ಬೆಂಗಳೂರು- ಹಿಂದೂಯೇತರರ ಬಳಿ ಖರೀದಿ ಮಾಡಬೇಡಿ ಎಂದು ಹಿಂದೂ ಸಂಘಟನೆಗಳು ಕರೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಖರೀದಿ ವಿಚಾರವಾಗಿ ಬೆದರಿಕೆ ಹಾಕಿದ್ರೆ ತಪ್ಪು, ಆದರೆ ಇಂತಹವರ ಬಳಿ ಕೊಂಡುಕೊಳ್ಳಿ ಅಂದರೆ ತಪ್ಪೇನಿದೆ ಎಂದಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಸಹಯೋಗದಲ್ಲಿ ಶಿಕ್ಷಕರ ಸಂಘಗಳ ಪ್ರತಿನಿಧಿಗಳಿಗೆ ‘ಕಲಿಕಾ ಚೇತರಿಕೆ’ ರಾಜ್ಯಮಟ್ಟದ ಕಾರ್ಯಾಗಾರವನ್ನು ಖಾಸಗಿ ಹೋಟಲ್ ನಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.
ಇವತ್ತಿನವರೆಗೂ ಯುಗಾದಿಯನ್ನು ಮಸೀದಿಗಳಲ್ಲಿ ಆಚರಿಸಿದ್ದನ್ನು ನಾನು ನೋಡಿರಲಿಲ್ಲ. ಆದರೆ ಈ ವರ್ಷ ಬೇವು ಬೆಲ್ಲ ಹಂಚಿ ಸಾಮರಸ್ಯ ತೋರಿಸಿದ್ದಾರೆ. ಇದರಿಂದ ಗೊತ್ತಾಗುತ್ತದೆ ಸಾಮರಸ್ಯ ಬರ್ತಾ ಇದೆ ಅಂತ. ಇನ್ನು ಹಿಂದೂಯೇತರರ ಬಳಿ ಹಿಂದೂಗಳ ವ್ಯಾಪಾರ ಮಾಡಬಾರದು ಎಂದು ಸಂಘಟನೆಗಳು ಕರೆ ನೀಡಿರುವುದನ್ನು ಸಚಿವರು ಪರೋಕ್ಷವಾಗಿ ಬೆಂಬಲಿಸಿದರು.
ಈ ಕುರಿತು ಮಾತನಾಡಿದ ಅವರು, ಯಾರೋ ಒಂದಿಷ್ಟು ಜನ ಇಂತವರ ಬಳಿ ಕೊಂಡುಕೊಳ್ಳಿ ಅಂದ್ರೆ ತಪ್ಪೇನಿದೆ. ಅನೇಕ ಕಂಪನಿಗಳು ನಮ್ಮ ಕಂಪನಿ ಪ್ರೊಡೆಕ್ಟ್ ತಗೊಳಿ ಅಂತಾರೆ. ಖರೀದಿ ಮಾಡುವ ವಿಚಾರವಾಗಿ ಬೆದರಿಕೆ ಹಾಕಿದ್ರೆ ತಪ್ಪು. ಆದರೆ ಅವರು ಇಂಥವರ ಬಳಿ ಕೊಂಡುಕೊಳ್ಳಿ ಅಂದ್ರೆ ತಪ್ಪೇನಿದೆ. ಅವರವರ ಇಷ್ಟದಂತೆ ಖರೀದಿ ಮಾಡಬಹುದು. ಜನ ಯಾರ ಬಳಿ ಕೊಂಡು ತಿನ್ನಬೇಕು ಅನ್ಸುತ್ತೋ ಅವರತ್ತಿರ ಕೊಂಡು ತಿಂತಾರೆ. ಸರ್ಕಾರ ಎಲ್ಲಾದರೂ ಹೇಳಿದ್ಯಾ ಇಂತವರ ಬಳಿಯೇ ಕೊಂಡುಕೊಳ್ಳಿ ಎಂಬುದಾಗಿ ಎಂದರು.
ಇನ್ನು ಸಿಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿಟಿ ರವಿಯವರು ಮಂತ್ರಿಯಲ್ಲ ಸರ್ಕಾರದ ಸಚಿವರಲ್ಲ. ನೀವು ಮಾಜಿಮಂತ್ರಿಗಳ ಬಳಿ ಹೋಗಿ ಕೇಳಿದ್ರೆ ಇನ್ನೇನಾಗುತ್ತದೆ. ಈ ಬಗ್ಗೆ ಸರ್ಕಾರ ಏನಾದ್ರೂ ಹೇಳಿದ್ರೆ ದಾಖಲೆ ಕೊಡಿ ಆಗ ಮಾತಾಡ್ತೀನಿ ಎಂದರು.
SSLC ಪರೀಕ್ಷೆಗೆ ಹೆಚ್ಚು ವಿದ್ಯಾರ್ಥಿಗಳ ಗೈರು
ಇನ್ನು ಎಸ್ಎಸ್ಎಲ್ಸಿ ಪರೀಕ್ಷೆ ಗೆ ಹೆಚ್ಚು ಗೈರು ವಿಚಾರವಾಗಿ ಮಾತನಾಡಿ, ಹಿಜಾಬ್ ನಿಂದ ಹೆಚ್ಚು ಗೈರು ಆಗಿಲ್ಲ. ಖಾಸಗೀ ಅಭ್ಯರ್ಥಿಗಳು ಹೆಚ್ಚು ಪರೀಕ್ಷೆಗೆ ಗೈರಾಗಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಪಾಸ್ ಮಾಡ್ತಾರೆ ಅಂತ ಕೆಲವರು ಅಂದು ಕೊಂಡಿದ್ರು. ಆದ್ರೆ ಅದನ್ನ ನಾವು ಮಾಡಲಿಲ್ಲ. ಹೀಗಾಗಿ ಖಾಸಗಿ ಅಭ್ಯರ್ಥಿಗಳು ಹೆಚ್ಚು ಗೈರಾಗಿದ್ದಾರೆ ಅಷ್ಟೆ. ಹಿಜಾಬ್ ವಿಚಾರಕ್ಕೆ ಯಾರು ಗೈರಾಗಿಲ್ಲ ಎಂದರು.