ಕೊಡಗು : ಒಂಟಿ ಸಲಗವೊಂದು ಮಧ್ಯರಾತ್ರಿ ಶಬರಿಮಲೆಗೆ ತೆರಳುತ್ತಿದ್ದವರ ಬಸ್ ಅನ್ನು ತಡೆದಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ದೇವಸ್ಥಾನದ ಬಳಿ ನಡೆದಿದೆ.
ಸೋಮವಾರಪೇಟೆಯಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಗೆ ೨೫ರಿಂದ ೩೦ ಮಂದಿ ಅಯ್ಯಪ್ಪ ಮಾಲಾಧಾರಿಗಳು ಮಿನಿ ಬಸ್ನಲ್ಲಿ ತೆರಳುತ್ತಿದ್ದರು. ಬಸ್ ತಿರುಪತಿ ದೇವಸ್ಥಾನದ ಬಳಿ ರಾತ್ರಿ ಬರುತ್ತಿದ್ದಂತೆ ಏಕಾಏಕಿ ಕಾಡಾನೆ ಎದುರಾಗಿ ಬಸ್ ಬಳಿಗೆ ಬಂದಿದೆ. ಈ ವೇಳೆ ಬಸ್ನಲ್ಲಿದ್ದ ಅಯ್ಯಪ್ಪನ ಭಕ್ತರು ಕಾಡಾನೆ ಹತ್ತಿರ ಬರುತ್ತಿದ್ದಂತೆ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಜೋರಾಗಿ ಕೂಗಿದ್ದಾರೆ.
ಬಳಿಕ ಕಾಡಾನೆ ಬಸ್ ಮುಂಭಾಗ ಹಾಕಲಾಗಿದ್ದ ಹೂವಿನ ಹಾರಗಳನ್ನು ತನ್ನ ಸೊಂಡಿಲಿನಿಂದ ಕಿತ್ತು ತಲೆ ಮೇಲೆ ಹಾಕಿಕೊಂಡಿದೆ. ನಂತರ ಅಯ್ಯಪ್ಪನ ಭಕ್ತರಿಗೆ ಆಶೀರ್ವಾದ ಮಾಡಿ ತನ್ನ ದಾರಿ ಹಿಡಿದಿದೆ.
ಕಾಡಾನೆಯೊಂದು ಏಕಾಏಕಿ ಬಸ್ ಅಡ್ಡಗಟ್ಟಿದ್ದರಿಂದ ಬಸ್ ನಲ್ಲಿದ್ದ ಮಾಲಾಧಾರಿಗಳು ಭಯಭೀತರಾಗಿದ್ದರು. ಆದರೆ ಕಾಡಾನೆ ಏನೂ ಮಾಡದೆ ತನ್ನ ಪಾಡಿಗೆ ತಾನು ಹೊರಟು ಹೋಗಿದ್ದರಿಂದ ಅಯ್ಯಪ್ಪನ ಭಕ್ತರು ನಿಟ್ಟುಸಿರುಬಿಟ್ಟಿದ್ದಾರೆ.
ಭಕ್ತರೊಬ್ಬರು ಕಾಡಾನೆ ಅಯ್ಯಪ್ಪ ಮಾಲಾಧಾರಿಗಳಿಗೆ ಎದುರಾದ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.