ಬೆಂಗಳೂರು: ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದಡಿ (ಎನ್ಐಸಿಡಿಪಿ) ದೇಶದಾದ್ಯಂತ ಅಭಿವೃದ್ಧಿಪಡಿಸುತ್ತಿರುವ 20 ಪಾರ್ಕ್ಗಳು ಕೈಗಾರಿಕೆಗಳಿಗೆ ಅಗತ್ಯವಾಗಿರುವ ಮೂಲಸೌಲಭ್ಯಗಳಿಂದ ಸುಸಜ್ಜಿತವಾಗಿರಲಿದ್ದು, ಕೈಗಾರಿಕಾ ಟೌನ್ಶಿಪ್ಗಳ ಈ ಆದರ್ಶ ಮಾದರಿಯನ್ನು ದಕ್ಷಿಣದ ರಾಜ್ಯ ಸರ್ಕಾರಗಳು ಅಳವಡಿಸಿಕೊಳ್ಳಬೇಕುʼ ಎಂದು ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ (ಡಿಪಿಐಐಟಿ) ಕಾರ್ಯದರ್ಶಿ ಅಮರದೀಪ್ ಸಿಂಗ್ ಭಾಟಿಯಾ ಅವರು ಸಲಹೆ ನೀಡಿದ್ದಾರೆ.
ವಿಕಸಿತ ಭಾರತ್ @2047 ಉಪಕ್ರಮದಡಿ ಶನಿವಾರ ಇಲ್ಲಿ ಏರ್ಪಡಿಸಲಾಗಿದ್ದ ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.
ದೇಶದ ಕೈಗಾರಿಕಾ ಪ್ರಗತಿಯ ಭವಿಷ್ಯದ ಯೋಜನೆ ರೂಪಿಸಲು ಕೈಗಾರಿಕೆ – ಉದ್ದಿಮೆ ವಲಯ, ದಕ್ಷಿಣದ ರಾಜ್ಯ ಸರ್ಕಾರಗಳು ಮತ್ತು ನವೋದ್ಯಮಗಳು ವಿಚಾರ ಮಂಥನ ನಡೆಸಲು ಈ ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನವು ಅವಕಾಶ ಒದಗಿಸಿತ್ತು.
ʼಎನ್ಐಸಿಡಿಸಿ ಅಭಿವೃದ್ಧಿಪಡಿಸುತ್ತಿರುವ ಕೈಗಾರಿಕಾ ಟೌನ್ಶಿಪ್ಗಳಲ್ಲಿ ಬರೀ ರಸ್ತೆಗಳಲ್ಲದೆ, ನೀರು, ವಿದ್ಯುತ್ ಪೂರೈಕೆ, ಒಳಚರಂಡಿ, ಸಾಮಾನ್ಯ ತ್ಯಾಜ್ಯ ನಿರ್ವಹಣಾ ಘಟಕ, ಎಲೆಕ್ಟ್ರಾನಿಕ್ಸ್ ವಲಯದ ಟೆಸ್ಟಿಂಗ್ ಸೇರಿದಂತೆ ಜವಳಿ ಮತ್ತಿತರ ಕೈಗಾರಿಕೆಗಳ ಪ್ರತ್ಯೇಕ ಹಾಗೂ ವಿಶಿಷ್ಟ ಅಗತ್ಯಗಳನ್ನು ಈಡೇರಿಸುವ ಮೂಲಸೌಲಭ್ಯಗಳನ್ನು ಒದಗಿಸಲಾಗುತ್ತಿದೆʼ ಎಂದರು.
ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎನ್. ಸೆಲ್ವಕುಮಾರ್ ಅವರು ಮಾತನಾಡಿ, ಸುಲಲಿತ ಉದ್ಯಮ ನೀತಿಗೆ ಸಂಬಂಧಿಸಿದಂತೆ ರಾಜ್ಯದ ಕೈಗಾರಿಕಾ ನೀತಿಯಲ್ಲಿ ನಿರಂತರವಾಗಿ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಂಡು ಸರಳಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಏಕ ಗವಾಕ್ಷಿ ವ್ಯವಸ್ಥೆಗೆ ಕಾಯಕಲ್ಪ ನೀಡಲಾಗಿದೆʼ ಎಂದು ತಿಳಿಸಿದರು.
ʼಎಲೆಕ್ಟ್ರಾನಿಕ್ ಸಿಟಿ ಅಸೋಸಿಯೇಷನ್ 1000 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿ, ನಿರ್ವಹಿಸುತ್ತಿರುವ ಟೌನ್ಶಿಪ್ ಮಾದರಿ ಯೋಜನೆಯಾಗಿದ್ದು, ಅದನ್ನು ರಾಜ್ಯದಲ್ಲಿ ಎಲ್ಲೆಡೆ ಅಳವಡಿಸಿಕೊಳ್ಳಲಾಗುವುದುʼ ಎಂದು ಭರವಸೆ ನೀಡಿದರು.
ʼಕೈಗಾರಿಕಾ ಪ್ರದೇಶಗಳಲ್ಲಿ ಸಂಗ್ರಹವಾಗುವ ತೆರಿಗೆಯನ್ನು ಸ್ಥಳೀಯ ಸಂಸ್ಥೆಗಳು ಕೈಗಾರಿಕೆಗಳಿಗೆ ಅಗತ್ಯವಾಗಿರುವ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಬಳಸದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ವಿಶೇಷ ಹೂಡಿಕೆ ಪ್ರದೇಶಗಳಲ್ಲಿ (ಎಸ್ಐಆರ್) – ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೇ ( ಕೆಐಎಡಿಬಿ) ಏಪ್ರಿಲ್ನಿಂದ ತೆರಿಗೆ ಸಂಗ್ರಹಿಸಿ ಅದರಲ್ಲಿ ಶೇ 30ರಷ್ಟನ್ನು ಸ್ಥಳೀಯ ಸಂಸ್ಥೆಗಳಿಗೆ ಮರಳಿಸಿ, ಉಳಿದ ಶೇ 70ರಷ್ಟು ಮೊತ್ತವನ್ನು ಈ ʼಎಸ್ಐಆರ್ʼಗಳಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಿದೆ.
ಸಿಐಐ, ಅಸೋಚಾಂ, ಫಿಕ್ಕಿ, ಕಾಸಿಯಾ, ಪೀಣ್ಯ, ದಾಬಸ್ಪೇಟೆ ವೈಟ್ಫೀಲ್ಡ್, ಹಾರೋಹಳ್ಳಿ, ವಸಂತನರಸಾಪುರ ವಾಣಿಜ್ಯೋದ್ಯಮ ಸಂಘಗಳು, ತುಮಕೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಮುಖ್ಯಸ್ಥರು ಉದ್ದಿಮೆದಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ಸಮ್ಮೇಳನದಲ್ಲಿ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಜತ್ ಕುಮಾರ್ ಸೈನಿ, ತೆಲಂಗಾಣದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್, ತಮಿಳುನಾಡಿನ ಹೂಡಿಕೆ ಉತ್ತೇಜನ ಮತ್ತು ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಥಿರು ವಿ ಅರುಣ್ ರಾಯ್, ಪುದುಚೆರಿಯ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ವಿಕ್ರಾಂತ್ ರಾಜಾ, ಕೇರಳದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಪಿಎಂ ಮೊಹಮ್ಮದ್ ಹನೀಶ್, ಆಂಧ್ರಪ್ರದೇಶದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಡಾ. ಎನ್. ಯುವರಾಜ್, ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಆಡಳಿತದ ಕೈಗಾರಿಕೆಗಳ ನಿರ್ದೇಶಕ ಅಜಿತ್ ಆನಂದ್, ಕೈಗಾರಿಕೆ ಇಲಾಖೆ ಆಯಕ್ತರಾದ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಂ.ಮಹೇಶ್ ಅವರು ಭಾಗವಹಿಸಿದ್ದರು.




