡ ಸಂಭವಿಸುತ್ತಿದ್ದ ಪ್ರೈ ಓವರ್ ಕಾಮಗಾರಿ ನಡೆಸುತ್ತಿದ್ದ ಕೆಲಸಗಾರರು ಕ್ರೇನ್ ಬಿಟ್ಟು ಓಡಿ ಹೋಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಹುಬ್ಬಳ್ಳಿ ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ನಬೀರಾಜ್ ದಯನ್ನವರ್ ಎಂಟು ತಿಂಗಳುಗಳಲ್ಲಿ ನಿವೃತ್ತಿ ಆಗಲಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.




