ಬೆಂಗಳೂರು: ಪೆಟ್ರೋಲ್, ಡಿಸೇಲ್, ಎಲ್ ಪಿಜಿ, ವಿದ್ಯಾತ್ ದರ ಏರಿಕೆ ಆಯ್ತು. ಇದೀಗ ಹಾಲು ಕೂಡ ಬಿಸಿಯಾಗಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರೋ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ನಷ್ಟದ ನೆಪವೊಡ್ಡಿ ಹಾಲು ಒಕ್ಕೂಟಗಳು ದರ ಪರಿಷ್ಕರಣೆಗೆ ಕೆಎಂಎಫ್ ನಿಂದ ಸರ್ಕಾರಕ್ಕೆ ಮನವಿ ಮಾಡಿತ್ತು. ಆದ್ರೆ, ಕೊರೊನಾ ಮೂರನೇ ಅಲೆಯ ಭೀತಿಗೆ ಸರ್ಕಾರ ಒಪ್ಪಿಗೆ ಸೂಚಿಸಿರಲಿಲ್ಲ. ಇದೀಗ ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಸಲು ಕೆಎಂಎಫ್ ಸಿದ್ದತೆ ನಡೆಸಿದೆ.
ಹಾಲಿನ ದರ ಏರಿಕೆ ಮಾಡೋಲ್ಲ ಜನರಿಗೆ ತೊಂದರೆ ಕೊಡಲ್ಲ ಎಂದಿದ್ದ ಕೆಎಂಎಫ್, ಇದೀಗ ಒಳಗೊಳಗೆ ಹಾಲಿನ ದರ ಏರಿಸಲು ಸಜ್ಜಾಗಿದೆ. ಪ್ರತಿ ಲೀಟರ್ ಗೆ 2 ರೂನಿಂದ 5ರೂ ವರೆಗೆ ಬೆಲೆ ಏರಿಕೆ ಮಾಡೋದಕ್ಕೆ ಕೆಎಂಎಫ್ ಸ ಸಕಲ ತಯಾರಿ ನಡೆಸಿಕೊಂಡಿದೆ.
ಏಪ್ರಿಲ್ 20 ರಿಂದಲೇ ದರ ಏರಿಕೆ ಮಾಡುವಂತೆ ಕೆಎಮ್ ಎಫ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಇನ್ನೊಂದೆಡೆ ದರ ಹೆಚ್ಚಳ ಮಾಡದಿದ್ದರೆ ಒಕ್ಕೂಟಗಳಿಂದ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿವೆ.
ಹಾಲಿನ ದರ ಪರಿಷ್ಕರಣೆಗೆ ಮುಂದಾಗಿರುವ ಕೆಎಂಎಫ್, ಪ್ರತಿ ಲೀಟರ್ ಗೆ 2 ರೂಪಾಯಿ ಯಿಂದ 5 ರೂಪಾಯಿಯವರೆಗೆ ಹೆಚ್ಚಿಸಲು ಚಿಂತನೆ ನಡೆಸಿದೆ. ರಾಜ್ಯದ 14 ಹಾಲು ಒಕ್ಕೂಟಗಳು ಕೆಎಂಎಫ್ ಮುಂದೆ ಪ್ರತಿ ಲೀಟರ್ ಗೆ 5 ರೂ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಇಟ್ಟಿದೆ. ಹೀಗಾಗಿ ಸಾಧಕ ಬಾದಕಗಳನ್ನ ಪರಿಶೀಲನೆ ಮಾಡಿ ದರ ಏರಿಕೆ ಮಾಡಲು ಕೆಎಂಎಫ್ ಮುಂದಾಗಿದೆ.
ಇದೇ ತಿಂಗಳಿಂದಲೇ ದರ ಏರಿಕೆ ಮಾಡುವಂತೆ ಹಾಲು ಒಕ್ಕೂಟಗಳು ಬಿಗಿಪಟ್ಟು ಹಿಡಿದಿವೆ. ರಾಜ್ಯದ 14 ಹಾಲು ಒಕ್ಕೂಟಗಳು, KMF ಗೆ ಮನವಿ ಮಾಡಿದೆ. ಕಳೆದ 2 ವರ್ಷದಿಂದ ನಂದಿನಿ ಹಾಲಿನ ದರ ಏರಿಕೆ ಮಾಡಿರಲಿಲ್ಲ. ಸದ್ಯ ಇದಿಒಗ ಬೆಲೆ ಏರಿಕೆಯಿಂದ ಸಾಕಷ್ಟು ನಷ್ಟ ಉಂಟಾಗುತ್ತಿದ್ದು, ಶೀಘ್ರವೇ ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಎಂಬ ಒತ್ತಡವನ್ನೂ ಹೇರಲಾಗುತ್ತಿದೆ.
ಇದೇ ತಿಂಗಳ 12 ರಂದು ಸಭೆ ನಡೆಸಲು ಎಲ್ಲ ಹಾಲು ಒಕ್ಕೂಟಗಳ ನಿರ್ಧರಿಸಿವೆ. ಸದ್ಯ ಸಭೆ ಬಳಿಕ ಸಿಎಂ ಬೊಮ್ಮಾಯಿಯವರನ್ನ ಭೇಟಿ ಮಾಡ್ತೀವಿ. ಇಲ್ಲವಾದ್ರೆ, ಪ್ರತಿಭಟನೆ ಮಾಡ್ತೀವಿ ಅಂತ ನಿಗಮಗಳು ಎಚ್ಚರಿಸಿವೆ.
ಇನ್ನೂ ಹಾಲು ಒಕ್ಕೂಟಗಳ ಮನವಿ ಮೇರೆಗೆ ಈಗಾಗ್ಲೇ ದರ ಏರಿಕೆ ಕುರಿತು ಸಿಎಂ ಗಮನಕ್ಕೆ ತರಲಾಗಿದೆ. ಕೋವಿಡ್ ಮೂರನೇ ಅಲೆ ಅಂತ ಸರ್ಕಾರ ಹೆಚ್ಚಳ ಬೇಡ ಅಂತ ಹೇಳಿದೆ. ಮತ್ತೊಮ್ಮೆ ಈ ಕುರಿತು ಅಧ್ಯಕ್ಷರ ಜೊತೆ ಚರ್ಚೆ ಮಾಡ್ತೀವಿ. ಶೀಘ್ರದಲ್ಲೇ ಸಿಎಂ ಭೇಟಿ ಮಾಡ್ತೀವಿ. ಅವ್ರು ಅನುಮತಿ ಕೊಟ್ಟರೆ, 24 ಗಂಟೆಗಳಲ್ಲೇ ಹೊಸ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.