Search

ಧರಣಿ ಮಂಡಲ ಮಧ್ಯದೊಳಗೆ ಸಿನಿಮಾಗೆ ಧ್ವನಿ‌ ನೀಡಿದ ಶರಣ್: ವಾಟರ್ ಮೇಲೆ ವಾಕಿಂಗ್ ಹೊಂಟವ್ನೆ ಪಪ್ಪಿ ಸಾಂಗ್ ರಿಲೀಸ್

ಬೆಂಗಳೂರು : ಟೈಟಲ್ ಮೂಲಕವೇ ಸಿನಿ ಪ್ರಿಯರಿಗೆ ಹತ್ತಿರವಾಗಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾದ ಮಗದೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿ ಸಾಕಷ್ಟು ಗಮನ ಸೆಳೆಯುತ್ತಿದೆ. ನಟ ಶರಣ್ ಹಾಗೂ ವಾಸುಕಿ ವೈಭವ್ ದನಿಯಾಗಿರುವ ವಾಟರ್ ಮೇಲೆ ವಾಕಿಂಗ್ ಹೊಂಟವ್ನೆ ಪಪ್ಪಿ ಸಾಂಗ್ ಬಿಡುಗಡೆಯಾಗಿದೆ. ನಟ ನೀನಾಸಂ ಸತೀಶ್ ಈ ಹಾಡನ್ನು ಮೆಚ್ಚಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಎಸ್ ಕೆ ಎಸ್ ಕ್ಯಾಚಿ ಲಿರಿಕ್ಸ್ ಇರುವ ಈ ಹಾಡು ಪಡ್ಡೆ ಹುಡುಗರಿಗೆ ಸಖತ್ ಲೈಕ್ ಆಗ್ತಿದೆ. ಮ್ಯೂಸಿಕ್ ಕೂಡ ಹೊಸತನದಿಂದ ಕೂಡಿದ್ದು, ರಘು ಆರ್ ಜೆ ಕೋರಿಯೋಗ್ರಫಿ ಈ ಹಾಡಿಗಿದೆ. ಈ ಮೊದಲು ವಿಜಯ್ ಪ್ರಕಾಶ್ ಹಾಡಿರುವ ‘ಮಾತು ಮಾತಲ್ಲೇ’ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಸಿನಿ ಪ್ರೇಮಿಗಳ ಮನಗೆದ್ದಿತ್ತು. ಇದೀಗ ಎರಡನೇ ಹಾಡು ಕೂಡ ಕ್ರಿಯೇಟಿವ್ ಆಗಿ ಮೂಡಿಬಂದಿದೆ.

ನವೆಂಬರ್ 25ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಸಿದ್ದತೆ

‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರ ಬಾಕ್ಸಿಂಗ್ ನಲ್ಲಿ ಆಸಕ್ತಿ ಇರುವ ಹುಡುಗನ ಸುತ್ತ ಹೆಣೆದ ಕಥೆ. ತನ್ನ ಕನಸಿನ ಬೆನ್ನತ್ತಿದ ಹುಡುಗನ ಜೀವನದಲ್ಲಿ ನಡೆಯುವ ಘಟನೆ ಆತನ ಬದುಕಿಗೆ ಯಾವೆಲ್ಲ ತಿರುವು ನೀಡುತ್ತೆ ಅನ್ನೋದು ಚಿತ್ರದ ಒನ್ ಲೈನ್ ಕಹಾನಿ. ಕ್ರೈಂ ಥ್ರಿಲ್ಲರ್ ಡ್ರಾಮಾ ಕಥಾಹಂದರ ಒಳಗೊಂಡ ಈ ಚಿತ್ರವನ್ನು ಪೂರಿ ಜಗನ್ನಾಥ್ ಜೊತೆ ಕೆಲಸ ಮಾಡಿ ಅನುಭವ ಇರುವ ಶ್ರೀಧರ್ ಶಿಕಾರಿಪುರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಗುಳ್ಟು ಖ್ಯಾತಿಯ ನವೀನ್ ಶಂಕರ್, ಐಶಾನಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಒಳಗೊಂಡ ತಾರಾಗಣವಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ. ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂಕಾರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು. ವೀರೇಂದ್ರ ಕಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ನವೆಂಬರ್ 25ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣಲಿದೆ.

More News

You cannot copy content of this page