ಬೆಂಗಳೂರು : ಐಪಿಎಲ್ ಕ್ರಿಕೆಟ್ ಹಬ್ಬ ಇದೇ ಮಾರ್ಚ್ 22 ರಿಂದ ಆರಂಭವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್ 29 ರಂದು ಪಂದ್ಯ ನಡೆಯಲಿದೆ. ಆದರೆ, ಈ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯಗಳಿಗೆ ಇದೀಗ ಜಲಕಂಟಕ ಸಮಸ್ಯೆ ಎದುರಾಗಿದೆ.
ಹೈವೋಲ್ಟೇಜ್ ಪಂದ್ಯಗಳನ್ನು ನೋಡಲು ಅಭಿಮಾನಿಗಳು ಕಾತರರಾಗದ್ದಾರೆ. ಸ್ಟೇಡಿಯಂನಲ್ಲಿ ಕುಳಿತು ತಮ್ಮ ನೆಚ್ಚಿನ ತಂಡ ಮತ್ತು ಆಟಗಾರನಿಗೆ ಪ್ರೋತ್ಸಾಹಿಸಲು ಮುಂದಾಗಿರುವವರಿಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿರುವ ಅಭಿಯಾನ ಸಮಸ್ಯೆ ತರಲಿದೆ.
ಬೆಂಗಳೂರಿನಲ್ಲಿ ಎದುರಾಗಿರುವ ಭೀಕರ ಬರದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂಬ ಕೂಗು ಇದೀಗ ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ. ಇದರಿಂದ ಭೀಕರ ಬರದ ಪರಿಣಾಮ ಐಪಿಎಲ್ ಪಂದ್ಯದ ಮೇಲೆ ಆಗಲಿದೆಯಾ ಎಂಬ ಅನುಮಾನ ಇದೀಗ ಕಾಡತೊಡಗಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಗೃಹ ಸಚಿವರಿಗೆ ಬೆಂಗಳೂರು ಪಂದ್ಯಗಳನ್ನು ಶಿಫ್ಟ್ ಮಾಡಿ ಎಂಬ ಒತ್ತಡ ಹೇರಲಾಗುತ್ತಿದೆ. ಒಂದು ಮ್ಯಾಚ್ ನಡೆಯಲು ಲಕ್ಷಾಂತರ ಲೀಟರ್ ನೀರು ಬೇಕಾಗುತ್ತದೆ. ಸಿಲಿಕಾನ್ ಸಿಟಿಯಲ್ಲಿ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವಾಗ ಮೂರು ಗಂಟೆಯ ಈ ಪಂದ್ಯಗಳಿಗೆ ಲಕ್ಷಾಂತರ ಲೀಟರ್ ನೀರು ವ್ಯಯಿಸುವುದು ಎಷ್ಟು ಸೂಕ್ತ ಎಂಬ ಜಿಜ್ಞಾಸೆ ಸಾಮಾಜಿಕ ಜಾಲತಾಣದಲ್ಲಿ ಎದ್ದಿದೆ.
2016ರಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಇದ್ದ ಕಾರಣ ಅಲ್ಲಿನ ಪಂದ್ಯಗಳನ್ನು ಬೇರೆಡೆಗೆ ಶಿಫ್ಚ್ ಮಾಡಲಾಗಿತ್ತು. ಬಾಂಬೆ ಹೈಕೋರ್ಟ್ ನಿರ್ದೇಶದ ಮೇರೆಗೆ ಬೆಂಗಳೂರಿಗೆ 7 ಪಂದ್ಯಗಳು ಶಿಫ್ಟ್ ಆಗಿದ್ದವು. ಅದರಂತೆಯೇ ಇದೀಗ ಬೆಂಗಳೂರಿನಲ್ಲಿ ಬರಗಾಲ ಇರುವುದರಿಂದ ಪಂದ್ಯಗಳನ್ನು ಬೇರೆಡೆಗೆ ಶಿಫ್ಟ್ ಮಾಡಿ ಎಂಬ ಒತ್ತಡ ಜೋರಾಗಿಯೇ ಕೇಳಿಬಂದಿದೆ. ಈ ಸಂಬಂಧ ಕೆಲವರು ಹೈಕೋರ್ಟ್ ಮೊರೆಹೋಗಲು ನಿರ್ಧರಿಸಿದ್ದು, ಪಿಎಎಲ್ ಸಲ್ಲಿಕೆಯಾಗಲಿದೆ ಎಂದು ತಿಳಿದುಬಂದಿದೆ.