ಹುಕ್ಕೇರಿ : ಕ್ಷೀರ ಭಾಗ್ಯ ಯೋಜನೆ ಹಾಲಿನಲ್ಲಿ ಹಲ್ಲಿ ಬಿದ್ದಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಉಳಾಗಡ್ಡಿ ಖಾನಾಪೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆಸ್ಪತ್ರೆ ಗೆ ದಾಖಲಾದ ಘಟನೆ ಬೆಳಕಿಗೆ ಬಂದಿದೆ.
ಮಕ್ಕಳ ಆರೋಗ್ಯ ವೃದ್ಧಿಗೆ ಸರ್ಕಾರದ ವತಿಯಿಂದ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಹಾಲು ಕೊಡುವ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗ್ತಿದೆ. ಆದ್ರೆ ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳಾಗಡ್ಡಿ ಖಾನಾಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಯಾರಿಸ್ತಿದ್ದ ಹಾಲಿನಲ್ಲಿ ಅಚಾನಕ್ ಆಗಿ ಹಲ್ಲಿ ಬಿದ್ದಿದೆ.
ಹಲ್ಲಿ ಬಿದ್ದ ಹಾಲನ್ನು 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇವಿಸಿದ ಬಳಿಕ ಹಲ್ಲಿ ಬಿದ್ದಿರುವ ಹಾಲಿನ ವಿಷಯ ಶಾಲೆಯ ಮೇಲ್ವಿಚಾರಕರ ಗಮನಕ್ಕೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಮುಂಜಾಗೃತ ಕ್ರಮವಾಗಿ ಮಕ್ಕಳನ್ನೆಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಆರೋಗ್ಯದಲ್ಲಿ ಏರು ಪೇರಾಗುವ ಮುಂಚೆಯೇ ವಿದ್ಯಾರ್ಥಿಗಳನ್ನ ಅಂಬ್ಯುಲೆನ್ಸ್ ಹಾಗೂ ಖಾಸಗಿ ವಾಹನಗಳ ಮೂಲಕ ಸಂಕೇಶ್ವರ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ಕರೆತಂದು ಚಿಕಿತ್ಸೆ ನೀಡಿದ್ದು, ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.