ಬೆಂಗಳೂರು : ರಾಜ್ಯದಲ್ಲಿನ 5, 8,9 ಮತ್ತು 11 ನೇ ತರಗತಿಗೆ ಬೋರ್ಡ್ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದ್ದು, ಬೋರ್ಡ್ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಹಾಗೆಯೇ ಸ್ಥಗಿತಗೊಂಡಿರುವ ಪರೀಕ್ಷೆಗಳನ್ನು ಮುಂದುವರೆಸಲು ಆದೇಶಿಸಿದೆ.
ನ್ಯಾಯಮೂರ್ತಿ ಕೆ ಸೋಮಶೇಖರ್ ಮತ್ತು ನ್ಯಾಯಮೂರ್ತಿ ಕೆ ರಾಜೇಶ್ ರೈ ಅವರುಗಳಿದ್ದ ಹೈಕೋರ್ಟ್ ನ ವಿಭಾಗೀಯ ಪೀಠ ಈ ಆದೇಶ ನೀಡಿದೆ. 5, 8 ಮತ್ತು 9 ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸೋಮವಾರದಿಂದಲೇ ನಡೆಸುವ ಬಗ್ಗೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ಈಗಾಗಲೇ ಐದನೇ ತರಗತಿಯ ನಾಲ್ಕು ವಿಷಯಗಳ ಪರೀಕ್ಷೆ ಮುಗಿದಿದೆ. 8 ಮತ್ತು 9 ನೇ ತರಗತಿಗಳ ಎರಡು ವಿಷಯಗಳ ಪರೀಕ್ಷೆ ಮುಗಿದಿದೆ. ಉಳಿದಂತೆ ಸೋಮವಾರದಿಂದ ಪರೀಕ್ಷೆ ಮತ್ತೆ ನಡೆಯಲಿದೆ.
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ 5, 8, 9 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಕುರಿತು ಅನಿಶ್ಚಿತತೆ ಮುಂದುವರೆದಿತ್ತು. ಪರೀಕ್ಷೆ ರದ್ದಾಗುತ್ತಿದ್ದಂತೆಯೇ ಮುಂದೇನು ಎಂಬುದರ ಕುರಿತು ಗೊಂದಲ ಉಂಟಾಗಿತ್ತು. ಮಕ್ಕಳು ಮತ್ತು ಪೋಷಕರು ಆತಂಕದಲ್ಲಿದ್ದರು. ಇದೀಗ ಹೈಕೋರ್ಟ್ ತೀರ್ಪು ಎಲ್ಲರ ಗೊಂದಲಕ್ಕೆ ತೆರೆ ಎಳೆದಿದೆ.