Mahavir Jayanti 2025: ಜೈನ್ ಯುವ ಸಂಘಟನೆಯಿಂದ ಭಗವಾನ್ ಮಹಾವೀರರ 2624 ನೇ ಜಯಂತಿ

ಬೆಂಗಳೂರು: ಭಗವಾನ್ ಮಹಾವೀರರ 2624 ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ ಏಪ್ರಿಲ್ 10 ರಂದು ಜೈನ್ ಯುವ ಸಂಘಟನೆಯಿಂದ ಕಲ್ಯಾಣ ಮಹೋತ್ಸವವನ್ನು ಆಯೋಜಿಸಿದ್ದು, ಅಹಿಂಸಾ ಮತ್ತು ವಿಶ್ವಶಾಂತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ಭಗವಾನ್ ಮಹಾವೀರರ ಕಲ್ಯಾಣ ಮಹೋತ್ಸವವನ್ನು ಸ್ಮರಣೀಯಗೊಳಿಸಲಾಗುವುದು ಎಂದು ಜೈನ್ ಯುವ ಸಂಘಟನೆಯ ಅಧ್ಯಕ್ಷ ಜೈನ್ ಮಹಾವೀರ್ ಮುನೋತ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂಸಾ ಮತ್ತು ವಿಶ್ವಶಾಂತಿ ಸಮಾವೇಶ ಉದ್ಘಾಟಿಸಲಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತಿತರರು ಭಾಗಿಯಾಗಲಿದ್ದಾರೆ. ಫ್ರೀಡಂ ಪಾರ್ಕ್ ಸಮೀಪದ ಗಾಂಧಿನಗರದ ಕುಂಡಲಪುರದಲ್ಲಿ ಜೈನ ಧರ್ಮದ ಸಂದೇಶ ಹಾಗೂ ಧ್ಯೇಯಗಳನ್ನು ಪಸರಿಸಲು ಈ ಬಾರಿ ಕಲ್ಯಾಣ ಮಹೋತ್ಸವವನ್ನು ಮತ್ತಷ್ಟು ಆಕರ್ಷಣೀಯಗೊಳಿಸಲಾಗುತ್ತಿದೆ. ಮಹಾತ್ಮಾಗಾಂಧೀಜಿ, ಲೋಕಮಾನ್ಯ ತಿಲಕರ ಮೇಲೆಯೂ ಜೈನಧರ್ಮ ವ್ಯಾಪಕ ಪರಿಣಾಮ ಬೀರಿದ್ದು, ಅವರ ಬೋಧನೆಗಳು ಆತ್ಮದ ಅಂದವನ್ನು ಮತ್ತು ಐಕ್ಯತೆಯನ್ನು ಪ್ರತಿಬಿಂಬಿಸುತ್ತವೆ. “ಬದುಕು ಮತ್ತು ಬದುಕಲು ಬಿಡು” ಎಂಬ ಘೋಷವಾಕ್ಯ ಪ್ರಪಂಚದಾದ್ಯಂತ ಅತಿ ಹೆಚ್ಚು ಜನರು ಆಚರಿಸುವಂತೆ ಮಾಡಿದೆ ಎಂದರು.
ಈ ವರ್ಷದ ನಮ್ಮ ಧಾರ್ಮಿಕ ಮತ್ತು ಮಾನವತಾ ಸೇವೆಗಳಲ್ಲಿ ರಕ್ತದಾನ ಶಿಬಿರದ ಮೂಲಕ 500 ಯೂನಿಟ್ ಗಳಿಗಿಂತ ಅಧಿಕ ರಕ್ತ ಸಂಗ್ರಹ. ಉಚಿತ ಕಣ್ಣು ಪರೀಕ್ಷೆ, ಮಧುಮೇಹ, ರಕ್ತದೊತ್ತಡ ಮತ್ತಿತರೆ ಪರೀಕ್ಷೆಗಳನ್ನು ನಡೆಸಿ, ಅಶಕ್ತರಿಗೆ ಆಹಾರ ಪೂರೈಸಲಾಗುವುದು ಎಂದರು.

ಮಧ್ಯಾಹ್ನ 1.21ಕ್ಕೆ ಗುರುಭಗವಂತರಿಂದ ಮಹಾಮಂಗಳೀಕವನ್ನು ನೆರವೇರಿಸಲಾಗುವುದು. ರಾಜ್ಯ ಸಭಾ ಸದಸ್ಯರಾದ ಲಹರ್ ಸಿಂಗ್ ಸಿರೋಹಿಯ, ಸಂಸದರಾದ ಪಿ.ಸಿ. ಮೋಹನ್, ಸಮುದಾಯದ ಮುಖಂಡರಾದ ರಾಕೇಶ್ ಪುನ್ನೀಯ, ಮಾಜಿ ಮಹಾಪೌರರಾದ ಗೌತಮ್ಕುಮಾರ್ ಮಕಾನ, ಚಿಕ್ಕಪೇಟೆಯ ಶ್ರೀ ಆದಿನಾಥ ಜೈನ್ ಟೆಂಪಲ್ ಅಧ್ಯಕ್ಷರಾದ ಗೌತಮ್ ಸೊಲಂಕಿ, ಜೈನ್ ಕಾನ್ಸರೆನ್ಸ್ ಕರ್ನಾಟಕದ ಅಧ್ಯಕ್ಷ ಪ್ರಕಾಶಂದ್ ಭುರಡ್, ತೇರಾಪಂಥ್ ಸಭಾದ ಅಧ್ಯಕ್ಷ ಪಾರಸ್ ಭಂಸಾಲಿ, ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಪ್ರಸ್ಸನ್ನಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜೈನ್ ಯುವ ಸಂಘಟನೆಯ ಕಾರ್ಯದರ್ಶಿ ಜೈನ್ ನೀರಜ್ ಕಟಾರಿಯಾ, ಜೈನ್ ಹಿತೇಶ್ ಕಾಂಕಲಿಯ ಮಾಧ್ಯಮ ಸಂಚಾಲಕ ಚಂದ್ರಶೇಖರಯ್ಯ ಉಪಸ್ಥಿತರಿದ್ದರು

More News

You cannot copy content of this page