ಬೆಂಗಳೂರು : ಉತ್ತರ ಕರ್ನಾಟಕದ ರೈತರ ಗ್ರಾಮೀಣ ಸೊಗಡಿನ ಹಬ್ಬಗಳಲ್ಲಿ ಒಂದಾಗಿರುವ ಮಣ್ಣೆತ್ತಿನ ಅಮಾವಾಸ್ಯೆ ಜಿಲ್ಲೆಯಾದ್ಯಂತ ಆಚರಿಸಲಾಗುತ್ತದೆ.
ರೈತನ ಬದುಕಿನ ಅವಿಭಾಜ್ಯ ಅಂಗವಾಗಿರುವ ಎತ್ತುಗಳನ್ನು ಮಣ್ಣಿನ ರೂಪದಲ್ಲಿ ಪೂಜಿಸುವ ಹಬ್ಬವೇ ಈ ಮಣ್ಣೆತ್ತಿನ ಅಮಾವಾಸ್ಯೆ. ಪ್ರತಿವರ್ಷ ಮುಂಗಾರು ಹಂಗಾಮಿನಲ್ಲಿ ರೈತನ ಬೆನ್ನೆಲುಬಾಗಿ ಜಮೀನು ಹದಗೊಳಿಸುವಲ್ಲಿ ದುಡಿಯುವ ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬ ಸಹ ಇದಾಗಿದೆ.
ಈ ದಿನ ರೈತರು ತಮ್ಮ ಜಮೀನುಗಳಿಗೆ ಹೋಗಿ ಅಥವಾ ಕೆರೆ ಕಟ್ಟಿಗೆ ಹೋಗಿ ಅಲ್ಲಿಂದ ತಂದ ಮಣ್ಣಿನಿಂದ ಜೋಡಿ ಎತ್ತುಗಳನ್ನು ಮಣ್ಣಿನಲ್ಲಿ ತಯಾರಿಸುತ್ತಾರೆ. ಮಣ್ಣೆತ್ತಿನ ಜೋಡಿಗೆ ಗ್ವಾಂದಲಿಗಳನ್ನು (ಎತ್ತುಗಳು ಮೇವು ತಿನ್ನುವ ಸ್ಥಳ) ಸಹ ನಿರ್ಮಿಸಲಾಗುತ್ತದೆ. ಮಣ್ಣಿನ ಬಸವಣ್ಣಗಳನ್ನು ದೇವರ ಜಗಲಿ ಮೇಲೆ ಇಟ್ಟು ಪೂಜೆ ಸಲ್ಲಿಸುವ ಮೂಲಕ ರೈತ ಕುಟುಂಬಗಳು ಎತ್ತುಗಳಿಗೆ ದೈವಿ ಸ್ವರೂಪ ನೀಡುವುದು ಸಂಪ್ರದಾಯವಾಗಿದೆ.
ಇನ್ನು ಅಮಾವಾಸ್ಯೆಯಂದು ಬಸವಣ್ಣನಿಗೆ ತಯಾರಿಸಿದ ಕಡುಬು, ಅಕ್ಕಿಪಾಯಸ ಸೇರಿದಂತೆ ವಿವಿಧ ಆಹಾರ ಸೇರಿದಂತೆ ನೈವೇದ್ಯ ಹಿಡಿಯಲಾಗುತ್ತದೆ. ಈ ಸಂದರ್ಭದಲ್ಲಿ ರೈತಾಪಿ ಪರಿವಾರಗಳು ತಮ್ಮ ಎತ್ತುಗಳಿಗೆ ಯಾವುದೇ ರೋಗರುಜಿನಗಳು ಬಾರದಂತೆ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಇನ್ನು ಕೆಲ ರೈತರು ಒಂದು ದಿನ, ಅಥವಾ ಕೆಲ ರೈತರು ಐದು ದಿನಗಳ ಕಾಲ ಬಸವಣ್ಣನ ಮೂರ್ತಿಗಳನ್ನು ಪೂಜಿಸಿದ ನಂತರ ನದಿ ಮೂಲಗಳಿಗೆ ತೆರಳಿ ವಿಸರ್ಜನೆ ಮಾಡಲಾಗುತ್ತದೆ.