ಬೆಂಗಳೂರು: ಸ್ಯಾಂಡಲ್ ವುಡ್ ಸಿನಿಮಾ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡೆರಡು ತನಿಖೆಗೆ ಆದೇಶ ಮಾಡಿದೆ. ಶಿಷ್ಟಾಚಾರ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಪಾತ್ರದ ಬಗ್ಗೆ ತನಿಖೆಗೆ ಆದೇಶಿಸುವುದರ ಜೊತೆಗೆ ಪೊಲೀಸ್ ಸಿಬ್ಬಂದಿ ಕರ್ತವ್ಯ ಲೋಪದ ಬಗ್ಗೆಯೂ ಸಿಐಡಿ ತನಿಖೆಗೆ ಸರ್ಕಾರ ಆದೇಶ ಮಾಡಿದೆ.
ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ರನ್ಯಾ ರಾವ್ ಬಂಧನ ಆಗಿದೆ.ರನ್ಯಾ ರಾವ್ ಪ್ರಕರಣದಲ್ಲಿ ರಾಜಕಾರಣಿ ಗಳ ಹೆಸರೂ ತಳಕು ಹಾಕಿಕೊಂಡಿದೆ.ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಬಂಧನ ಮಾಡಿದ್ದರು.
ಈ ಪ್ರಕರಣದಲ್ಲಿ ರನ್ಯಾ ರಾವ್ ವಿದೇಶಗಳಿಗೆ ಹೋಗುವ ಹಾಗೂ ಬರುವ ಸಂದರ್ಭಗಳಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ಲೋಪದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರಬಹುದಾದ ಸಾಧ್ಯತೆಗಳ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ಸಿಐಡಿ ತನಿಖೆ ನಡೆಸುವ ಬಗ್ಗೆ ಸರ್ಕಾರ ಆದೇಶ ಮಾಡಿದೆ.
ನಟಿ ರನ್ಯಾ ರಾವ್ ವಿದೇಶಿ ಪ್ರಯಾಣಗಳ ಸಂದರ್ಭ ದಲ್ಲಿ ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರಬಹುದಾದ ಸಾಧ್ಯತೆ ಬಗ್ಗೆ ಸತ್ಯಾಸತ್ಯತೆ ಯನ್ನು ತಿಳಿಯಲು ಸಿಐಡಿ ವತಿಯಿಂದ ವಿಚಾರಣೆಗೆ ವಹಿಸಿ ಆದೇಶಿಸಿದೆ.ಸಿಐಡಿ ಸಂಸ್ಥೆಯು ಈ ಪ್ರಕರಣದ ವಿಚಾರಣೆಯನ್ನು ಶೀಘ್ರ ವಾಗಿ ಪೂರ್ಣಗೊಳಿಸಿ, ವಿಚಾರಣಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಏನಿದು ಪ್ರಕರಣ?:
ಸ್ಯಾಂಡಲ್ ವುಡ್ ಸಿನಿಮಾ ನಟಿ ರನ್ಯಾ ರಾವ್ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡುತ್ತಿದೆ.ರನ್ಯಾ ರಾವ್ ಜೊತೆಗೆ ಸಚಿವರಿಬ್ಬರ ಸಂಪರ್ಕ ಇತ್ತು ಎಂಬ ಆರೋಪವೂ ಕೇಳಿ ಬರುತ್ತಿದೆ.
ವಿಧಾನಸಭೆಯಲ್ಲೂ ಶೂನ್ಯ ವೇಳೆಯಲ್ಲಿ ರನ್ಯಾ ರಾವ್ ಪ್ರಕರಣ ಚರ್ಚೆಗೆ ಗ್ರಾಸವಾಗುತ್ತು. ಇನ್ನು ರಾಜಕೀಯವಾಗಿಯೂ ಈ ಪ್ರಕರಣ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.