ಬೆಂಗಳೂರು : ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ನಡೆಯಲಿದೆ. ದೇಶದಲ್ಲಿ ಮಧ್ಯರಾತ್ರಿ ಭಾಗಶ ಚಂದ್ರಗ್ರಹಣ ಗೋಚರಿಸಲಿದೆ. ದೇಶದಲ್ಲಿ ಇಂದು ಮಧ್ಯರಾತ್ರಿ 1.05 ಕ್ಕೆ ಆರಂಭವಾಗುವ ಚಂದ್ರಗ್ರಹಣ 2.24 ಕ್ಕೆ ಅಂತ್ಯಗೊಳ್ಳಲಿದೆ.
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ನಾನ್ ದೇಗುಲಗಳಲ್ಲಿ ಸಂಜೆಯ ಮಹಾಪೂಜೆಯ ಸಮಯವನ್ನು ಬದಲಾವಣೆ ಮಾಡಲಾಗಿದ್ದು, ಅನೇಕ ದೇಗುಲಗಳು ಬಂದ್ ಆಗಲಿವೆ. ಇನ್ನು ಕೆಲವೆಡೆ ಗ್ರಹಣ ಸಮಯದಲ್ಲಿ ಭಕ್ತರಿಗೆ ವಿಶೇಷ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ.
ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ದರ್ಶನವನ್ನು ಎಂಟು ಗಂಟೆಗಳ ಕಾಲ ರದ್ದು ಮಾಡಲಾಗಿದೆ. ಇಂದು ಸಂಜೆ 7 ಗಂಟೆಯಿಂದ ನಾಳೆ ಬೆಳಗ್ಗಿನ ಜಾವ 3.15ರವರೆಗೆ ದೇವಸ್ಥಾನದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಪ್ರತಿನಿತ್ಯ ಲಕ್ಷಾಂತರ ಭಕ್ತಾಧಿಗಳು ದೇಗುಲಕ್ಕೆ ಆಗಮಿಸಿ ತದೇವರ ದರ್ಶನ ಪಡೆಯುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮುಂಚಿತವಾಗಿ ಈ ವಿಚಾರವನ್ನು ತಿಳಿಸಿದ್ದು, ಭಕ್ತಾಧಿಗಳು ಬರಿಗೈಯಲ್ಲಿ ಹಿಂದಿರುಗಬಾರದು ಎಂದು ತಿಳಿಸಿದೆ.
ಮೈಸೂರಿನ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಇಂದು ಸಂಜೆಯಿಂದ ಬಂದ್ ಮಾಡಲಾಗುವುದು. ನಾಳೆ ಬೆಳಗ್ಗೆ 7.30ಕ್ಕೆ ಮತ್ತೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.